ಅಂಬಿ ಪುಣ್ಯಸ್ಮರಣೆಯಲ್ಲಿ ಅಮ್ಮನ ತಬ್ಬಿಕೊಂಡು ಅಭಿ ಭಾವುಕ – ನೀವು ಶಾಶ್ವತವಾಗಿರುತ್ತೀರಿ ಎಂದು ಸುಮಲತಾ ಅಂಬರೀಶ್ ಭಾವುಕ ಪೋಸ್ಟ್

ಅಂಬಿ ಪುಣ್ಯಸ್ಮರಣೆಯಲ್ಲಿ ಅಮ್ಮನ ತಬ್ಬಿಕೊಂಡು ಅಭಿ ಭಾವುಕ – ನೀವು ಶಾಶ್ವತವಾಗಿರುತ್ತೀರಿ ಎಂದು ಸುಮಲತಾ ಅಂಬರೀಶ್ ಭಾವುಕ ಪೋಸ್ಟ್

ಸ್ಯಾಂಡಲ್‌ವುಡ್‌ನ ಹಿರಿಮೆ ರೆಬೆಲ್ ಸ್ಟಾರ್ ಅಂಬಿ ಇಲ್ಲದೆ 5 ವರ್ಷ. ಮಂಡ್ಯದ ಗಂಡು ಅಂಬರೀಶ್ ಅವರು ಅಗಲಿ ನವೆಂಬರ್ 24ಕ್ಕೆ ಐದು ವರ್ಷಗಳಾಗಿವೆ. ಅವರ ಪುಣ್ಯ ಸ್ಮರಣೆಯ ದಿನ ಸುಮಲತಾ ಅಂಬರೀಶ್ ಭಾವುಕರಾಗಿದ್ದಾರೆ. ಜೊತೆಗೆ ಸುಮಲತಾರ ಭಾವುಕ ಪೋಸ್ಟ್ ಅಂಬಿ ಅಭಿಮಾನಿಗಳನ್ನು ಕೂಡಾ ಭಾವುಕರನ್ನಾಗಿಸಿದೆ. ಅಪ್ಪನ ಸಮಾಧಿ ಬಳಿ ಅಭಿಷೇಕ್ ಅಮ್ಮನನ್ನು ತಬ್ಬಿಕೊಂಡಿದ್ದು, ಅಭಿಮಾನಿಗಳು ಕೂಡಾ ಈ ಭಾವುಕ ಕ್ಷಣಕ್ಕೆ ಸಾಕ್ಷಿಯಾದರು.

ಇದನ್ನೂ ಓದಿ: ವಿನಯ್ ಚಮಚ ಈಗ ನಮ್ರತಾ ಅಲ್ಲ..ಸಂಗೀತಾ..! – ಗುಂಪುಗಾರಿಕೆ ವಿರುದ್ಧ ಡ್ರೋನ್ ಹಾರಾಟ..!

ನವೆಂಬರ್ 24. ಅಭಿಮಾನಿಗಳ ಪ್ರೀತಿಯ ಅಂಬಿ ಅಗಲಿದ ದಿನ. ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುಣ್ಯಸ್ಮರಣೆಯ ಅಂಗವಾಗಿ ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸಮಾಧಿಗೆ ಸುಮಲತಾ ಪೂಜೆ ಸಲ್ಲಿಸಿದರು. ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್ ,ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಪೂಜೆ ಸಲ್ಲಿಸಿದರು. ಹಲವಾರು ಚಿತ್ರೋದ್ಯಮದ ಗಣ್ಯರು ಮತ್ತು ಅಂಬಿ ಅಭಿಮಾನಿಗಳು ಕೂಡಾ ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸಮಾಧಿಗೆ ಬಂದು ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಸುಮಲತಾರನ್ನು ಮಗ ಅಭಿಷೇಕ್ ತಬ್ಬಿಕೊಂಡು ಕ್ಷಣಕಾಲ ಭಾವುಕರಾದರು.

ಇನ್ನು ಅಂಬಿಸ್ಮರಣೆ ಮಾಡುತ್ತಾ ಸುಮಲತಾ ಅಂಬರೀಶ್ ಅವರು ಭಾವುಕ ಪೋಸ್ಟ್ ಮಾಡಿದ್ದಾರೆ. ‘ಇರುವುದೊಂದೇ ಜೀವನ ಅದೆಷ್ಟು ವ್ಯತ್ಯಾಸವಿದೆ. ಎಂದೆಂದಿಗೂ ನಮ್ಮ ನೆನಪುಗಳಲ್ಲಿ, ಸುಖ, ದುಃಖ, ನಗು, ಕಣ್ಣೀರು. ಪ್ರತಿಯೊಂದು ಕ್ಷಣವೂ ನೀವು ಬಿಟ್ಟ ನಿರ್ವಾತವನ್ನು ಅಳೆಯಲಾಗದು.ನಾನು ಆ ಪ್ರೀತಿಯನ್ನು ಕಾಪಿಟ್ಟುಕೊಳ್ಳುತ್ತೇನೆ, ನಷ್ಟವನ್ನಲ್ಲ. ಅನೇಕರನ್ನು ಒಳಗೊಂಡ ಜೀವನವನ್ನು ಎಂದಿಗೂ ಕಳೆದುಕೊಳ್ಳಲು ಆಗುವುದಿಲ್ಲ. ನೀವು ಶಾಶ್ವತವಾಗಿರುತ್ತೀರಿ.ನೀವೊಂದು ಜೀವ ಮೀರಿದ, ಒಂದು ಪ್ರಪಂಚ. ಇಂದು ನನಗೆ ಖಾತ್ರಿಯಿದೆ, ನೀವು ಅತ್ಯಂತ ಹೆಮ್ಮೆಯಿಂದ ಸಂಭ್ರಮದಲ್ಲಿರುವಿರಿ ಮತ್ತು ನಿಮ್ಮ ಆ ಪ್ರಪಂಚದಿಂದ ಅಭಿಷೇಕ್ ಅವರ ಚಲನಚಿತ್ರವನ್ನು ಆಶೀರ್ವದಿಸುತ್ತೀರಿ’ ಎಂದು ಬರೆದುಕೊಂಡಿದ್ದಾರೆ.

ಅಂಬರೀಷ್ ಪುಣ್ಯಸ್ಮರಣೆಯ ದಿನದಂದೇ ಅಭಿಷೇಕ್ ಅವರ ಹೊಸ ಸಿನಿಮಾ ‘ಬ್ಯಾಡ್ ಮ್ಯಾನರ್ಸ್’ ರಿಲೀಸ್ ಆಗಿದೆ. ‘ದುನಿಯಾ’ ಸೂರಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಐದನೇ ವರ್ಷದ ಪುಣ್ಯಸ್ಮರಣೆಗೆ ಮಂಡ್ಯ ಮತ್ತು ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮತ್ತು ಈ ವರ್ಷ ಅಂಬರೀಶ್ ಅವರ ಹೆಸರಿನಲ್ಲಿ ಡಾ.ಅಂಬರೀಶ್ ಫೌಂಡೇಶನ್ ಕೂಡ ಶುರು ಮಾಡಲಾಗುತ್ತಿದ್ದು, ಹಲವಾರು ಜನಪರ ಕೆಲಸಗಳನ್ನು ಈ ಫೌಂಡೇಶನ್ ಮಾಡಲಿದೆ.

Sulekha