ಒಳಮೀಸಲಾತಿ ವಿರೋಧಿಸಿ ಬಂಜಾರ ಸ್ವಾಮೀಜಿ ಆತ್ಮಹತ್ಯೆ ಯತ್ನ – ಸಿಎಂ ಕ್ಷೇತ್ರದಲ್ಲೇ ಅನಾಹುತ!

ಒಳಮೀಸಲಾತಿ ವಿರೋಧಿಸಿ ಬಂಜಾರ ಸ್ವಾಮೀಜಿ ಆತ್ಮಹತ್ಯೆ ಯತ್ನ – ಸಿಎಂ ಕ್ಷೇತ್ರದಲ್ಲೇ ಅನಾಹುತ!

ರಾಜ್ಯದಲ್ಲಿ ಒಳಮೀಸಲಾತಿ ಕಿಚ್ಚು ಆರುವ ಲಕ್ಷಣಗಳೇ ಕಾಣುತ್ತಿಲ್ಲ. ಒಂದಿಲ್ಲೊಂದು ಭಾಗಗಳಲ್ಲಿ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಇದೀಗ ಒಳಮೀಸಲಾತಿ ಜಾರಿ ವಿರೋಧಿಸಿ ಸ್ವಾಮೀಜಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅದೂ ಕೂಡ ಸಿಎಂ ಬಸವರಾಜ ಬೊಮ್ಮಾಯಿ ಸ್ವಕ್ಷೇತ್ರ ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಈ ಘಟನೆ ನಡೆದಿದೆ.

ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ತಾಲೂಕು ಕಚೇರಿಯಲ್ಲಿ ಬಂಜಾರ ಸಮುದಾಯದ ಸ್ವಾಮೀಜಿ ತಿಪ್ಪೇಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಂಬೇಡ್ಕತ್‌ ಪ್ರತಿಮೆ ಬಳಿ ಬಂದು ತಮ್ಮ ಕಾವಿ ವಸ್ತ್ರದ ಶಾಲಿನಿಂದಲೇ ನೇಣು ಬಿಗಿದುಕೊಳ್ಳಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದಿಂದ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಹೆಚ್ಚಳ ಮಾಡಿದ ನಂತರ ಕೆಲವೊಂದು ದಲಿತ ವರ್ಗಗಳಿಗೆ ಒಳಮೀಸಲಾತಿಯನ್ನು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಒಳಮೀಸಲಾತಿಯನ್ನು ವಿರೋಧಿಸಿ ರಾಜ್ಯಾದ್ಯಂತ ಬಂಜಾರ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ : ಚುನಾವಣೆಗೆ ಸಜ್ಜಾದ ಪಿಎಸ್ಐ ಅಕ್ರಮದ ಕಿಂಗ್ ಪಿನ್ – ಜನಾರ್ಧನ ರೆಡ್ಡಿ ಪಕ್ಷದಿಂದ ರುದ್ರರೌಡ ಪಾಟೀಲ್ ಸ್ಪರ್ಧೆ?

