ಇಂದು ಮೊದಲ ಆಷಾಢ ಶುಕ್ರವಾರ – ಚಾಮುಂಡಿ ಬೆಟ್ಟದಲ್ಲಿ ನಾಡದೇವತೆಗೆ ವಿಶೇಷ ಪೂಜೆ

ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ಸಂಭ್ರಮ ಕಳೆಗಟ್ಟಿದೆ, ಇವತ್ತು ವಿಶೇಷ ಪೂಜೆ ನಡೆಯುತ್ತಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ಮೊದಲ ಶುಕ್ರವಾರದಂದು ನಾಡದೇವತೆ ಶ್ರೀ ಚಾಮುಂಡೇಶ್ವರಿಯ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಹೀಗಾಗಿ ಈ ದಿನ ದೇವಿಗೆ ವಿಶೇಷ ಅಲಂಕಾರ ಮತ್ತು ಪೂಜೆಗಳನ್ನು ಮಾಡಲಾಗುತ್ತದೆ. ಭಕ್ತರಿಗೆ ತೊಂದರೆ ಆಗದಂತೆ ಜಿಲ್ಲಾಡಳಿತ ಕೂಡ ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದೆ.
ಮೆಟ್ಟಿಲುಗಳ ಮೂಲಕ ಚಾಮುಂಡಿಬೆಟ್ಟ ಏರುವ ಭಕ್ತರಿಗಾಗಿ ಮೂರು ಕಡೆ ತಾತ್ಕಾಲಿಕ ತಂಗುದಾಣ, ಶೌಚಗೃಹ, ಕುಡಿಯುವ ನೀರು, ಬಾದಾಮಿ ಹಾಲು ಹಾಗೂ ಬಿಸ್ಕೆಟ್ ವಿತರಣೆಯ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಪ್ರತಿ ಶುಕ್ರವಾರ ಈ ಮಂತ್ರ ಪಠಿಸಿ
ಸಚಿವರು, ಶಾಸಕರು, ನ್ಯಾಯಾಧೀಶರು ಹಾಗೂ ಅವರ ಕುಟುಂಬವರ ವಾಹನಗಳಿಗೆ ಮಾತ್ರ ಬೆಟ್ಟದ ಮೇಲಕ್ಕೆ ತೆರಳಲು ಅನುಮತಿಸಲಾಗಿದೆ. ಶಿಫಾರಸು ಪತ್ರ ಹೊಂದಿರುವವರ ವಾಹನಗಳಿಗೂ ಪ್ರವೇಶವಿಲ್ಲ. ಲಲಿತ ಮಹಲ್ ಬಳಿ ವಾಹನ ನಿಲುಗಡೆ ಮಾಡಿ, ಅಲ್ಲಿಂದ ಉಚಿತ ಸರಕಾರಿ ಬಸ್ಗಳ ಮೂಲಕವೇ ಬೆಟ್ಟಕ್ಕೆ ತೆರಳಬೇಕು. ಸರದಿ ಸಾಲಿನಲ್ಲಿ ಸಾಗುವ ಭಕ್ತರಿಗೆ ಬಿಸಿಲಿನಿಂದ ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ಪೆಂಡಾಲ್ ವ್ಯವಸ್ಥೆ ಮಾಡಲಾಗಿದೆ.
ಇಂದು ಮೊದಲನೇ ಆಷಾಢ ಶುಕ್ರವಾರ ಆಗಿರುವುದರಿಂದ ಭಕ್ತರಿಗೆ ಪ್ರಸಾದವಾಗಿ ವಿತರಿಸಲು ಒಂದು ವಾರದಿಂದ ಲಾಡು ತಯಾರಿಸಲಾಗಿದೆ. ನುರಿತ ಬಾಣಸಿಗರ ತಂಡ ಕಳೆದ ಹಲವು ದಿನಗಳಿಂದ ನಿತ್ಯ 30 ಸಾವಿರ ಲಾಡುಗಳನ್ನು ತಯಾರಿಸಿದೆ.

ನೋಡಿರಿ

