ಬಂಗ್ಲೆಗುಡ್ಡದಲ್ಲಿ ಸಿಕ್ಕ ಮತ್ತೊಂದು ಅಸ್ಥಿಪಂಜರದ ಗುರುತು ಪತ್ತೆ – 2013ರಿಂದ ನಾಪತ್ತೆಯಾದ ಈತ ಯಾರು?

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಅಕ್ರಮವಾಗಿ ಹೂತು ಹಾಕಿದ್ದೇನೆ ಎಂದು ಚಿನ್ನಯ್ಯ ನೀಡಿದ್ದ ಹೇಳಿಕೆ ಇತ್ತೀಚೆಗೆ ಭಾರಿ ಸಂಚಲನ ಸೃಷ್ಟಿಸಿತ್ತು . ಈಗಾಗಲೇ ಚಿನ್ನಯ್ಯನ ಹೇಳಿಕೆ ಸುಳ್ಳು ಎನ್ನುವುದು ಸಾಬೀತಾಗಿದ್ದು, ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಇದರ ಜತೆಗೆ ಬಂಗ್ಲೆಗುಡ್ಡದ ಮೇಲ್ಭಾಗದಲ್ಲಿ ಇತ್ತೀಚೆಗೆ ಸಿಕ್ಕ ಮತ್ತೊಂದು ಮಾನವ ಅವಶೇಷ, ಅಸ್ಥಿ ಪಂಜರದ ರಹಸ್ಯ ಕೂಡ ಬಯಲಾಗಿದೆ. ಮೃತ ವ್ಯಕ್ತಿಯ ಡ್ರೈವಿಂಗ್ ಲೈಸನ್ಸ್ನ ಆಧಾರದಲ್ಲಿ ಆತನ ಗುರುತು ಪತ್ತೆಹಚ್ಚಲಾಗಿದ್ದು, ಸಂಬಂಧಿಕರ ವಿಚಾರಣೆ ನಡೆಯುತ್ತಿದೆ.
ಇದನ್ನೂ ಓದಿ: ಬಿಜೆಪಿ ಶಾಸಕ ಸುರೇಶ್ ಕುಮಾರ್ ತಾಯಿಯ ನೇತ್ರ, ದೇಹದಾನ – ಸಾವಿನಲ್ಲೂ ಸುಶೀಲಮ್ಮ ಪಾಠಇದೀಗ ಗುರುತು ಪತ್ತೆಯಾದ ವ್ಯಕ್ತಿ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಆದಿಶೇಷ ನಾರಾಯಣ ಎಂದು ಮೂಲಗಳು ತಿಳಿಸಿವೆ. ಇವರು 2013ರಿಂದ ನಾಪತ್ತೆಯಾಗಿದ್ದರು. ಆದರೆ ಈ ಬಗ್ಗೆ ಕುಟುಂಬಸ್ಥರು ದೂರು ನೀಡಿರಲಿಲ್ಲ. ಬಾರ್ನಲ್ಲಿ ಕ್ಯಾಶಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಇವರ ಅಸ್ಥಿ ಪಂಜರ ಇತ್ತೀಚೆಗೆ ಬಂಗ್ಲೆಗುಡ್ಡದಲ್ಲಿ ಲಭಿಸಿತ್ತು. ಇದೀಗ ಆದಿಶೇಷ ಅವರ ಕುಟುಂಬಸ್ಥರನ್ನು ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಧರ್ಮಸ್ಥಳದ ಸಮೀಪದ ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ಮಾನವ ಅವಶೇಷ ಕಂಡಿದ್ದಾಗಿ ಸೌಜನ್ಯಾ ಮಾವ ವಿಠ್ಠಲ ಗೌಡ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಸ್ಐಟಿ ತಂಡ 2 ತಂಡಗಳಾಗಿ 13 ಎಕ್ರೆ ವ್ಯಾಪ್ತಿಯ ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ 2 ದಿನ ಶೋಧ ಕಾರ್ಯ ನಡೆಸಿತ್ತು. ಈ ವೇಳೆ ಮಾನವನ ಬುರುಡೆ, 7 ಅಸ್ಥಿಪಂಜರದ ಜತೆಗೆ ಒಂದು ಐಡಿ ಕಾರ್ಡ್ ಸಿಕ್ಕಿತ್ತು. ಬಳಿಕ ಐಡಿ ಯಾರದ್ದೆನ್ನುವ ವಿಚಾರ ಬಯಲಾಗಿತ್ತು. ಯು.ಬಿ.ಅಯ್ಯಪ್ಪ (70) ಎಂಬುವರ ಐಡಿ ಕಾರ್ಡ್ ಇದು ಎನ್ನುವುದು ಗೊತ್ತಾಗಿತ್ತು. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದ ನಿವಾಸಿ ಅಯ್ಯಪ್ಪ 2017ರಲ್ಲಿ ನಾಪತ್ತೆಯಾಗಿದ್ದರು. ಅಯ್ಯಪ್ಪ ಅವರ ಐಡಿಯೊಂದಿಗೆ ಎಸ್ಐಟಿ ತಂಡಕ್ಕೆ ಆದಿಶೇಷ ಅವರ ಡಿಎಲ್ ಕೂಡ ಲಭಿಸಿತ್ತು. ಈ ಮೂಲಕ ಮತ್ತೊಂದು ಅಸ್ಥಿಪಂಜರದ ರಹಸ್ಯ ಬಯಲಾಗಿದೆ. ಉತ್ಖನನದ ವೇಳೆ ಆದಿಶೇಷ ಅವರ ಡಿಎಲ್ ಸಿಕ್ಕಿತ್ತು ಎನ್ನಲಾಗಿದೆ.

ನೋಡಿರಿ

