ವಿರಾಟ್ ಕೊಹ್ಲಿ ಅರೆಸ್ಟ್ ಟ್ರೆಂಡ್ – 18 ವರ್ಷ.. 1 ಟೀಂ.. ಗೆದ್ದಿದ್ದೇ ತಪ್ಪಾ?
RCBಯೇ ಆತ್ಮ ಎಂದಿದ್ದಕ್ಕೆ ಶಿಕ್ಷೆನಾ?

ವಿರಾಟ್ ಕೊಹ್ಲಿ ಅರೆಸ್ಟ್ ಟ್ರೆಂಡ್ – 18 ವರ್ಷ.. 1 ಟೀಂ.. ಗೆದ್ದಿದ್ದೇ ತಪ್ಪಾ?RCBಯೇ ಆತ್ಮ ಎಂದಿದ್ದಕ್ಕೆ ಶಿಕ್ಷೆನಾ?

ಜೂನ್ 3.. ಆರ್​ಸಿಬಿ ಪಾಲಿಗೆ ಐತಿಹಾಸಿಕ ದಿನ.. ಜೂನ್ 4.. ಇಡೀ ಕ್ರಿಕೆಟ್ ಲೋಕದ ಪಾಲಿಗೇ ಕರಾಳ ದಿನ.  ವಿಜೃಂಭಣೆಯ ವಿಜಯೋತ್ಸವಕ್ಕೆ ಸಜ್ಜಾಗಿದ್ದ ಅಭಿಮಾನಿಗಳ ದುರಂತ ಸಾವು ಕಪ್ ಗೆದ್ದ ಖುಷಿಯನ್ನೇ ಮರೆಸಿದೆ. ಅಮಾಯಕ ಜೀವಗಳನ್ನ ಬಲಿ ಪಡೆದ ನಮ್ಮದೇ ವ್ಯವಸ್ಥೆ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಈ ಸಾವು ನೋವುಗಳ ಹೊಣೆ ಹೊರೋಕೆ ಕೆಸರೆರಚಾಟ ನಡೆಯುತ್ತಿರುವಾಗ್ಲೇ ಮತ್ತೊಂದಷ್ಟು ಜನ ಧುತ್ತನೆ ಎದ್ದು ಕೂತಿದ್ದಾರೆ. ಅದೂ ಕೂಡ ವಿರಾಟ್ ಕೊಹ್ಲಿಯವ್ರನ್ನ ಅರೆಸ್ಟ್ ಮಾಡಿ ಅಂತಾ.

ಇದನ್ನೂ ಓದಿ : ಕಪ್ ತಂದ ಕೊಹ್ಲಿಗೆ ಸಾವಿನ ಸ್ವಾಗತ.. ಚಿನ್ನಸ್ವಾಮಿಯಲ್ಲಿ ಕಿಂಗ್ ಕನಸು ಭಗ್ನ – ಫ್ಯಾನ್ಸ್ ಗಾಗಿ ನಿವೃತ್ತಿ ಘೋಷಿಸ್ತಾರಾ?

18 ವರ್ಷಗಳ ಕಸನು.. 18 ವರ್ಷಗಳ ಪರಿಶ್ರಮ.. 18 ವರ್ಷಗಳ ಬಳಿಕ ಕೈಸೇರಿದ್ದ ಕಪ್ 18 ಗಂಟೆಯೊಳಗೇ ಕೊಚ್ಚಿ ಹೋಗಿತ್ತು. ಆರ್​ಸಿಬಿಯ ಚೊಚ್ಚಲ ಕಪ್​ಗೆ ಮೆತ್ತಿಕೊಂಡಂತ ರಕ್ತ ಮತ್ತೆಂದೂ ಮಾಸೋದಿಲ್ಲ. ಅದೆಲ್ಲಕ್ಕಿಂತ ಹೆಚ್ಚಾಗಿ ಈಗ ಆರ್​ಸಿಬಿ ಟ್ರೋಫಿ ಗೆಲ್ತು ಅನ್ನೋದಕ್ಕಿಂತ ಜಾಸ್ತಿ ಆ ಹನ್ನೊಂದು ಜನರ ಸಾವೇ ಕಣ್ಮುಂದೆ ಬರ್ತಿದೆ. ಇದಕ್ಕಾಗೇನಾ ಇಷ್ಟು ವರ್ಷ ಕಾದಿದ್ದು ಅನ್ನೋ ಹತಾಶೆ ಮೂಡ್ತಿದೆ. 11 ಜನರ ಸಾವಿನಿಂದ ಇಡೀ ಕರುನಾಡೇ ಸೂತಕವಾಗಿರೋ ಹೊತ್ತಲ್ಲಿ ವಿರಾಟ್ ಕೊಹ್ಲಿ ವಿರುದ್ಧ ಬಹುದೊಡ್ಡ ಟ್ರೆಂಡ್ ಶುರುವಾಗಿದೆ.

ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಸಂಭವಿಸಿ 11 ಜನ ಪ್ರಾಣ ಬಿಟ್ಟಿದ್ದಾರೆ. ಸರ್ಕಾರ  ಈ ದುರಂತಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸ್ ಅಧಿಕಾರಿಗಳಿಗೆ ಸಸ್ಪೆಂಡ್ ಶಿಕ್ಷೆ ಕೊಟ್ಟಿದೆ. ಹಾಗೇ ಆರ್‌ಸಿಬಿ ಮಾರ್ಕೆಟಿಂಗ್‌ ಮುಖ್ಯಸ್ಥ ನಿಖಿಲ್‌ ಸೋಸಲೆ ಸೇರಿದಂತೆ ಹಲವರನ್ನ ಬಂಧಿಸಿದೆ. ಇದ್ರ ನಡುವೆ ಒಂದಷ್ಟು ಮಂದಿ ಸೋಶಿಯಲ್ ಮೀಡಿಯಾದಲ್ಲಿ ಅರೆಸ್ಟ್ ಕೊಹ್ಲಿ ಹ್ಯಾಷ್​ಟ್ಯಾಗ್​ನಲ್ಲಿ ಟ್ರೆಂಡ್ ಶುರು ಮಾಡಿದ್ದಾರೆ. ಬೆಂಗಳೂರಿನಲ್ಲಿ ಇಷ್ಟೆಲ್ಲಾ ಅವಾಂತರಗಳಿಗೆ ವಿರಾಟ್ ಕೊಹ್ಲಿಯೇ ನೇರ ಕಾರಣ. ಅವ್ರನ್ನ ನೋಡಲೆಂದೇ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ರು. ಇದ್ರಿಂದಾಗಿ ಕಾಲ್ತುಳಿತ ಆಗಿ 11 ಜನ ಸಾವನ್ನಪ್ಪಿದ್ದಾರೆ. ಸಾಕಷ್ಟು ಮಂದಿ ಗಾಯಗೊಂಡಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿಯವ್ರನ್ನೂ ಬಂಧಿಸಿ ಅಂತಾ ಅಭಿಯಾನ ಶುರು ಮಾಡಿದ್ದಾರೆ. ಇವ್ರ ವಾದ  ಹೆಂಗಿದೆ ಅಂದ್ರೆ ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಎಳೆದ್ರು ಅನ್ನೋ ಹಾಗಿದೆ.

