‘ನಿನ್ನ ಗಂಡ ಬದುಕಿದ್ದಾನೆ ತಾನೇ, ಹಣೆಗೆ ಬೊಟ್ಟು ಇಟ್ಕೋ’ – ಮಹಿಳೆ ಮುಂದೆ ನಾಲಗೆ ಹರಿಬಿಟ್ಟ ಬಿಜೆಪಿ ಸಂಸದ!

‘ನಿನ್ನ ಗಂಡ ಬದುಕಿದ್ದಾನೆ ತಾನೇ, ಹಣೆಗೆ ಬೊಟ್ಟು ಇಟ್ಕೋ’ – ಮಹಿಳೆ ಮುಂದೆ ನಾಲಗೆ ಹರಿಬಿಟ್ಟ ಬಿಜೆಪಿ ಸಂಸದ!

ನಿನ್ನೆ ಮಹಿಳಾ ದಿನಾಚರಣೆ. ಮಹಿಳೆಯರಿಗಾಗೇ ಅಲ್ಲಿ ಮೇಳ ಆಯೋಜನೆಗೊಳಿಸಲಾಗಿತ್ತು. ಪುರುಷರಷ್ಟೇ ಸರಿಸಮನಾಗಿ ಸಂಸಾರದ ನೊಗ ಹೊತ್ತಿದ್ದ ಹೆಣ್ಮಕ್ಕಳೆಲ್ಲಾ ಸ್ಟಾಲ್​ಗಳನ್ನ ಹಾಕಿ ವ್ಯಾಪಾರ ಮಾಡ್ತಿದ್ರು. ಆದ್ರೆ ಮೇಳ ಉದ್ಘಾಟನೆ ಮಾಡಲು ಬಂದಿದ್ದ ಸಂಸದರು ಅಲ್ಲಿ ಹೀರೋ ಥರ ಪೋಸ್ ಕೊಡೋಕೆ ಹೋಗಿ ತಮ್ಮ ಎಲುಬಿಲ್ಲದ ನಾಲಗೆಯನ್ನ ಹರಿಬಿಟ್ಟಿದ್ದಾರೆ.

ಕೋಲಾರ ಜಿಲ್ಲೆ ಮುಳಬಾಗಿಲು ಪಟ್ಟಣದ ಮತ್ಯಾಲಪೇಟೆಯ ಚೆನ್ನಯ್ಯ ರಂಗಮಂದಿರದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲಾಗಿತ್ತು. ಮೇಳವನ್ನ ಸಂಸದ ಎಸ್.ಮುನಿಸ್ವಾಮಿ ಉದ್ಘಾಟನೆ ಮಾಡಿದ್ರು. ಇಷ್ಟೇ ಆಗಿದ್ರೆ ಸಂಸದರು ಬಂದ್ರು ಉದ್ಘಾಟನೆ ಮಾಡಿದ್ರು ಅಂತಾ ಎಲ್ಲಾ ಸುಮ್ನೇ ಆಗ್ತಿದ್ರು. ಆದ್ರೆ ಎಂಪಿ ಸಾಹೇಬ್ರು ಮೇಳದಲ್ಲಿ ವ್ಯಾಪಾರ ಮಾಡ್ತಿದ್ದ ಮಹಿಳೆ ಮೇಲೆ ಪೌರುಷ ತೋರಿದ್ದಾರೆ.

ಇದನ್ನೂ ಓದಿ : 120 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ರೆಡಿ – ಫಸ್ಟ್ ಲಿಸ್ಟ್ ನಲ್ಲಿ ಯಾರಿಗೆಲ್ಲಾ ಅವಕಾಶ..?

ಮಳಿಗೆ ಮುಂದೆ ತಮ್ಮ ಪಟಾಲಂ ಜೊತೆ ಬಂದು ನಿಂತ ಮುನಿಸ್ವಾಮಿ ಹಣೆಗೆ ಕುಂಕುಮ ಇಟ್ಟಿಲ್ಲ ಅನ್ನೋದನ್ನೇ ದೊಡ್ಡ ಅಪರಾಧ ಎನ್ನುವಂತೆ ರಂಪಾಟ ಮಾಡಿದ್ದಾರೆ.. ‘ಏನಮ್ಮ‌ ನಿನ್ನ ಹೆಸರು.. ಹಣೆಗೆ ಕುಂಕುಮ ಯಾಕಿಟ್ಟಿಲ್ಲಾ.. ಕಾಸು ಕೊಟ್ಟು ಬಲವಂತವಾಗಿ ಮತಾಂತರ ಮಾಡಿದ್ದಾರೆ ಅಲ್ವ ನಿಂಗೆ. ವೈಷ್ಣವಿ ಅಂತ ಅಂಗಡಿ ಹೆಸರು ಯಾಕಿಟ್ಟುಕೊಂಡಿದ್ದೀಯಾ, ಯಾರೋ ಕಾಸು ಕೊಡ್ತಾರೆ ಅಂತ ನೀನು ಸುಜಾತ ಅನ್ನೋ ಹೆಸರು ಇಟ್ಟುಕೊಂಡಿದ್ದೀಯ. ಬೊಟ್ಟು ಇಟ್ಕೋ ಮೊದಲು. ಏ ಕೊಡಮ್ಮ ಆಯಮ್ಮನಿಗೆ ಬೊಟ್ಟು. ಗಂಡ ಬದುಕಿದ್ದಾನೆ ತಾನೇ.. ಕಾಮನ್ ಸೆನ್ಸ್ ಇಲ್ಲ ನಿಂಗೆ.. ತಂದೆ ಹೆಸರು ಬದಲಾಯಿಸ್ತಿಯಾ ನೀನು.. ಅದನ್ನೆಲ್ಲ‌ ಇಟ್ಕೋಳ್ಳೊದಿಕ್ಕೆ ಯೋಗ್ಯತೆ ಇಲ್ಲ ನಿನಗೆ ಎಂದು ತಮ್ಮ ಬಾಯಿಗೆ ಬಂದಂತೆ ಮಾತಾಡಿದ್ದಾರೆ.

ಸಂಸದರ ಸಿಟ್ಟು ಕಂಡು ಬೇರೆ ಕಾರಣ ಇರಬಹುದು ಬಿಡಪ್ಪ ಎಂದು ಶಾಸಕ ಶ್ರೀನಿವಾಸಗೌಡ ಸಮಾಧಾನ ಪಡಿಸಲು ಯತ್ನಿಸಿದ್ರೂ ಸಂಸದ ಮುನಿಸ್ವಾಮಿ ಸುಮ್ಮನಾಗಿಲ್ಲ. ವಿಧಾನಪರಿಷತ್ ಸದಸ್ಯ ಗೋವಿಂದರಾಜು ಮಾತನ್ನೂ ಕೇಳದೆ ಮುನಿಸ್ವಾಮಿ ಪೌರುಷ ತೋರಿಸಿದ್ದಾರೆ. ಪಾಪ ಸಂಸದರ ಸಿಟ್ಟಿಗೆ ಮಹಿಳೆಗೆ ಏನ್ ಮಾತನಾಡಬೇಕು ಅನ್ನೋದು ಗೊತ್ತಾಗದೆ ಪೇಚಿಗೆ ಸಿಲುಕಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು, ಸಂಸದ ಮುನಿಸ್ವಾಮಿ ನಡೆಗೆ ಭಾರೀ ವಿರೋಧ ವ್ಯಕ್ತವಾಗಿದೆ.

suddiyaana