ದೆಹಲಿಯಲ್ಲಿ “ಸುಳ್ಳಿನ ಆಳ್ವಿಕೆ” ಕೊನೆಗೊಂಡಿದೆ – ಅಮಿತ್ ಶಾ
‘ನಂಬಿಕೆಯ ಹೊಸ ಯುಗ ಆರಂಭ’
![ದೆಹಲಿಯಲ್ಲಿ “ಸುಳ್ಳಿನ ಆಳ್ವಿಕೆ” ಕೊನೆಗೊಂಡಿದೆ – ಅಮಿತ್ ಶಾ ‘ನಂಬಿಕೆಯ ಹೊಸ ಯುಗ ಆರಂಭ’](https://suddiyaana.com/wp-content/uploads/2025/02/1715597125-7346.webp)
27 ವರ್ಷಗಳ ನಂತರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರತೀಯ ಜನತಾ ಪಕ್ಷ ಸರ್ಕಾರ ರಚಿಸಲು ಸಜ್ಜಾಗುತ್ತಿರುವಂತೆಯೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿಯಲ್ಲಿ “ಸುಳ್ಳಿನ ಆಳ್ವಿಕೆ” ಕೊನೆಗೊಂಡಿದೆ ಮತ್ತು ಇದು ದೆಹಲಿಯಲ್ಲಿ ಅಭಿವೃದ್ಧಿ ಹಾಗೂ ನಂಬಿಕೆಯ ಹೊಸ ಯುಗ ಆರಂಭವಾಗಿದೆ ಎಂದಿದ್ದಾರೆ.
ಚುನಾವಣೆ ಫಲಿತಾಂಶದ ಬಳಿಕ X ನಲ್ಲಿ ಪೋಸ್ಟ್ ಮಾಡಿದ ಅಮಿತ್ ಶಾ, “ದೆಹಲಿ ಕೆ ದಿಲ್ ಮೇ ಮೋದಿ ದೆಹಲಿ ಜನರ ಹೃದಯದಲ್ಲಿ ಮೋದಿ ಇದ್ದಾರೆ ” ಎಂದು ಹೇಳಿದರು.
“ದೆಹಲಿಯ ಜನ ಸುಳ್ಳು, ವಂಚನೆ ಮತ್ತು ಭ್ರಷ್ಟಾಚಾರದ ‘ಶೀಷ್ಮಹಲ್’ ಅನ್ನು ನಾಶಮಾಡುವ ಮೂಲಕ ದೆಹಲಿಯನ್ನು ಆಪ್ ಮುಕ್ತಗೊಳಿಸುವ ಕೆಲಸ ಮಾಡಿದ್ದಾರೆ. ದೇಶಾದ್ಯಂತ ಸಾರ್ವಜನಿಕರಿಗೆ ಸುಳ್ಳು ಭರವಸೆಗಳನ್ನು ನೀಡುವವರಿಗೆ ಇದು ಒಂದು ಪಾಠವಾಗಲಿದೆ ಎಂದಿದ್ದಾರೆ. ಇಂದಿನಿಂದ ದೆಹಲಿಯಲ್ಲಿ ಅಭಿವೃದ್ಧಿ ಮತ್ತು ನಂಬಿಕೆಯ ಹೊಸ ಯುಗ ಆರಂಭವಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ.
ದೆಹಲಿಯ ಜನ ತಮ್ಮ ಪಕ್ಷಕ್ಕೆ ಬೆಂಬಲ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ ಅಮಿತ್ ಶಾ, ಬಿಜೆಪಿ ತನ್ನ ಎಲ್ಲಾ ಭರವಸೆಗಳನ್ನು ಈಡೇರಿಸಲಿದೆ ಎಂದು ತಿಳಿಸಿದ್ದಾರೆ.
“ಇದು ‘ಮೋದಿ ಗ್ಯಾರಂಟಿ’ ಗೆಲುವು ಮತ್ತು ಮೋದಿಜಿಯವರ ಅಭಿವೃದ್ಧಿಯ ದೃಷ್ಟಿಕೋನದಲ್ಲಿ ದೆಹಲಿಯ ಜನ ನಂಬಿಕೆ ಇಟ್ಟಿದ್ದಾರೆ. ಈ ಬೃಹತ್ ಜನಾದೇಶಕ್ಕಾಗಿ ದೆಹಲಿ ಜನರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಮೋದಿಜಿಯವರ ನೇತೃತ್ವದಲ್ಲಿ, ಬಿಜೆಪಿ ತನ್ನ ಎಲ್ಲಾ ಭರವಸೆಗಳನ್ನು ಈಡೇರಿಸಲು ಮತ್ತು ದೆಹಲಿಯನ್ನು ವಿಶ್ವದ ನಂಬರ್-1 ರಾಜಧಾನಿಯನ್ನಾಗಿ ಮಾಡಲು ದೃಢನಿಶ್ಚಯ ಮಾಡಿದೆ” ಎಂದು ಅಮಿತ್ ಶಾ ಹೇಳಿದ್ದಾರೆ.