ಕ್ರಿಕೆಟ್ ನ ಗಂಧ ಗಾಳಿಯೂ ಗೊತ್ತಿಲ್ಲದ ದೇಶಗಳಲ್ಲೂ ಇವತ್ತು ವಿರಾಟ್ ಕೊಹ್ಲಿ ಹೆಸರು ಗೊತ್ತಿದೆ. ಕೊಹ್ಲಿಯನ್ನ ಎದೆಯಲ್ಲಿ ಇಟ್ಟುಕೊಂಡು ಆರಾಧಿಸೋ ಅಭಿಮಾನಿಗಳು ಜಗದಗಲವೂ ಇದ್ದಾರೆ. ಅಚ್ಚರಿ ಏನಪ್ಪಾ ಅಂದ್ರೆ ಕೊಹ್ಲಿಯನ್ನ ದ್ವೇಷಿಸೋ ಒಂದಷ್ಟು ವರ್ಗವೂ ಇದೆ. ಇದೇ ವರ್ಗವೇ ಈಗ ಅರೆಸ್ಟ್ ಕೊಹ್ಲಿ ಅನ್ನೋ ಟ್ರೆಂಡ್ ಶುರು ಮಾಡಿದೆ. ಅಷ್ಟಕ್ಕೂ ಇಲ್ಲಿ ಕೊಹ್ಲಿ ಮಾಡಿರೋ ತಪ್ಪಾದ್ರೂ ಏನು. 18 ವರ್ಷಗಳ ಕಾಲ ಒಂದೇ ತಂಡಕ್ಕಾಗಿ ಆಡಿದ್ದೇ ತಪ್ಪಾಯ್ತಾ. ಅಥವಾ ಲಾಲಿಪಾಪ್ ಅಂತಾ ಆಡ್ಕೊಳ್ಳೋರ ಮುಂದೆ ಚೊಚ್ಚಲ ಕಪ್​ ಗೆದ್ದಿದ್ದೇ ತಪ್ಪಾಯ್ತಾ. ಅಥವಾ ಕ್ರಿಕೆಟ್ ಜಗತ್ತೇ ತನ್ನನ್ನ ಆರಾಧಿಸ್ತಿದ್ರೂ ಬೆಂಗಳೂರು ನನ್ನ ಎರಡನೇ ತವರು. ನನ್ನ ಆತ್ಮ ಮತ್ತು ಹೃದಯ ಎಲ್ಲವೂ ಇಲ್ಲೇ ಇದೆ ಎಂದಿದ್ದೇ ತಪ್ಪಾ? ಅದೆಲ್ಲಕ್ಕಿಂತ ಹೆಚ್ಚಾಗಿ ಅಭಿಮಾನಿಗಳ ಸಂಭ್ರಮವನ್ನ ನೋಡೋಕೆ ಕಾಯ್ತಿದ್ದೇನೆ ಎಂದಿದ್ದೇ ತಪ್ಪಾಯ್ತಾ?

