ವಿಘ್ನಗಳು ದೂರವಾಗಬೇಕಾ? – ಬುಧವಾರ ವಿಘ್ನೇಶ್ವರನನ್ನ ಹೀಗೆ ಪೂಜೆ ಮಾಡಿ

ವಿಘ್ನಗಳು ದೂರವಾಗಬೇಕಾ? – ಬುಧವಾರ ವಿಘ್ನೇಶ್ವರನನ್ನ ಹೀಗೆ ಪೂಜೆ ಮಾಡಿ

ಹಿಂದೂ ಧರ್ಮದಲ್ಲಿ ಅತ್ಯಂತ ಹೆಚ್ಚು ಪೂಜಿಸಲ್ಪಡುವ ದೇವರಲ್ಲಿ ವಿಘ್ನೇಶ್ವರನಾದ ಗಣೇಶನಿಗೆ ವಿಶೇಷ ಸ್ಥಾನವಿದೆ. ಪ್ರತಿದಿನವೂ ಗಣಪತಿಯನ್ನು ಸ್ಮರಿಸಿ ಪೂಜಿಸುವ ಸಂಪ್ರದಾಯವಿದ್ದರೂ, ಬುಧವಾರದ ಪೂಜೆಗೆ ವಿಶೇಷ ಮಹತ್ವವಿದೆ. ಏಕೆಂದರೆ ಈ ದಿನ ಗಣೇಶನಿಗೆ ಪ್ರಿಯವಾದ ದಿನ ಎಂಬುದು ಪುರಾಣಿಕ ನಂಬಿಕೆ. ಬುಧವಾರ ಗಣೇಶ ಪೂಜೆಯನ್ನು ಮಾಡುವುದರಿಂದ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಶುಭಫಲಗಳು ದೊರೆಯುತ್ತವೆ ಎಂದು ನಂಬಲಾಗುತ್ತದೆ.

ಅಲ್ಲದೇ ಬುಧವಾರ ಗಣೇಶನನ್ನು ಪೂಜಿಸುವುದರಿಂದ ಕಾರ್ಯದಲ್ಲಿನ ವಿಘ್ನಗಳು ದೂರವಾಗುತ್ತವೆ, ಸಂಕಷ್ಟಗಳು ನಿವಾರಣೆಯಾಗುತ್ತವೆ ಎನ್ನುವ ನಂಬಿಕೆ ಇದೆ. ವಿಘ್ನನಿವಾರಕನಾದ ಗಣಪತಿಯನ್ನು ಒಲಿಸಿಕೊಳ್ಳಲು ಜ್ಯೋತಿಷ್ಯ ಶಾಸ್ತ್ರ  ಪ್ರಕಾರ ಬುಧವಾರ ಪಾಲಿಸಬೇಕಾದ ಕೆಲವು ಮುಖ್ಯ ನಿಯಮಗಳನ್ನು ತಿಳಿದುಕೊಳ್ಳೋಣ.

ಇದನ್ನೂ ಓದಿ: ಲಾಸ್ ಏಂಜಲೀಸ್‌ನಲ್ಲಿ ರಾಮಾಯಣ ಟೀಸರ್ ರಿಲೀಸ್ – ರಾಮನ ಪಾತ್ರ ಕಂಡು ವಿದೇಶಿ ವೀಕ್ಷಕರು ಭಾವುಕ

