ಝೀರೋ ಟ್ರಾಫಿಕ್ ಮೂಲಕ ಕರೆತಂದರೂ ಮಗುವಿಗೆ ಸಿಗಲಿಲ್ಲ ಬೆಡ್– ಕಂದಮ್ಮನ ಸಾವಿನ ಬಗ್ಗೆ ಆರೋಪಗಳನ್ನು ತಳ್ಳಿಹಾಕಿದ ನಿಮ್ಹಾನ್ಸ್ ಆಸ್ಪತ್ರೆ

ಝೀರೋ ಟ್ರಾಫಿಕ್ ಮೂಲಕ ಕರೆತಂದರೂ ಮಗುವಿಗೆ ಸಿಗಲಿಲ್ಲ ಬೆಡ್– ಕಂದಮ್ಮನ ಸಾವಿನ ಬಗ್ಗೆ ಆರೋಪಗಳನ್ನು ತಳ್ಳಿಹಾಕಿದ ನಿಮ್ಹಾನ್ಸ್ ಆಸ್ಪತ್ರೆ

ಮಗು ಆಟವಾಡುತ್ತಾ ಮೇಲಿನಿಂದ ಕೆಳಗೆ ಬಿದ್ದಿತ್ತು. ತಲೆಗೆ ಗಂಭೀರ ಪೆಟ್ಟಾಗಿತ್ತು. ಹಾಸನದಲ್ಲಿ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಶಿಫ್ಟ್ ಆಗಲು ಹೇಳಿದ್ದರು. ಅಷ್ಟೇ ಅಲ್ಲ, ಹಾಸನದಿಂದಲೇ ವೈದ್ಯರು ನಿಮ್ಹಾನ್ಸ್ ಆಸ್ಪತ್ರೆಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿದ್ದರು. ಆದರೆ, ಹಾಸನದಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್‌ನಲ್ಲಿ ಬಂದರೂ ಸಹ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಮಗು ಸಾವನ್ನಪಿದೆ. ಹತ್ತಾರು ಸವಾಲುಗಳನ್ನ ಭೇದಿಸಿ ಝಿರೋ ಟ್ರಾಫಿಕ್ ಮೂಲಕವೇ ಆ ಮಗುವನ್ನ ಕರೆತರಲಾಗಿತ್ತಾದರೂ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಇನ್ನು ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ನಿಮ್ಹಾನ್ಸ್ ಆಸ್ಪತ್ರೆ ಮಗು ಸಾವಿನ ಬಗ್ಗೆ ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ:ಮಕ್ಕಳ ಮಾರಾಟದ ಹಿಂದಿರುವ ಮಹಾಲಕ್ಷ್ಮಿಯ ಕಥೆಯೇ ರೋಚಕ – ಗಾರ್ಮೆಂಟ್ಸ್ ಕೆಲಸ ಮಾಡುತ್ತಿದ್ದವಳು ನಂತರ ಆಗಿದ್ದು ಕೋಟ್ಯಾಧಿಪತಿ…!