ವಿರಾಟ್ ಕೊಹ್ಲಿ ಮತ್ತು ಆರ್​ಸಿಬಿ ಜೊತೆಗಿನ ನಂಟಿಗೆ 18 ವರ್ಷಗಳೇ ತುಂಬಿವೆ. ಈ ಪೈಕಿ 9 ವರ್ಷಗಳ ಕಾಲ ಆರ್​​ಸಿಬಿ ಕ್ಯಾಪ್ಟನ್ ಕೂಡ ಆಗಿದ್ರು. ಆದ್ರೂ ಒಂದೇ ಒಂದು ಟ್ರೋಫಿ ಗೆಲ್ಲಿಸೋಕೂ ಆಗಿರಲಿಲ್ಲ. ಕೊನೆಗೆ ನಾಯಕತ್ವವನ್ನೇ ಬಿಟ್ಟು ಆಟಗಾರಗಾಗಿ ಕಣಕ್ಕಿಳಿದ್ರೂ ಪ್ರತೀ ಸಲವೂ ತಂಡದ ಅತ್ಯುತ್ತಮ ಆಟಗಾರ ಎನಿಸಿಕೊಳ್ತಿದ್ರು. ಹೀಗೆ ಕೊಹ್ಲಿ ಎಷ್ಟೇ ಪರ್ಫಾಮ್ ಮಾಡಿದ್ರೂ ತಂಡ ಗೆಲ್ಲದೇ ಇದ್ದಾಗ ಸಾಕಷ್ಟು ಕ್ರಿಕೆಟರ್ಸ್ ವಿರಾಟ್ ಕೊಹ್ಲಿಗೆ ಆರ್ ಸಿಬಿ ಬಿಟ್ಟು ಬೇರೆ ಟೀಂ ಸೇರಿ ಅಂತಾ ಸಜೇಷನ್ ಕೊಟ್ಟಿದ್ರು. ಹಾಗೇ ಫ್ರಾಂಚೈಸಿಗಳು ಕೂಡ ಕೋಟಿಗಳ ಲೆಕ್ಕದಲ್ಲಿ ಆಫರ್ ಮಾಡಿದ್ರು. ಆದ್ರೆ ಇದ್ಯಾವುದಕ್ಕೂ ಕೇರ್ ಮಾಡದ ಕೊಹ್ಲಿ ತಾನು ಐಪಿಎಲ್​ನಲ್ಲಿ ಆಡಿದ್ರೆ ಆರ್​ಸಿಬಿಯಲ್ಲಿ ಮಾತ್ರ. ತೊಡೋದು ಕೂಡ ಆರ್​ಸಿಬಿ ಜೆರ್ಸಿಯೇ ಅಂತಾ ಶಪಥ ಮಾಡಿದ್ರು. ಇದೀಗ ಸುದೀರ್ಘ 18 ವರ್ಷಗಳ ಕಾಯುವಿಕೆ ಬಳಿಕ ಆರ್​ಸಿಬಿ ಕಪ್ ಗೆದ್ದಾಗ ಮೈದಾನದಲ್ಲೇ ಕಣ್ಣೀರು ಇಟ್ಟಿದ್ರು. ಇದೊಂದು ಕಪ್​ಗಾಗಿ ಅದೆಷ್ಟು ಕನವರಿಸ್ತಿದ್ರು ಅನ್ನೋದನ್ನ ಇಡೀ ಜಗತ್ತೇ ನೋಡಿತ್ತು.

ವಿರಾಟ್ ಕೊಹ್ಲಿ ಕಪ್ ಗೆದ್ದಾಗ ಮೊದಲು ನೆನಪಾಗಿದ್ದೇ ಕನ್ನಡದ ಈ ನಿಷ್ಠಾವಂತ ಅಭಿಮಾನಿಗಳು. ಹೀಗಾಗಿ ಟ್ರೋಫಿ ಗೆದ್ದ ಮರುಕ್ಷಣವೇ ನನ್ನ ಹೃದಯ ಮತ್ತು ಆತ್ಮ ಎರಡೂ ಬೆಂಗಳೂರಿನಲ್ಲಿದೆ. ಇಲ್ಲಿನ ಸಂಭ್ರಮಕ್ಕಿಂತ ನಾಳೆ ಅಲ್ಲಿನ ಸಂಭ್ರಮವನ್ನು ಕಾಣಲು ಕಾತರನಾಗಿದ್ದೇನೆ ಎಂದಿದ್ರು. ಅದ್ರಂತೆ ಟ್ರೋಫಿ ಸಮೇತ ಬೆಂಗಳೂರಿಗೆ ಕಾಲಿಟ್ಟಿದ್ರು. ಆದ್ರೆ ಬೆಂಗಳೂರಿಗೆ ಕಾಲಿಟ್ಟು ಎರಡೇ ಗಂಟೆಗಳೆಲ್ಲಾ ಎಲ್ಲಾ ಖುಷಿಯೂ ಮರೆಯಾಗಿತ್ತು. ಹೃದಯ ಗೆದ್ದಿದ್ದ ಅದೇ ಅಭಿಮಾನಿಗಳ ಪೈಕಿ 11 ಮಂದಿ ಪ್ರಾಣ ಬಿಟ್ಟಿದ್ರು. 18 ವರ್ಷಗಳ ಬಳಿಕ ಕಪ್ ಗೆದ್ದ ಖುಷಿಯೂ ಛಿದ್ರವಾಗಿದೆ. ಭಾರದ ಮನಸ್ಸಿನಿಂದಲೇ ಬೆಂಗಳೂರು ತೊರೆದಿದ್ರು.

Shantha Kumari

Leave a Reply

Your email address will not be published. Required fields are marked *