ಸಾವಿನ ಎಕ್ಸ್‌ಪ್ರೆಸ್ ವೇ ಆಯ್ತಾ ಮೈಸೂರು – ಬೆಂಗಳೂರು ದಶಪಥ ಹೆದ್ದಾರಿ? – ದುರಂತಗಳ ಹಿಂದಿದೆ ಸಾಲು ಸಾಲು ಕಾರಣ

ಸಾವಿನ ಎಕ್ಸ್‌ಪ್ರೆಸ್ ವೇ ಆಯ್ತಾ ಮೈಸೂರು – ಬೆಂಗಳೂರು ದಶಪಥ ಹೆದ್ದಾರಿ? – ದುರಂತಗಳ ಹಿಂದಿದೆ ಸಾಲು ಸಾಲು ಕಾರಣ

 ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್ ಹೈವೇ ಈಗ ಡೆತ್ ವೇ ಆಗಿದೆಯಾ? ಸಮಯ ತಗ್ಗಿಸುವ ಮಹತ್ವಾಕಾಂಕ್ಷೆಯಿಟ್ಟುಕೊಂಡು ಶುರುಮಾಡಿರುವ ದಶಪಥ ರಸ್ತೆ ಸಾವಿನ ಮನೆಗೆ ನೇರ ದಾರಿ ತೋರಿಸುತ್ತಿದೆಯಾ ಎಂಬ ಪ್ರಶ್ನೆ ಎದುರಾಗಿದೆ. ಯಾಕೆಂದರೆ, ದಶಪಥ ರಸ್ತೆಯಲ್ಲಿ ಸಂಚಾರ ಆರಂಭವಾಗಿ ಇನ್ನು ಕೆಲವೇ ತಿಂಗಳುಗಳು ಮಾತ್ರ ಆಗಿರುವುದು. ಆಗಲೇ 849 ರಸ್ತೆ ಅಪಘಾತಗಳು ಸಂಭವಿಸಿವೆ. ಸಾವಿನ ಸಂಖ್ಯೆ 155ಕ್ಕೂ ಹೆಚ್ಚು. ಸಾವಿನಲ್ಲೂ ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್ ಹೈವೇ ಶತಕ ಭಾರಿಸಿ ಮುನ್ನುಗ್ಗುತ್ತಿದೆ ಎಂಬ ನೋವಿನ ವಿಚಾರ ನೀವು ತಿಳಿದುಕೊಳ್ಳಲೇಬೇಕು.

4 ಗಂಟೆಗಳ ಬೆಂಗಳೂರು-ಮೈಸೂರು ನಡುವಿನ ಪ್ರಯಾಣ ಸಮಯದಲ್ಲಿ 75 ನಿಮಿಷಗಳಿಗೆ ಕಡಿಮೆ ಮಾಡುವ ಉದ್ದೇಶದೊಂದಿಗೆ ಈ ಎಕ್ಸ್‌ಪ್ರೆಸ್ ವೇ ಆರಂಭಗೊಂಡಿತ್ತು. 2022ರ ಸೆಪ್ಟೆಂಬರ್ ಮೊದಲ ವಾರದಿಂದ ಹೆದ್ದಾರಿಯಲ್ಲಿ ಸಂಚಾರ ಆರಂಭಿಸಲಾಗಿತ್ತು. ಅಂದಿನಿಂದ ಇಲ್ಲಿಯವರೆಗೆ 849 ರಸ್ತೆ ಅಪಘಾತಗಳು ಸಂಭವಿಸಿವೆ. 155 ಮಂದಿ ಸಾವಿಗೀಡಾಗಿದ್ದಾರೆ. 213 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಇನ್ನೂ ಒಂದು ನೋವಿನ ಸಂಗತಿ ಏನೆಂದರೆ, ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿಯೇ ಇದುವರೆಗೆ 279 ಅಪಘಾತಗಳು ಸಂಭವಿಸಿವೆ. ಇದರಲ್ಲಿ  100 ಮಂದಿ ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ : ಜಸ್ಟೀಸ್ ಫಾರ್ ನಿಖಿತಾ ಅಭಿಯಾನಕ್ಕೆ ವ್ಯಾಪಕ ಬೆಂಬಲ – ಉಡುಪಿಯಲ್ಲಿ ಎಬಿವಿಪಿ ಸಂಘಟನೆಯಿಂದ ಬೃಹತ್ ಪ್ರತಿಭಟನೆ

