ನಾಳೆಯ ದಿನ ನಿನ್ನದಮ್ಮಾ… – ಕಾವ್ಯ ಕಣ್ಣೀರಿಗೆ ಬಿಗ್‌ ಬಿ ಭಾವುಕ

ನಾಳೆಯ ದಿನ ನಿನ್ನದಮ್ಮಾ… – ಕಾವ್ಯ ಕಣ್ಣೀರಿಗೆ ಬಿಗ್‌ ಬಿ ಭಾವುಕ

ಐಪಿಎಲ್ ಫೀವರ್ ಸದ್ಯಕ್ಕೆ ತಣ್ಣಗಾಗುತ್ತಾ ಬಂದಿದೆ. ಆದ್ರೆ, ಐಪಿಎಲ್ ನ ಕೆಲ ರಸಮಯ ಕ್ಷಣಗಳು ಇನ್ನೂ ಪದೇ ಪದೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ಆದ್ರೆ, ಕೆಲವೊಂದು ತಂಡಗಳಲ್ಲಿ ಆಟಗಾರರಿಗಿಂತ ಓನರ್ ಹೆಚ್ಚು ಶೈನಾಗಿದ್ದು ಈ ಐಪಿಎಲ್‌ ಸೀಸನ್ ನ ಸ್ಪೆಷಾಲಿಟಿ. ಇವರ ಪೈಕಿ ಕಾವ್ಯ ಮಾರನ್ ಕೂಡ ಒಬ್ರು.. ಸನ್‌ರೈಸರ್ಸ್ ಹೈದ್ರಾಬಾದ್ ಒಡತಿ ಕಾವ್ಯ ಮಾರನ್ ಈ ಸೀಸನ್‌ನ ಮೈನ್ ಅಟ್ರಾಕ್ಷನ್ ಆಗಿದ್ದಾರೆ. ಕಾವ್ಯ ಮಾರನ್ ನಗು, ಕೋಪ, ಹುಸಿ ಮುನಿಸು ಜೊತೆಗೊಂದಿಷ್ಟು ಕಣ್ಣೀರು. ಕಾವ್ಯಮಾರನ್ ಅವರು ಬೇಜಾರು ಮಾಡಿಕೊಂಡಾಗ ಸೂಪರ್ ಸ್ಟಾರ್ ರಜನಿಕಾಂತ್ ನಿಮ್ಮನ್ನು ಹೀಗೆ ನೋಡೋಕೆ ಆಗಲ್ಲ ಅಂತಿದ್ದು ನಿಮಗೆಲ್ಲಾ ನೆನಪಿದೆ. ಇದೀಗ ಕಾವ್ಯ ಮಾರನ್ ಕಣ್ಮೀರು ಹಾಕಿದ್ದು ನೋಡಿ ಬಾಲಿವುಡ್ ನ ಬಿಗ್‌ಬಿ ಒಂದು ಮಾತು ಹೇಳಿದ್ದಾರೆ. ಆ ಮಾತು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ಇದನ್ನೂಓದಿ: ಅನಂತ್ ಅಂಬಾನಿ ಮದುವೆಗೆ ಮುಹೂರ್ತ ಫಿಕ್ಸ್ – ಜುಲೈ 12 ರಂದು ಮುಂಬೈನಲ್ಲಿ ವಿವಾಹ ಸಮಾರಂಭ

ಚೆನ್ನೈನಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎಂಟು ವಿಕೆಟ್ ಗಳಿಂದ ಹೀನಾಯವಾಗಿ ಸೋಲಿಸಿತು. ತನ್ನ ತಂಡ ಹೀನಾಯವಾಗಿ ಸೋತಿರುವುದನ್ನು ಕಂಡು ಕಾವ್ಯಾ ಮಾರನ್ ಕ್ರೀಡಾಂಗಣದಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದರು. ಕಾವ್ಯಾ ಮಾರನ್ ತನ್ನ ಕಣ್ಣೀರನ್ನು ಮರೆಮಾಡಲು ಸಾಕಷ್ಟು ಪ್ರಯತ್ನಿಸಿದರೂ ಅವರಿಗೆ ಸಾಧ್ಯವಾಗಲಿಲ್ಲ. ಅಷ್ಟೇ ಅಲ್ಲ, ಭಾವುಕರಾಗಿದ್ದರೂ ಗೆದ್ದ ಕೋಲ್ಕತ್ತಾ ತಂಡಕ್ಕೆ ಚಪ್ಪಾಳೆ ತಟ್ಟುತ್ತಲೇ ಇದ್ದರು. ಅವರು ಅಳುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಂತರ ಈ ಬಗ್ಗೆ ಸಾಕಷ್ಟು ಪ್ರತಿಕ್ರಿಯೆಗಳು ಬರಲಾರಂಭಿಸಿದವು.

