ಮತ್ತೆ ಶುರುವಾಯ್ತು ವ್ಯಾಪಾರ ಧರ್ಮ ದಂಗಲ್‌! – ಅನ್ಯಧರ್ಮೀಯರಿಗೆ ಜಾತ್ರೆಗಳಲ್ಲಿ ವಹಿವಾಟು ನಿಷೇಧ?

ಮತ್ತೆ ಶುರುವಾಯ್ತು ವ್ಯಾಪಾರ ಧರ್ಮ ದಂಗಲ್‌! – ಅನ್ಯಧರ್ಮೀಯರಿಗೆ ಜಾತ್ರೆಗಳಲ್ಲಿ ವಹಿವಾಟು ನಿಷೇಧ?

ರಾಜ್ಯದಲ್ಲಿ ಜಾತ್ರೆ, ಉತ್ಸವಗಳು ಆರಂಭವಾಗಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ವ್ಯಾಪಾರಸ್ಥರು ಎಲ್ಲೆಲ್ಲಿ ಜಾತ್ರೆಗಳು ನಡೆಯುತ್ತಿವೆ, ಎಲ್ಲಿ ಅಂಗಡಿಗಳನ್ನು ತೆರೆಯಬೇಕು ಎನ್ನುವ ಲೆಕ್ಕಚಾರ ಹಾಕುತ್ತಿರುವಾಗಲೇ ವ್ಯಾಪಾರಿ ಧರ್ಮ ದಂಗಲ್‌ ಮತ್ತೆ ಶುರುವಾಗುತ್ತಿರುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ. ಇದೀಗ ರಾಜ್ಯದಲ್ಲಿ ಅಧಿಕೃತವಾಗಿ ಕರ್ನಾಟಕ ರಾಜ್ಯ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘವೊಂದು ಹುಟ್ಟಿಕೊಳ್ಳುತ್ತಿದೆ.

ದೇವಸ್ಥಾನಗಳಲ್ಲಿ ಹಿಂದೂಗಳಿಗೆ ಮಾತ್ರ ಅಂಗಡಿಗಳನ್ನು ಸ್ಥಾಪಿಸಲು ಅನುಮತಿ ನೀಡಿ ಸರ್ಕಾರ ಮತ್ತು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಬೇಕು ಎಂದು ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.

ಇದನ್ನೂ ಓದಿ: ಅಂತರ್‌ – ಧರ್ಮೀಯ ಮದುವೆಯಾದ ಮಗ – ಅಪ್ಪನನ್ನೇ ಉಚ್ಚಾಟನೆ ಮಾಡಿದ ಬಿಜೆಪಿ!

ರಾಜ್ಯದಲ್ಲಿ 1.27 ಲಕ್ಷ ಹಿಂದೂ ಮಾರಾಟಗಾರರಿದ್ದು, ಇವರು ದೇವಸ್ಥಾನಗಳ ಜಾತ್ರೆಯ ಸಂದರ್ಭದಲ್ಲಿ ಅಂಗಡಿಗಳನ್ನು ಹಾಕುತ್ತಾರೆ. ಹೀಗಾಗಿ ದೇವಸ್ಥಾನಗಳಲ್ಲಿ ಹಿಂದೂಗಳಿಗೆ ಮಾತ್ರ ಅಂಗಡಿಗಳನ್ನು ಸ್ಥಾಪಿಸಲು ಅನುಮತಿ ನೀಡಿ ಸರ್ಕಾರ ಮತ್ತು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಬೇಕು. ಸ್ಟಾಲ್‌ಗಳನ್ನು ವಿತರಿಸಲು ಸಾರ್ವಜನಿಕ ಹರಾಜು ಮಾಡುವ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತರಬೇಕು ಎಂದು ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಮಹೇಶ್ ದಾಸ್ ಒತ್ತಾಯಿಸಿದ್ದಾರೆ.

ಈ ನಡುವೆ ಪ್ರತ್ಯೇಕ ಪತ್ರಿಕಾಗೋಷ್ಠಿ ನಡೆಸಿದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಉತ್ಸವ ವರ್ತಕರ ಸಮನ್ವಯ ಸಮಿತಿ, ಹಬ್ಬ-ಹರಿದಿನಗಳಲ್ಲಿ ದೇಗುಲಗಳ ಬಳ ಎಲ್ಲಾ ಧರ್ಮದ ಬಡ ವ್ಯಾಪಾರಿಗಳಿಗೆ ಜಾತಿ-ಧರ್ಮದ ಬೇಧವಿಲ್ಲದೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದೆ.

ಸಮಿತಿಯ ಗೌರವಾಧ್ಯಕ್ಷರಾದ ಸುನೀಲ್ ಕುಮಾರ್ ಬಜಾಲ್ ಮತ್ತು ಬಿ ಕೆ ಇಮ್ತಿಯಾಜ್ ಮಾತನಾಡಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಡಳಿತಗಳು ಹಬ್ಬ ಹರಿದಿನಗಳಲ್ಲಿ ಮಾರಾಟಗಾರರಿಗೆ ರಕ್ಷಣೆ ನೀಡಬೇಕು. ಧರ್ಮದ ಆಧಾರದ ಮೇಲೆ ವ್ಯಾಪಾರಿಗಳನ್ನು ನಿಷೇಧಿಸಿದರೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕಳೆದ ಎರಡು ವರ್ಷ ರಾಜ್ಯದಲ್ಲಿ ಧಾರ್ಮಿಕ ವ್ಯಾಪಾರಿ ಧರ್ಮ ದಂಗಲ್ ಭಾರೀ ವಿವಾದ ಸೃಷ್ಟಿಸಿತ್ತು. ಕರಾವಳಿಯಲ್ಲಿ ಆರಂಭವಾದ ಈ ವಿವಾದ ರಾಜ್ಯಾದ್ಯಂತ ಹಬ್ಬುವ ಮೂಲಕ ಮತ್ತಷ್ಟು ಬಿಸಿಯೇರಿತ್ತು. ದೇವಸ್ಥಾನಗಳ ಜಾತ್ರೆಯ ಹೊತ್ತಲ್ಲಿ ಅನ್ಯ ಧರ್ಮಿಯರಿಗೆ ವ್ಯಾಪಾರ ನಿಷೇಧ ಎನ್ನುವ ಬ್ಯಾನರ್ ಹಾಕುವ ಮೂಲಕ ಹಿಂದೂ ಸಂಘಟನೆಗಳು ವಿವಾದ ಎಬ್ಬಿಸಿದ್ದವು.

suddiyaana