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಗುಂಡೂರು ಗ್ರಾಮದ ಬಂಜಾರ ಸಮುದಾಯದ ತಿಪ್ಪೇಸ್ವಾಮಿ ಸ್ವಾಮೀಜಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗುಂಡೂರು ಗ್ರಾಮದಲ್ಲಿ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಮೆಟ್ಟಿಲುಗಳನ್ನು ನಿರ್ಮಿಸಿ ಎತ್ತರದ ವೇದಿಕೆಯನ್ನು ನಿರ್ಮಿಸಲಾಗಿದೆ. ಈ ವೇದಿಕೆಯ ಮೇಲೆ ಹತ್ತಿದ  ಸ್ವಾಮೀಜಿ ಅಂಬೇಡ್ಕರ್‌ ಪ್ರತಿಮೆ ಬಳಿಯೇ ತಮ್ಮ ಕಾವಿ ವಸ್ತ್ರ ಶಲ್ಯದಿಂದ ನೇಣು ಕುಣಿಕೆ ತಯಾರಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ರಾಜ್ಯ ಸರ್ಕಾರ ಘೋಷಿಸಿರುವ ಒಳಮೀಸಲಾತಿ ವಿರೋಧಿಸಿ ಆತ್ಮಹತ್ಯೆಗೆ ಯತ್ನ ಮಾಡಿದ  ಸ್ವಾಮೀಜಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನು ಸ್ವಾಮೀಜಿ ಅಂಬೇಡ್ಕರ್‌ ಪ್ರತಿಮೆ ಬಳಿ ಹೋಗುವುದನ್ನು ನೋಡಿ ನಮಸ್ಕರಿಸಲು ಹೋಗುತ್ತಿದ್ದಾರೆ ಎಂದು ತಿಳಿದುಕೊಂಡಿದ್ದಾರೆ. ಆದರೆ, ಅಲ್ಲಿ ಹೋದವರೇ ತಮ್ಮ ಕಾವಿ ವಸ್ತ್ರವನ್ನು ಮೆಟ್ಟಿಲುಗಳು ಇರುವ ಕಬ್ಬಿಣದ ಸರಳಿಗೆ ಸುತ್ತಿ ಕುತ್ತಿಗೆಗೆ ನೇಣು ಹಾಕಿಕೊಳ್ಳಲು ಕುಣಿಕೆ ಮಾಡಿಕೊಂಡಿದ್ದಾರೆ. ನಂತರ ಮೆಟ್ಟಿಲಿನಿಂದ ಕೆಳಗೆ ಹಾರಿದ್ದಾರೆ. ಅವರು ಹಾರುವುದನ್ನು ನೋಡಿದ ಪ್ರತಿಭಟನಾ ನಿರತರು ಕೂಡಲೇ ಸ್ವಾಮೀಜಿಯನ್ನು ಹಿಡಿದುಕೊಂಡು ರಕ್ಷಣೆ ಮಾಡಿದ್ದಾರೆ. ನಂತರ ಅವರ ಕುತ್ತಿಗೆಗೆ ಬಿಗಿಯಾಗಿದ್ದ ನೇಣು ಕುಣಿಕೆಯನ್ನು ಬಿಚ್ಚಿ ರಕ್ಷಣೆ ಮಾಡಿ ಕೆಳಗಿಳಿಸಿದ್ದಾರೆ.

ಇನ್ನು ಘಟನೆಯಿಂದ ತೀವ್ರ ಅಸ್ವಸ್ಥಗೊಂಡಿದ್ದ ತಿಪ್ಪೇಸ್ವಾಮಿ ಸ್ವಾಮೀಜಿಯನ್ನು ಕೂಡಲೇ ಆಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದೆ. ಶಿಗ್ಗಾಂವಿ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಸ್ವಾಮಿಜಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಸ್ವಾಮೀಜಿಯನ್ನು ತಪಾಸಣೆ ಮಾಡಿದ ವೈದ್ಯರು ಗಂಭೀರ ಸಮಸ್ಯೆ ಉಂಟಾಗಿಲ್ಲ, ತಕ್ಷಣವೇ ಅವರನ್ನು ರಕ್ಷಣೆ ಮಾಡಿದ್ದರಿಂದ ಪ್ರಾಣಾಪಾಯ ಇಲ್ಲವೆಂದು ತಿಳಿಸಿದ್ದಾರೆ. ಇನ್ನು ಒಳಮೀಸಲಾತಿ ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದವರನ್ನು ಪೊಲೀಸರು ಚದುರಿಸಿದ್ದಾರೆ.

ಒಳಮೀಸಲಾತಿ ವಿರೋಧಿಸಿ ಶಿಕಾರಿಪುರದಲ್ಲಿ ಮಾ.27ರಂದು ಬಂಜಾರ ಸಮುದಾಯದಿಂದ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಪ್ರತಿಭಟನೆ ತಾರಕಕ್ಕೇರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿ ಕಲ್ಲೆಸೆದಿದ್ದರು. ಬಳಿಕ ಲಾಠಿ ಚಾರ್ಜ್ ಕೂಡ ಮಾಡಲಾಗಿತ್ತು.

suddiyaana