ಬಾಲಿವುಡ್‌ನ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಕೂಡಾ ಕಾವ್ಯ ಕಣ್ಣೀರಿಗೆ ಕರಗಿ ಭಾವುಕರಾಗಿದ್ದಾರೆ. ತಮ್ಮ ಬ್ಲಾಗ್‌ನಲ್ಲಿ ಶಾರುಖ್ ಖಾನ್-ಜೂಹಿ ಚಾವ್ಲಾ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವಿಗಾಗಿ ಅಭಿನಂದಿಸಿದ್ದಾರೆ. ಆದರೆ ಸನ್‌ರೈಸರ್ಸ್ ಸೋತಿದ್ದಕ್ಕೆ ನಿರಾಶೆಯಾಗಿದೆ ಎಂದು ಬರೆದಿದ್ದಾರೆ. ಕಾವ್ಯಾ ಮಾರನ್ ತನ್ನ ಕಣ್ಣೀರನ್ನು ಮರೆಮಾಚಲು ಯತ್ನಿಸುತ್ತಿರುವ ವಿಡಿಯೋ ನೋಡಿ ಬೇಸರವಾಗಿರುವುದನ್ನು ಅಮಿತಾಬ್ ಬಚ್ಚನ್ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

ಐಪಿಎಲ್ ಫೈನಲ್ ಮುಗಿದಿದೆ. ಕೆಕೆಆರ್ ಅದ್ಭುತವಾಗಿ ಗೆದ್ದಿದೆ. ಸನ್‌ರೈಸರ್ಸ್ ಉತ್ತಮ ತಂಡವಾಗಿದೆ. ಸ್ಟೇಡಿಯಂನಲ್ಲೇ ತನ್ನ ತಂಡದ ಸೋಲಿನಿಂದ ನೊಂದ ಆಕೆ ಅಳಲು ಆರಂಭಿಸಿದಳು. ಕ್ಯಾಮರಾ ಕಣ್ಣಿಗೆ ಕಾಣದಂತೆ ಮುಖವನ್ನು ಮರೆಮಾಚಿಕೊಂಡಿದ್ದು ಕಾಣಿಸಿತು. ತನಗೆ ನೋವಾಗಿದೆ ಎಂದು ತೋರಿಸಲು ಅವಳು ಬಯಸಲಿಲ್ಲ. ನನಗೆ ಅವಳ ಬಗ್ಗೆ ಬೇಸರವಾಯಿತು. ಆದರೆ ಪರವಾಗಿಲ್ಲ, ನಾಳೆ ನಿನ್ನದಮ್ಮಾ ಎಂದು ಅಮಿತಾಭ್ ಬರೆದುಕೊಂಡಿದ್ದಾರೆ. ಈ ಮೂಲಕ ಬಿಗ್ ಬಿ ಕೂಡಾ ಕಾವ್ಯ ಮಾರನ್ ಗೆ ಅಳಬೇಡ ನೀನು ನಾಳೆಯ ದಿನದ ಬಗ್ಗೆ ಗೆಲುವಾಗಿರು ಎಂಬರ್ಥದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಹಿಂದೆ ಸೂಪರ್ ಸ್ಟಾರ್ ರಜನಿಕಾಂತ್ ಕೂಡಾ ಕಾವ್ಯ ಮಾರನ್ ಗೆ ನೀವು ನಗ್ತಾ ನಗ್ತಾ ಇದ್ದರೆ ಚೆಂದ ಅನ್ನೋ ಮಾತು ಹೇಳಿದ್ದರು. ಈಗ ಬಿಗ್ ಬಿ ಕೂಡಾ ಕಾವ್ಯ ಮಾರನ್ ಪರವಾಗಿ ಮಾತಾಡಿದ್ದಾರೆ. ಈ ಮೂಲಕ ಕ್ರಿಕೆಟಿಗರಿಗಿಂತಲೂ ಎಸ್ ಆರ್ ಹೆಚ್ ಒಡತಿ ಕಾವ್ಯ ಮಾರನ್ ಸೆಲೆಬ್ರಿಟಿಯಾಗಿದ್ದಾರೆ.

Shwetha M