ಸೋತ ಮೇಲೆ ತನ್ನ ಹಣ ವಾಪಸ್ ಕೊಡುವಂತೆ ಜಾಹೀರಾತು – ಕೆಜಿಎಫ್ ಬಾಬು ನಡೆಗೆ ಆಕ್ರೋಶ!

ಸೋತ ಮೇಲೆ ತನ್ನ ಹಣ ವಾಪಸ್ ಕೊಡುವಂತೆ ಜಾಹೀರಾತು – ಕೆಜಿಎಫ್ ಬಾಬು ನಡೆಗೆ ಆಕ್ರೋಶ!

ಚುನಾವಣೆ ಅಂದ್ರೆ ಅಲ್ಲಿ ಹಣದ ಹೊಳೆ ಹರಿಯುತ್ತೆ.. ಗಿಫ್ಟ್​ಗಳ ಸುರಿಮಳೆಯಾಗುತ್ತೆ.. ಮತದಾರರನ್ನ ಸೆಳೆಯಲು ಹತ್ತಾರು ಆಮಿಷಗಳನ್ನ ಒಡ್ಡುತ್ತಾರೆ. ಹೀಗೆ ಈ ಅಭ್ಯರ್ಥಿಯೂ ಕೂಡ ಎಲೆಕ್ಷನ್ ನಲ್ಲಿ ಗೆಲ್ಲಬೇಕು ಅಂತಾ ಕೋಟಿ ಕೋಟಿ ಕೊಟ್ಟಿದ್ರು. ಆದರೆ ಚುನಾವಣೆಯಲ್ಲಿ ಸೋತ ಮೇಲೆ ವರಸೆ ಬದಲಿಸಿದ್ದು ಈಗ ನಾನು ಕೊಟ್ಟ ಹಣವನ್ನ ವಾಪಸ್ ಕೊಡಿ ಅಂತಾ ಜಾಹೀರಾತು ನೀಡಿದ್ದಾರೆ.

ಯೂಸುಫ್ ಷರೀಫ್ @ ಕೆಜಿಎಫ್ ಬಾಬು. ಕೆಜಿಎಫ್ ಬಾಬು ಅಂದರೆ ಎಲ್ಲರಿಗೂ ಬೇಗ ನೆನಪಾಗುತ್ತೆ. ಸಾವಿರಾರು ಕೋಟಿ ಒಡೆಯ ಕೆಜಿಎಫ್‌ ಬಾಬು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ರು. ಚುನಾವಣೆ ವೇಳೆ ಸುಮಾರು 64 ಮಸೀದಿಗಳಿಗೆ 17.30 ಕೋಟಿ ರೂ. ಮೌಲ್ಯದ ಚೆಕ್‌ಗಳನ್ನು ನೀಡಿದ್ದರು. ಆದರೆ ಚುನಾವಣೆಯಲ್ಲಿ ಸೋತ ಬಳಿಕ ಉರ್ದು ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದು, ನಾನು ನೀಡಿರುವ ಹಣವನ್ನು ಮಸೀದಿಗಳು ಬಳಸಬಾರದು. ಅದು ಸ್ವೀಕರಾರ್ಹವಲ್ಲದ ಹಣ, ಆದಷ್ಟು ಬೇಗ ಚೆಕ್‌ಗಳನ್ನು ವಾಪಸ್‌ ಮಾಡಿ ಎಂದು ಸಮಿತಿಗಳಿಗೆ ಹೇಳಿದ್ದಾರೆ.

ಇದನ್ನೂ ಓದಿ : ಸಿಎಂ ಹುದ್ದೆಗೆ ಪಟ್ಟು ಹಿಡಿದಿದ್ದ ಡಿ.ಕೆ ಶಿವಕುಮಾರ್ ಗೆ ಸುಪ್ರೀಂ ಕೋರ್ಟ್ ನಿಂದ ಬಿಗ್ ರಿಲೀಫ್!

ಇಸ್ಲಾಮಿಕ್ ಸಂಸ್ಥೆ ದಾರುಲ್ ಉಲೂಮ್‌ ಹೊರಡಿಸಿರುವ ಫತ್ವಾ ಉಲ್ಲೇಖಿಸಿರುವ ಕೆಜಿಎಫ್‌ ಬಾಬು, ಚುನಾವಣಾ ಸಮಯದಲ್ಲಿ ರಾಜಕಾರಣಿಗಳಿಂದ ಪಡೆದ ಹಣ ಹರಾಮ್ ಆಗಿರುತ್ತದೆ ಅದು ಸ್ವೀಕರಾರ್ಹವಲ್ಲ. ಹೀಗಾಗಿ ಸಿದ್ದಾಪುರದ ಟ್ಯಾಂಕ್ ಗಾರ್ಡನ್‌ನಲ್ಲಿರುವ ಮಸೀದಿ-ಇ-ಅತಿಕ್ ಹಾಗೂ ಕೃಷ್ಣಪ್ಪ ಗಾರ್ಡನ್‌ನಲ್ಲಿರುವ ಮಸೀದಿ-ಇ-ಹುಸ್ನಾ ಸೇರಿ ಹಲವು ಮಸೀದಿ ಸಮಿತಿಗಳು ನಾನು ಕೊಟ್ಟಿರುವ ಚೆಕ್‌ಗಳನ್ನು ವಾಪಸ್‌ ನೀಡಿ, ಅದನ್ನು ಬಳಸಬೇಡಿ ಎಂದು ಕೇಳಿದ್ದಾರೆ.