ಬೆಡ್ ಸಿಗದೇ ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಮಗು ಆಸ್ಪತ್ರೆ ದಾಖಲಾಗುವ ಸಂದರ್ಭದಲ್ಲಿ ತೀರಾ ಚಿಂತಾಜನಕ ಸ್ಥಿತಿಯಲ್ಲಿತ್ತು. ಮಧ್ಯಾಹ್ನ 12.45ಕ್ಕೆ ಹಾಸನ ಆಸ್ಪತ್ರೆಯಿಂದ ವೈದ್ಯರು ಡಿಸ್ಚಾರ್ಜ್ ಮಾಡಿದ್ದಾರೆ. ಬಳಿಕ ಮಧ್ಯಾಹ್ನ 2.30ಕ್ಕೆ ನಿಮ್ಹಾನ್ಸ್ ಆಸ್ಪತ್ರೆಗೆ ಮಗುವನ್ನು ಕರೆತಂದಿದ್ದಾರೆ. ಆ ವೇಳೆ ಮಗುವಿನ ಸ್ಥಿತಿ ಚಿಂತಾಜನಕವಾಗಿತ್ತು, ಮಗುವಿನ ತಲೆಗೆ ಗಂಭೀರ ಪೆಟ್ಟಾಗಿತ್ತು. ಮಗುವಿನ ಆರೋಗ್ಯದಲ್ಲೂ ಏರುಪೇರು ಕಂಡು ಬಂದಿತ್ತು. ಸಿಟಿ ಬ್ರೈನ್ ಸ್ಕ್ಯಾನ್ ವೇಳೆ ಹಲವಾರು ದೋಷಗಳು ಕಂಡು ಬಂದಿದೆ. ಅಲ್ಲದೇ ಬೆಡ್ ಇಲ್ಲ ಎಂದು ನಮ್ಮ ಆಸ್ಪತ್ರೆ ಸಿಬ್ಬಂದಿ ಸಹ ತಿಳಿಸಿದ್ದು. ನಂತರ ಮಧ್ಯಾಹ್ನ 3 ಗಂಟೆಗೆ ಮಗುವಿಗೆ ಹೃದಯಾಘಾತವಾಗಿದೆ. ವೈದ್ಯರು ಸಾಕಷ್ಟು ಪ್ರಯತ್ನಿಸಿದ್ದಾರೆ, ಆದ್ರೆ ಸಂಜೆ 4 ಗಂಟೆ 5 ನಿಮಿಷಕ್ಕೆ ಮಗು ಮೃತಪಟ್ಟಿದೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ನಿಮ್ಹಾನ್ಸ್ ಆಸ್ಪತ್ರೆ ಸ್ಪಷ್ಟನೆ ನೀಡಿದೆ.

ಇನ್ನು ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಆರೋಗ್ಯ ಅಧಿಕಾರಿಗಳಿಂದ ಪ್ರಾಥಮಿಕ ವರದಿಯನ್ನು ಕೇಳಿದ್ದೇನೆ. ವರದಿ ನೀಡಿದ ಬಳಿಕ ಮುಂದೆ ಏನು ಮಾಡಬೇಕೆಂದು ನಿರ್ಧಾರ ಮಾಡುತ್ತೇನೆ. ನಮ್ಮ ಕಡೆಯಿಂದ ನಿರ್ಲಕ್ಷ್ಯವಾಗಿಲ್ಲವೆಂದು ವೈದ್ಯರು ಹೇಳಿದ್ದಾರೆ. ಎರಡೂ ಕಡೆಯವರ ಜತೆ ಮಾತಾಡುತ್ತೇವೆ, ಲೋಪ ಆಗಿದ್ರೆ ಕ್ರಮ ಕೈಗೊಳ್ಳುತ್ತೇನೆ ಎಂದರು. ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆ ಮೇಲೆ ಬಹಳ ಒತ್ತಡ ಇದೆ. ರಾಜ್ಯಾದ್ಯಂತ ಸಾಕಷ್ಟು ರೋಗಿಗಳು ನಿಮ್ಹಾನ್ಸ್ ಆಸ್ಪತ್ರೆಗೆ ಬರುತ್ತಾರೆ. ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಹಲವು ಸಲ ಬೆಡ್‌ಗಳು ಸಿಗಲ್ಲ. ನಾನೂ ಕೆಲವೊಮ್ಮೆ ಪ್ರಯತ್ನ ಪಟ್ಟಾಗಲೂ ಬೆಡ್ ಸಿಗಲ್ಲ. ಇದಕ್ಕೆ ಪರ್ಯಾಯ ವ್ಯವಸ್ಥೆ ಏನು ಮಾಡಬೇಕೆಂದು ಚರ್ಚಿಸುತ್ತೇವೆ ಎಂದು ಆರೋಗ್ಯ ಸಚಿವರು ತಿಳಿಸಿದರು.