ರಾಮನಗರ ಹಾಗೂ ಚನ್ನಪಟ್ಟಣ ನಡುವೆ 55.50 ಕಿಲೋಮೀಟರ್ ನಷ್ಟಿರುವ ಬೈಪಾಸ್ ರಸ್ತೆಯಲ್ಲಿಯೇ ಹೆಚ್ಚು ಅಪಘಾತಗಳು ಸಂಭವಿಸಿವೆ. ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತಗಳಲ್ಲಿ ಹೆಚ್ಚಿನ ಪ್ರಕರಣ ಈ ಬೈಪಾಸ್ ರಸ್ತೆಯಲ್ಲೇ ಸಂಭವಿಸಿದೆ. ಎಕ್ಸ್‌ಪ್ರೆಸ್ ವೇನಲ್ಲಿ ವೇಗಮಿತಿ ಇಲ್ಲದಿರುವುದು, ವಾಹನಗಳು ಲೈನ್ ನಿಯಮವನ್ನು ಪಾಲಿಸದೇ ಇರುವುದು, ಪದೇ ಪದೆ ವಾಹನಗಳು ಲೈನ್ ಕ್ರಾಸ್ ಮಾಡುವುದು ಅಪಘಾತಕ್ಕೆ ಮುಖ್ಯ ಕಾರಣವಾಗಿದೆ. ಅಲ್ಲದೇ ಬೈಪಾಸ್ ರಸ್ತೆಗಳಲ್ಲಿ ಪ್ರಯಾಣಿಕರಿಗೆ ಸೂಚನಾ ಫಲಕ ಇಲ್ಲದಿರುವುದು. ತುರ್ತು ಸಂದರ್ಭದಲ್ಲಿ ಅಂಬುಲೆನ್ಸ್ ಸೇವೆ, ತುರ್ತು ಚಿಕಿತ್ಸಾ ವ್ಯವಸ್ಥೆ ಲಭ್ಯವಿಲ್ಲದಿರೋದು ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.

ಎಕ್ಸ್‌ಪ್ರೆಸ್ ವೇನಲ್ಲಿ ವೇಗಮಿತಿ ಇಲ್ಲ, ಲೈನ್ ಕ್ರಾಸ್ ನಿಯಮ ಪಾಲಿಸುವುದಿಲ್ಲ. ಎಕ್ಸ್‌ಪ್ರೆಸ್ ಹೈವೇ ಬೈಪಾಸ್‌ನಲ್ಲಿ 120-160 ಕಿ.ಮೀ ವೇಗದಲ್ಲಿ ಸಂಚಾರ. ಬೈಪಾಸ್ ರಸ್ತೆಯಲ್ಲಿ ಸವಾರರಿಗೆ ಸೂಚನಾ ಫಲಕ ಇಲ್ಲ. ಹೆದ್ದಾರಿಗೆ ಅಳವಡಿಸಿದ ತಂತಿಬೇಲಿ ಅಲ್ಲಲ್ಲಿ ತುಂಡಾಗಿರುವುದರಿಂದ ವಾಹನಗಳ ನಿಲುಗಡೆ. ಸೂಚನಾ ಫಲಕ, ಸ್ಪೀಡ್ ಲಿಮಿಟ್ ಸೆನ್ಸಾರ್‌ಗಳ ಅಳವಡಿಕೆ ಇಲ್ಲದಿರುವುದೇ ಪ್ರಮುಖ ಕಾರಣ.

ದಶಪಥ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿರುವ ಬಗ್ಗೆ ಪೊಲೀಸ್ ಇಲಾಖೆ ಕೂಡಾ ಹಲವು ಮುಂಜಾಗ್ರತಾ ಕ್ರಮವಹಿಸಿದೆ. ಈಗಾಗಲೇ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಹೈವೆ ಪರಿಶೀಲನೆ ನಡೆಸಿ ಹಲವು ಬ್ಲಾಕ್ ಸ್ಪಾಟ್‌ಗಳನ್ನ ಗುರುತು ಮಾಡಿದೆ. ಅಲ್ಲದೇ ಕೆಲವೆಡೆ ಅವೈಜ್ಞಾನಿಕ ಕಾಮಗಾರಿ ಇರುವುದನ್ನ ಸರಿಪಡಿಸಲು ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಿದೆ. ಅಲ್ಲದೇ ಸೂಚನಾ ಫಲಕ, ಸ್ಪೀಡ್ ಲಿಮಿಟ್ ಸೆನ್ಸಾರ್‌ಗಳ ಅಳವಡಿಕೆ ಸೇರಿ ಹಲವು ನ್ಯೂನತೆ ಸರಿಪಡಿಸುವಂತೆ ತಿಳಿಸಲಾಗಿದೆ. ಅಲ್ಲದೇ ಹೆದ್ದಾರಿಯಲ್ಲಿ ವಾಹನ ಸವಾರರಿಗೆ ರೋಡ್ ಸೇಫ್ಟಿ ಬಗ್ಗೆಯೂ ಅರಿವು ಮೂಡಿಸಲು ಪೊಲೀಸ್ ಇಲಾಖೆ ಮುಂದಾಗಿದೆ.

 

suddiyaana