ಯೋಧನನ್ನು ಉಳಿಸಲು ಪ್ರಾಣ ತ್ಯಾಗ ಮಾಡಿದ ಶ್ವಾನ- ಭಾರತೀಯ ಸೇನೆಯ ‘ಕೆಂಟ್’ ಇನ್ನಿಲ್ಲ!

ಯೋಧನನ್ನು ಉಳಿಸಲು ಪ್ರಾಣ ತ್ಯಾಗ ಮಾಡಿದ ಶ್ವಾನ- ಭಾರತೀಯ ಸೇನೆಯ ‘ಕೆಂಟ್’ ಇನ್ನಿಲ್ಲ!

ಶ್ರೀನಗರ: ಉಗ್ರರು ಹಾಗೂ ಸೈನಿಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಯೋಧರನ್ನು ರಕ್ಷಿಸಲು ತೆರಳಿದ್ದ ಭಾರತೀಯ ಸೇನೆಯ ಕೆಂಟ್‌ ಎಂಬ ಆರು ವರ್ಷದ ಶ್ವಾನ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಯೋಧರು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಸೈನಿಕರೊಂದಿಗೆ ತೆರಳುತ್ತಿದ್ದ ಶ್ವಾನ ಭಾರಿ ಗುಂಡಿನ ದಾಳಿಯ ನಡುವೆ ಸಿಕ್ಕಿಬಿದ್ದಿತ್ತು. ಈ ವೇಳೆ ತನ್ನ ಜೊತೆಗಿದ್ದ ಯೋಧನನ್ನು ರಕ್ಷಿಸಲು ತೆರಳಿದ್ದ ವೇಳೆ ಕೆಂಟ್‌ ಸಾವನ್ನಪ್ಪಿದೆ. ಕೆಂಟ್ 21 ನೇ ಆರ್ಮಿ ಡಾಗ್ ಯುನಿಟ್‌ನ ಹೆಣ್ಣು ಲ್ಯಾಬ್ರಡಾರ್ ತಳಿಯ ನಾಯಿಯಾಗಿದ್ದು, ತನ್ನ ಹ್ಯಾಂಡ್ಲರ್ ಅನ್ನು ಉಳಿಸಲು ತನ್ನ ಪ್ರಾಣವನ್ನು ತ್ಯಾಗ ಮಾಡಿದೆ. ಕೆಂಟ್ ಕೊನೆಯುಸಿರೆಳೆಯುವ ಮುನ್ನ ಉಗ್ರರ ಜಾಡು ಹಿಡಿದು ಸೈನಿಕರನ್ನು ಅತ್ತ ಕರೆದೊಯ್ಯುತ್ತಿತ್ತು.

ಇದನ್ನೂ ಓದಿ: ಹರಕೆ ಹೇಳಿಕೊಂಡರೆ ಬಯಕೆ ಈಡೇರಿಸುತ್ತೆ ಶ್ವಾನ ದೇವರು – ನಾಯಿಗೆ ಗುಡಿ ಕಟ್ಟಿದ ಭಕ್ತರು..!

ಸೇನಾ ಶ್ವಾನ ಕೆಂಟ್ ಆಪರೇಷನ್ ಸುಜಲಿಗಾಲದಲ್ಲಿ ಮುಂಚೂಣಿಯಲ್ಲಿತ್ತು, ಗುಂಡಿನ ಚಕಮಕಿಯಲ್ಲಿ ವಿಶೇಷ ಪೊಲೀಸ್ ಅಧಿಕಾರಿ (ಎಸ್‌ಪಿಒ) ಸೇರಿದಂತೆ ಇನ್ನೂ ಮೂವರು ಯೋಧರು ಗಾಯಗೊಂಡಿದ್ದಾರೆ. ಇಬ್ಬರು ಉಗ್ರರು ಇಲ್ಲಿನ ಕಾಡಿನಲ್ಲಿ ಒಳನುಸುಳುತ್ತಿರುವ ಮಾಹಿತಿಯನ್ನು ಪಡೆದ ಸೇನೆ, ‘ಆಪರೇಷನ್‌ ಸುಜಲೀಗಾಲಾ’ ಮೂಲಕ ಹುಡುಕಾಟ ನಡೆಸಿತ್ತು. ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಯೋಧ ಹಾಗೂ ಉಗ್ರ ಬಲಿಯಾಗಿದ್ದಾರೆ. ಜೊತೆಗೆ ಇಬ್ಬರು ಸೇನೆ ಜವಾನ್‌ ಹಾಗೂ ಓರ್ವ ಅಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಿಕ್ಕ ಓರ್ವ ಉಗ್ರ ಪರಾರಿಯಾಗಿದ್ದಾನೆ. ಉಗ್ರರಿಂದ ಬಟ್ಟೆ ಸೇರಿ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸೇನೆ ತಿಳಿಸಿದೆ.

Shwetha M