ದಾರುಣ ಅಂತ್ಯ ಕಂಡ ಅಭಿಮಾನಿಗಳ ಅಗಲಿಕೆಯ ನೋವು – ಮೃತರ ಕುಟುಂಬಕ್ಕೆ ಪರಿಹಾರ ನೀಡಿದ ನಟ ಯಶ್

ದಾರುಣ ಅಂತ್ಯ ಕಂಡ ಅಭಿಮಾನಿಗಳ ಅಗಲಿಕೆಯ ನೋವು – ಮೃತರ ಕುಟುಂಬಕ್ಕೆ ಪರಿಹಾರ ನೀಡಿದ ನಟ ಯಶ್

ರಾಕಿಂಗ್ ಸ್ಟಾರ್ ಯಶ್ ಈ ಬಾರಿ ತನ್ನ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸುವುದಿಲ್ಲ. ಯಾವ ಅನಾಹುತ ಆಗುವುದು ಬೇಡ ಅಂತಾನೇ ತೀರ್ಮಾನಿಸಿದ್ದರು. ನಂತರ ಆಗಿದ್ದೇ ಬೇರೆ. ಯಶ್ ಅವರ ಹುಟ್ಟುಹಬ್ಬದ ದಿನವೇ ಮೂವರು ಅಭಿಮಾನಿಗಳು ದಾರುಣ ಅಂತ್ಯ ಕಂಡಿದ್ದರು. ಇದೀಗ ನಟ ಯಶ್ ತನ್ನ ಅಭಿಮಾನಿಗಳ ಮನೆಗೆ ಪರಿಹಾರದ ಹಣ ತಲುಪಿಸಿದ್ದಾರೆ.

ಇದನ್ನೂ ಓದಿ: ಯಶ್ ಅಭಿಮಾನಿಗಳ ದುರ್ಮರಣ – ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ

ನಟ ಯಶ್ ಅವರ ಜನ್ಮದಿನದ ಹಿನ್ನಲೆಯಲ್ಲಿ ಬ್ಯಾನರ್ ಕಟ್ಟುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಅಭಿಮಾನಿಗಳು ನಿಧನರಾದ ನೋವು ಇನ್ನೂ ಹಸಿಯಾಗಿದೆ. ಮೃತ ಅಭಿಮಾನಿಗಳಾದ ಮುರಳಿ, ನವೀನ್ ಮತ್ತು ಹನುಮಂತ ಅವರ ಕುಟುಂಬದವರಿಗೆ ಪರಿಹಾರ ಹಣವನ್ನು ಯಶ್ ತಲುಪಿಸಿದ್ದಾರೆ. ಯಶ್ ಆಪ್ತರು ಗದಗ ಜಿಲ್ಲೆಯ ಸೊರಣಗಿ ಗ್ರಾಮಕ್ಕೆ ತೆರಳಿ ಪರಿಹಾರದ ಚೆಕ್ ನೀಡಿದ್ದಾರೆ. ಪ್ರತಿ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಚೆಕ್ ನೀಡಲಾಗಿದೆ. ಯಶ್ ಸ್ನೇಹಿತರು ಬಂದು ಪರಿಹಾರ ಹಣ ನೀಡಿದಾಗ ಕುಟುಂಬಸ್ಥರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮಕ್ಕಳನ್ನು ಕಳೆದುಕೊಂಡ ನೋವು ಪೋಷಕರನ್ನು ಕಾಡುತ್ತಿದೆ.

ಯಶ್ ಅವರಿಗೆ ಅಪಾರ ಅಭಿಮಾನಿಗಳು ಇದ್ದಾರೆ. ಪ್ರತಿ ವರ್ಷ ಅವರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಗದಗ ಜಿಲ್ಲೆಯ ಸೊರಣಗಿ ಗ್ರಾಮದ ಅಭಿಮಾನಿಗಳು ಈ ಬಾರಿ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾಗ ದುರ್ಘಟನೆ ನಡೆಯಿತು. ಬ್ಯಾನರ್ ಕಟ್ಟುವಾಗ ವಿದ್ಯುತ್ ತಂತಿ ತಗುಲಿದ್ದರಿಂದ ಮುರಳಿ, ನವೀನ್ ಮತ್ತು ಹನುಮಂತ ಮೃತರಾದರು. ಅಭಿಮಾನಿಗಳ ಸಾವಿನ ಸುದ್ದಿ ತಿಳಿದು ಯಶ್ ಮೃತರ ಮನೆಗಳಿಗೆ ತೆರಳಿ, ಅವರ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು. ಈ ವೇಳೆ ಅವರಿಗೆ ಪರಿಹಾರ ಹಣದ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ತಮ್ಮ ಕೈಲಾದ ಸಹಾಯ ಮಾಡುವುದಾಗಿ ಯಶ್ ತಿಳಿಸಿದ್ದರು. ಈಗ ಅವರು ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ನೀಡಿರುವುದು ತಿಳಿದುಬಂದಿದೆ. ಈ ವರ್ಷ ಕೊವಿಡ್ ಹೊಸ ಪ್ರಕರಣಗಳು ಕಂಡುಬರುತ್ತಿರುವ ಕಾರಣದಿಂದ ಯಶ್ ಅವರು ಅಭಿಮಾನಿಗಳ ಜೊತೆ ಬರ್ತ್ಡೇ ಆಚರಿಸಿಕೊಳ್ಳದೇ ಇರಲು ನಿರ್ಧರಿಸಿದರು. ಎಲ್ಲರ ಯೋಗಕ್ಷೇಮದ ಬಗ್ಗೆ ಅವರು ಕಾಳಜಿ ವಹಿಸಿದ್ದರು. ಆದರೆ ತಮ್ಮ ಹುಟ್ಟುಹಬ್ಬದ ದಿನವೇ ಅಭಿಮಾನಿಗಳ ದುರ್ಮರಣ ಆಗಿದ್ದು ಅವರಿಗೆ ತೀವ್ರ ನೋವು ಉಂಟು ಮಾಡಿದೆ.

Sulekha