ಸಫಾರಿ ವಾಹನವನ್ನು ಅಟ್ಟಿಸಿಕೊಂಡು ಬಂದ ಘೇಂಡಾಮೃಗ – ನಡೆದೇ ಹೋಯ್ತು ದುರಂತ!

ಸಫಾರಿ ವಾಹನವನ್ನು ಅಟ್ಟಿಸಿಕೊಂಡು ಬಂದ ಘೇಂಡಾಮೃಗ – ನಡೆದೇ ಹೋಯ್ತು ದುರಂತ!

ದೇಶದಲ್ಲಿ ಸಫಾರಿ ಪ್ರಿಯರಿಗೆ ಕಡಿಮೆಯಿಲ್ಲ. ಹಾಗಾಗಿ ರಜಾ ಅವಧಿಯಲ್ಲಿ ಅನೇಕರು ಸಫಾರಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಅಭಯಾರಣ್ಯದೊಳಗಿನ ಸಫಾರಿ ವೇಳೆ ಕೆಲವೊಮ್ಮೆ ಆಕ್ರಮಣಕಾರಿ ಪ್ರಾಣಿಗಳು ಪ್ರವಾಸಿಗರ ವಾಹನದ ಮುಂದೆ ದಿಢೀರನೆ ಪ್ರತ್ಯಕ್ಷವಾಗುವುದುಂಟು. ಈ ವೇಳೆ ಕೆಲ ಪ್ರವಾಸಿಗರು ಫೋಟೋ, ವಿಡಿಯೋ ತೆಗೆಯಲು ವನ್ಯ ಜೀವಿಗಳ ಬಳಿ ಹೋಗುತ್ತಾರೆ. ಈ ವೇಳೆ ಪ್ರವಾಸಿಗರು ಪೇಚಿಗೆ ಸಿಲುಕಿದ ಉದಾಹರಣೆಗಳು ಸಾಕಷ್ಟಿವೆ. ಇಂತಹ ಸಾಕಷ್ಟು ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತವೆ. ಇದೀಗ ಇಂತಹದ್ದೇ ವಿಡಿಯೋವೊಂದು ವೈರಲ್ ಆಗಿದೆ. ಈ ದೃಶ್ಯವನ್ನು ನೋಡುವಾಗ ಒಂದು ಕ್ಷಣ ಎದೆ ಧಗ್ ಎಂದಂತಾಗುತ್ತದೆ.

ಇದನ್ನೂ ಓದಿ: ಜೀವ ಉಳಿಸಿದವನನ್ನ ನೆರಳಿನಂತೆ ಹಿಂಬಾಲಿಸುತ್ತಿದೆ ಕೊಕ್ಕರೆ – ಅಪರೂಪದ ಬಂಧಕ್ಕೆ ಜನ ಫಿದಾ..

ಸಫಾರಿಗೆ ತೆರಳಿದಂತಹ ಸಂದರ್ಭದಲ್ಲಿ ಕೆಲವೊಮ್ಮೆ ಎದುರಾಗುವ ಸನ್ನಿವೇಶಗಳು ಭೀಕರವಾಗಿರುತ್ತವೆ. ಇತ್ತೀಚಿನ ದಿನಗಳಲ್ಲಿ ಇಂತಹ ಸಾಕಷ್ಟು ದುರ್ಘಟನೆಗಳು ನಡೆಯುತ್ತಿವೆ. ಇದೀಗ ಪಶ್ಚಿಮ ಬಂಗಾಳದ ಜಲ್ದಾಪಾರಾ ರಾಷ್ಟ್ರೀಯ ಉದ್ಯಾನವನದಲ್ಲಿ ದುರ್ಘಟನೆಯೊಂದು ನಡೆದಿದೆ. ಸಫಾರಿ ಹೊರಟ ಪ್ರವಾಸಿಗರ ವಾಹನದ ಎದುರು ದಿಢೀರ್ ಆಗಿ ಘೇಂಡಾಮೃಗ  ಪ್ರತ್ಯಕ್ಷವಾಗಿದೆ. ಘೇಂಡಾಮೃಗ ದಾಳಿಯಿಂದ ತಪ್ಪಿಸಿಕೊಳ್ಳಲು ಚಾಲಕ ವಾಹನವನ್ನು ಹಿಮ್ಮುಖವಾಗಿ ಚಲಾಯಿಸಿದ್ದಾರೆ. ಈ ವೇಳೆ ಸಫಾರಿ ವಾಹನ ಉರುಳಿ ಬಿದ್ದಿದೆ.

ಈ ಭೀಕರ ದೃಶ್ಯವನ್ನು ಐಎಫ್ ಎಸ್ ಅಧಿಕಾರಿ ಆಕಾಶ್ ದೀಪ್ ಬಧವನ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆದ ದೃಶ್ಯದಲ್ಲಿ ಸಫಾರಿ ವಾಹನವೊಂದು ನಿಂತಿರುತ್ತದೆ. ಅದರಲ್ಲಿದ್ದವರು ಮೊಬೈಲ್‌ ನಲ್ಲಿ ವಿಡಿಯೋ ಸೆರೆ ಹಿಡಿಯುತ್ತಿರುತ್ತಾರೆ. ಈ ವೇಳೆ ಇದ್ದಕ್ಕಿದ್ದಂತೆಯೇ ಅಲ್ಲಿದ್ದ ಘೇಂಡಾಮೃಗಗಳು ಈ ವಾಹನದತ್ತ ಓಡಿ ಬರುತ್ತವೆ. ಈ ದೃಶ್ಯ ಕಂಡ ವಾಹನ ಚಾಲಕ ತಕ್ಷಣ ವಾಹನವನ್ನು ಹಿಮ್ಮುಖವಾಗಿ ಚಲಾಯಿಸುತ್ತಾರೆ. ಸಫಾರಿ ವಾಹನದಲ್ಲಿದ್ದವರು ಮತ್ತು ಅಲ್ಲಿದ್ದ ಇತರರು ಕೂಡಾ ಭಯಗೊಂಡು ಅಲ್ಲಿಂದ ಓಡುತ್ತಾರೆ. ಈ ವೇಳೆ, ದುರಂತವೊಂದು ನಡೆದು ಹೋಗುತ್ತದೆ. ಅದೇನೆಂದರೆ, ಹಿಮ್ಮುಖವಾಗಿ ಬರುತ್ತಿರುವ ಪ್ರವಾಸಿಗರಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದ ಕಮರಿಗೆ ಉರುಳಿ ಪಲ್ಟಿಯಾಗುತ್ತದೆ.

ವಾಹನದಲ್ಲಿದ್ದ ಪ್ರವಾಸಿಗರಿಗೆ ಏನಾಗಿದೆ ಎಂಬುವುದು ಗೊತ್ತಾಗಿಲ್ಲ. ಆದರೆ, ಈ ದೃಶ್ಯ ಈಗ ಎಲ್ಲರಲ್ಲೂ ಆಘಾತ ಮೂಡಿಸಿದೆ. ಅಲ್ಲದೆ, ಸಫಾರಿಗೆ ತೆರಳಿದಂತಹ ಸಂದರ್ಭದಲ್ಲಿ ಎಷ್ಟು ಎಚ್ಚರಿಕೆಯಿಂದ ಇರಬೇಕು ಎಂಬುದಕ್ಕೂ ಇದು ಉದಾಹರಣೆಯಾಗಿದೆ.

suddiyaana