ಚಿಕ್ಕಮಗಳೂರು ಜಿಲ್ಲೆ ಬಸವನಗುಡಿಯ ವೆಂಕಟೇಶ್ ಜ್ಯೋತಿ ದಂಪತಿಯ ಒಂದೂವರೆ ವರ್ಷದ ಮಗು ವಿಜಯ್ ಆಟ ಆಡುವ ವೇಳೆ ಮೆಟ್ಟಿಲಿನಿಂದ ಕೆಳಗೆ ಬಿದ್ದಿದ್ದ. ನವೆಂಬರ್ 29ರಂದು ಈ ಘಟನೆ ನಡೆದಿತ್ತು. ಮಗುವಿನ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಮಗುವನ್ನ ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯ ಇದ್ದಿದ್ರಿಂದ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡುವಂತೆ ವೈದ್ಯರು ಸೂಚಿಸಿದ್ದರು. ಮಗುವಿಗಾಗಿ ಹಾಸನದಿಂದ ಬೆಂಗಳೂರಿನವರೆಗೆ 224 ಕಿ.ಮೀ. ಜೀರೋ ಟ್ರಾಫಿಕ್‌ ವ್ಯವಸ್ಥೆ ಮಾಡಲಾಗಿತ್ತು. ಆ್ಯಂಬುಲೆನ್ಸ್‌ ಚಾಲಕ ಹಾಸನದಿಂದ 224 ಕಿ.ಮೀ. ದೂರವನ್ನು 1.40 ಗಂಟೆಯಲ್ಲಿ ಕ್ರಮಿಸಿ ನಿಮ್ಹಾನ್ಸ್‌ ತಲುಪಿಸಿದ್ದರು. ಹಾಸನದ ವೈದ್ಯರು ನಿಮ್ಹಾನ್ಸ್‌ ಆಸ್ಪತ್ರೆಗೆ ಕರೆ ಮಾಡಿ ತುರ್ತು ಚಿಕಿತ್ಸಾ ಅಗತ್ಯಗಳ ಬಗ್ಗೆ ತಿಳಿಸಿದ್ದರು. ಹಾಸನದಿಂದ ಬೆಂಗಳೂರಿಗೆ ಶರವೇಗದಲ್ಲಿ ಆಂಬ್ಯುಲೆನ್ಸ್ ಮೂಲಕ ಶಿಫ್ಟ್ ಮಾಡಲಾಗಿತ್ತು. ಇಷ್ಟೆಲ್ಲಾ ಶ್ರಮಪಟ್ಟು ಬೆಂಗಳೂರಿಗೆ ಬಂದರೂ ಸಹ ಬೆಡ್ ಇಲ್ಲವೆಂದು ಚಿಕಿತ್ಸೆ ನೀಡಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ. ಮಗುವನ್ನ ಬದುಕಿಸಿಕೊಳ್ಳಲೇ ಬೇಕು ಎಂದು ಎಲ್ಲರೂ ಪಣ ತೊಟ್ಟಿದ್ದರು. ಹತ್ತಾರು ಸವಾಲುಗಳನ್ನ ಭೇದಿಸಿ ಝಿರೋ ಟ್ರಾಫಿಕ್ ಮೂಲಕವೇ ಮಗುವನ್ನ ಕರೆತಂದರೂ ನಿಮ್ಹಾನ್ಸ್ ಆಸ್ಪತ್ರೆ ನಿರ್ಲಕ್ಷದಿಂದ ಮಗು ಸಾವನ್ನಪ್ಪಿದೆ ಎಂದು ಪೋಷಕರು ಹಾಗೂ ಆಂಬ್ಯುಲೆನ್ಸ್ ಸಿಬ್ಬಂದಿ ಆರೋಪಿಸಿದ್ದಾರೆ.

Sulekha