ಕೆಜಿಎಫ್ ಬಾಬು ನಡೆಯನ್ನು ಖಂಡಿಸಿರುವ ಮಾವಳ್ಳಿ ಮಸೀದಿ ಕಾರ್ಯದರ್ಶಿ ಖಾದಿರ್‌ ಅಹ್ಮದ್‌ ಷರೀಫ್‌ ಕೆಜಿಎಫ್‌ ಬಾಬು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲೋಕಲ್‌ ಮೌಲ್ವಿಯಿಂದ ಫತ್ವಾ ಖರೀದಿಸಿ ಚಿಕ್ಕಪೇಟೆಯ ಮಸೀದಿಗಳನ್ನು ಕೆಜಿಎಫ್‌ ಬಾಬು ಗುರಿಯಾಗಿಸಿಕೊಂಡಿದ್ದಾರೆ. ತಾವೇ ಎಲ್ಲ ಮಸೀದಿಗಳನ್ನು ಆಹ್ವಾನಿಸಿ ಎಸ್‌ಆರ್‌ ನಗರದ ಹಕ್‌ ಹೌಸ್‌ನಲ್ಲಿ ಬೃಹತ್‌ ಸಮಾರಂಭ ಮಾಡಿ ಚೆಕ್‌ ವಿತರಿಸಿದ್ದರು. ಆಗ ಇದು ದೇಣಿಗೆಯಾಗಿದ್ದು, ಮಸೀದಿಗಳ ಅಭಿವೃದ್ಧಿಗೆ ಬಳಸಿಕೊಳ್ಳಬಹುದು ಎಂದು ಹೇಳಿದ್ದರು. ಆದರೆ, ಈಗ ಚುನಾವಣೆಯಲ್ಲಿ ಸೋತ ಬಳಿಕ ನೀಡಿದ್ದ ಚೆಕ್‌ಗಳನ್ನು ವಾಪಸ್‌ ನೀಡಿ ಎಂದು ಕೇಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಕೆಜಿಎಫ್‌ ಬಾಬು ಕಾಂಗ್ರೆಸ್ ಟಿಕೆಟ್‌ ಸಿಗದ ಕಾರಣ ಚಿಕ್ಕಪೇಟೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಚುನಾವಣೆ ವೇಳೆ ಚಿಕ್ಕಪೇಟೆ ಕ್ಷೇತ್ರಕ್ಕೆ ಪ್ರತ್ಯೇಕ ಪ್ರಣಾಳಿಕೆ ಹೊರಡಿಸಿದ್ದ ಕೆಜಿಎಫ್ ಬಾಬು, APL, BPL ಕಾರ್ಡ್ ದಾರರಿಗೆ ಸ್ವಂತ ಹಣದಲ್ಲಿ ಸ್ವಂತ ಮನೆ ನಿರ್ಮಾಣ ಮಾಡಿಕೊಡುತ್ತೇನೆ ಎಂದು ಹೇಳಿದ್ದರು. ಹಾಗೇ ಪ್ರತಿ ಮನೆಗೆ ಜೀವಿತಾವದಿವರೆಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ, SSLC, PUC, ಪದವಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಪ್ರತಿ ಕುಟುಂಬಕ್ಕೆ 5 ಲಕ್ಷ ಆರೋಗ್ಯ ವಿಮೆ ನೀಡೋದಾಗಿ ಘೋಷಣೆ ಮಾಡಿದ್ದರು. ಸ್ಲಮ್‌ ಜನರಿಗೆ 300 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರು. ಜೊತೆಗೆ ಚಿಕ್ಕಪೇಟೆ ಅಭಿವೃದ್ಧಿಗಾಗಿ ತಮ್ಮ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲು 300 ಕೋಟಿ ರೂ. ಸ್ವಂತ ಹಣ ವ್ಯಯಿಸುವುದಾಗಿ ಹೇಳಿದ್ದರು.

ಆದರೆ, ಚುನಾವಣೆಯಲ್ಲಿ ಕೆಜಿಎಫ್‌ ಬಾಬು ಚುನಾವಣೆಯಲ್ಲಿ ಸೋತಿದ್ದಾರೆ. ಚಿಕ್ಕಪೇಟೆಯಲ್ಲಿ ಹಾಲಿ ಶಾಸಕರಾಗಿದ್ದ ಉದಯ್‌ ಗರುಡಾಚಾರ್‌ ಮತ್ತೊಮ್ಮೆ ಬಿಜೆಪಿಯಿಂದ ಗೆದ್ದಿದ್ದರೆ, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಆರ್‌ವಿ ದೇವರಾಜ್‌ ಸೋಲು ಅನುಭವಿಸಿದರು. ಉದಯ್‌ ಗರುಡಾಚಾರ್‌ 57,299 ಮತಗಳನ್ನು ಪಡೆದರೆ, ಆರ್‌ವಿ ದೇವರಾಜ್‌ 45,186 ಮತಗಳನ್ನು ಪಡೆದಿದ್ದರು. ಪಕ್ಷೇತರ ಅಭ್ಯರ್ಥಿ ಕೆಜಿಎಫ್‌ ಬಾಬು 20,931 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್‌ ಅಭ್ಯರ್ಥಿ ಸೋಲಿಗೂ ಕಾರಣರಾಗಿದ್ದರು.

suddiyaana