ಗಣೇಶನ ಹೆಸರಿನಲ್ಲಿ ಉಪವಾಸ ವ್ರತ

ಗಣಪತಿಯ ಅನುಗ್ರಹ ಪಡೆಯಲು ಪೂಜೆಯ ಜತೆಗೆ ಉಪವಾಸ ವ್ರತಕ್ಕೂ ವಿಶೇಷ ಮಹತ್ವವಿದೆ. ನೀವು ಗಣೇಶನಿಗಾಗಿ ವ್ರತ ಆಚರಿಸಲು ಬಯಸಿದರೆ, ಯಾವುದೇ ತಿಂಗಳ ಶುಕ್ಲ ಪಕ್ಷದ ಬುಧವಾರದಿಂದ ವ್ರತ ಆರಂಭಿಸುವುದು ಶ್ರೇಷ್ಠ. ವ್ರತದ ದಿನ ಉಪ್ಪು ಸೇರಿಸಿದ ಆಹಾರವನ್ನು ಸೇವಿಸಬಾರದು. ಜತೆಗೆ ಚಿಕ್ಕ ಮಕ್ಕಳಿಗೆ ನೋವು ನೀಡದಂತೆ, ಶಾಂತ ಮನಸ್ಸಿನಿಂದ ದಿನವನ್ನು ಕಳೆಯಬೇಕು. ಈ ವ್ರತವನ್ನು 7, 11 ಅಥವಾ 21 ಬುಧವಾರಗಳವರೆಗೆ ಆಚರಿಸಬಹುದು.

ಗಣಪತಿಗೆ ನೈವೇದ್ಯ ಅರ್ಪಣೆ

ಬುಧವಾರ ಗಣೇಶನ ಪೂಜೆ ಮುಗಿದ ನಂತರ ಆತನಿಗೆ ಇಷ್ಟವಾದ ನೈವೇದ್ಯವನ್ನು ಸಮರ್ಪಿಸಬೇಕು. ಮೋದಕ, ಕಡಲೆ ಹಿಟ್ಟಿನ ಲಡ್ಡುಗಳು ಗಣಪತಿಗೆ ಅತ್ಯಂತ ಪ್ರಿಯವಾದವು. ಪೂಜೆಯ ನಂತರ ಈ ನೈವೇದ್ಯವನ್ನು ಪ್ರಸಾದವಾಗಿ ಎಲ್ಲರಿಗೂ ಹಂಚುವುದು ಶುಭ ತರುತ್ತದೆ.

ಗಣಪತಿಯನ್ನು ಸ್ಮರಿಸುವ ನಾಮಗಳು

ಪೂಜೆಯ ಸಮಯದಲ್ಲಿ ಗಣೇಶನ ವಿವಿಧ ನಾಮಗಳನ್ನು ಸ್ಮರಿಸುವುದು ವಿಶೇಷ ಫಲ ನೀಡುತ್ತದೆ. ವಿನಾಯಕ, ಗಣೇಶ, ಏಕದಂತ, ಲಂಬೋದರ, ಗಜಾನನ, ವಿಶ್ವೇಶ್ವರ ಇತ್ಯಾದಿ ಹೆಸರುಗಳನ್ನು ಜಪಿಸುವುದರಿಂದ ಮಂತ್ರಪಠಿಸಿದಷ್ಟೇ ಲಾಭ ದೊರೆಯುತ್ತದೆ ಎಂದು ಹೇಳಲಾಗುತ್ತದೆ.

ಪಠಿಸಬೇಕಾದ ಗಣಪತಿ ಮಂತ್ರಗಳು

ಜೀವನದಲ್ಲಿನ ಅಡೆತಡೆಗಳನ್ನು ನಿವಾರಿಸಿ ಯಶಸ್ಸು ಪಡೆಯಲು ಕೆಳಗಿನ ಗಣಪತಿ ಮಂತ್ರಗಳನ್ನು ಭಕ್ತಿಯಿಂದ ಪಠಿಸಬಹುದು:

ಓಂ ಗಣ ಗಣಪತಯೇ ನಮಃ
ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭಃ
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಃ
ಓಂ ಏಕದಂತಾಯ ವಿದ್ಮಹೇ
ವಕ್ರತುಂಡಾಯ ಧೀಮಹಿ
ತನ್ನೋ ದಂತಿಃ ಪ್ರಚೋದಯಾತ್
ಓಂ ಶ್ರೀ ಗಣ ಸೌಮ್ಯಾಯ ಗಣಪತಯೇ
ವರ ವರದ ಸರ್ವಜನಂ ಮೇ ವಶಮಾನಾಯ ಸ್ವಾಹಾ 

Kishor KV