ಮಂಡ್ಯದಲ್ಲಿ ಸುಮಲತಾ ಸೈಲೆಂಟ್‌ – ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರಕ್ಕಿಳಿದ ನಟ ದರ್ಶನ್‌!

ಮಂಡ್ಯದಲ್ಲಿ ಸುಮಲತಾ ಸೈಲೆಂಟ್‌ – ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರಕ್ಕಿಳಿದ ನಟ ದರ್ಶನ್‌!

ಲೋಕಸಭೆ ಚುನಾವಣೆಯ ಕಾವು ಜೋರಾಗಿದೆ. ಮಂಡ್ಯ ಹೈವೋಲ್ಟೇಜ್‌ ಕ್ಷೇತ್ರವಾಗಿದೆ. ಮೈತ್ರಿ ಪಕ್ಷ  ಹಾಗೂ ಕಾಂಗ್ರೆಸ್‌ ಸಕ್ಕರೆ ನಗರಿಯನ್ನು ಪ್ರತಿಷ್ಠೆಯ ಕಣವಾಗಿ ತೆಗೆದುಕೊಂಡಿದ್ದು, ಗೆಲ್ಲಲೇಬೇಕೆಂದು ಪಣ ತೊಟ್ಟಿವೆ.  ಇದೀಗ ಮಂಡ್ಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ನಟ ದರ್ಶನ್‌ ಕಾಂಗ್ರೆಸ್‌ ಪರ ಪ್ರಚಾರ ಮಾಡುತ್ತಿದ್ದಾರೆ.

ಇದನ್ನೂ ಓದಿ: ಜೆಡಿಎಸ್‌ ಭದ್ರಕೋಟೆಯಲ್ಲಿ ರಾಹುಲ್‌ ಗಾಂಧಿ ಮತಶಿಕಾರಿ – ಸ್ಟಾರ್‌ ಚಂದ್ರು ಪರ ಅಬ್ಬರದ ಪ್ರಚಾರ

ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರ ಬೆನ್ನಿಗೆ ನಿಂತಿದ್ದ ನಟ ದರ್ಶನ್ ಈ ಬಾರಿ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಉರುಫ್ ಸ್ಟಾರ್ ಚಂದ್ರು ಪರ ಅಬ್ಬರದ ಪ್ರಚಾರ ಮಾಡಲು ಮುಂದಾಗಿದ್ದಾರೆ. ಸುಮಲತಾ ಅವರು ದರ್ಶನ್ ಅವರನ್ನು ತಮ್ಮ ಮೊದಲ ಮಗ ಎಂದು ಹೇಳುತ್ತಿದ್ದರು. ಸುಮಲತಾ ಅವರು ತಮ್ಮ ನಿಲುವು ಘೋಷಣೆ ಮಾಡುವ ವೇಳೆಯೂ ದರ್ಶನ್ ಅವರೊಂದಿಗೆ ಬೆನ್ನಿಗೆ ನಿಂತಿದ್ದರು. ಸುಮಲತಾ ಅವರು ಬಿಜೆಪಿ ಸೇರ್ಪಡೆಯಾಗಿ ಬಿಜೆಪಿ-ಜೆಡಿಎಸ್‌ಗೆ ಬೆಂಬಲ ಸಹ ಘೋಷಣೆ ಮಾಡಿದ್ದಾರೆ. ಇದೀಗ ದರ್ಶನ್ ಬಿಜೆಪಿ-ಜೆಡಿಎಸ್ ಮೈತ್ರಿ ವಿರುದ್ಧವಾಗಿ ಮಂಡ್ಯದಲ್ಲಿ ದರ್ಶನ್ ಅವರು ಪ್ರಚಾರಕ್ಕೆ ಧುಮುಕಿರುವುದು ಬಾರಿ ಕುತೂಹಲ ಮೂಡಿಸಿದೆ.

ಈ ಎಲ್ಲಾ ಬೆಳವಣಿಗೆಳ ಮಧ್ಯೆ ಮೈತ್ರಿ ಅಭ್ಯರ್ಥಿ ಜೆಡಿಎಸ್ ಪಕ್ಷದ ಹೆಚ್​ಡಿ ಕುಮಾರಸ್ವಾಮಿ ಪರ ಸುಮಲತಾ ಇನ್ನೂ ಪ್ರಚಾರ ನಡೆಸುವ ಕುರಿತು ತೀರ್ಮಾನ ಕೈಗೊಂಡಿಲ್ಲ. ಬಿಜೆಪಿಯ ರಾಜ್ಯ, ಕೇಂದ್ರ ನಾಯಕರು ಹೇಳಿದರೆ ಕುಮಾರಸ್ವಾಮಿ ಪರ ಪ್ರಚಾರ ಮಾಡುವುದಾಗಿ ಸುಮಲತಾ ಹೇಳಿದ್ದರು. ಆದರೆ ಈವರೆಗೆ ಪ್ರಚಾರ ಮಾಡದೆ ಮೌನವಾಗಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಕಾಂಗ್ರೆಸ್ ಅಭ್ಯರ್ಥಿ ಪರ ದರ್ಶನ್ ಪ್ರಚಾರಕ್ಕೆ ಮುಂದಾಗಿದ್ದಾರೆ.

ಗುರುವಾರ  ನಟ ದರ್ಶನ್‌ ಮಂಡ್ಯ ಲೋಕಸಭಾ ಕ್ಷೇತ್ರದ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ದರ್ಶನ್ ಪ್ರಚಾರ ನಡೆಸಲಿದ್ದಾರೆ. ಕಳೆದ ಚುನಾವಣೆಯಲ್ಲಿ ಯಶ್ ಜತೆ ಜೋಡೆತ್ತಿನಂತೆ ನಿಂತಿದ್ದ ದರ್ಶನ್ ಸುಮಲತಾ ಪರ ಬೆವರು ಸುರಿಸಿ ಮಂಡ್ಯದಲ್ಲಿ ಪ್ರಚಾರ ಮಾಡಿದ್ದರು. ಆದರೆ, ಈಗ ಸುಮಲತಾ ಬಿಜೆಪಿಯಲ್ಲಿದ್ದರೂ ದರ್ಶನ್ ಕಾಂಗ್ರೆಸ್ ಪರ ಪ್ರಚಾರಕ್ಕೆ ಹೋಗುತ್ತಿರುವುದು ಸಾಕಷ್ಟು ಅಚ್ಚರಿ ಮತ್ತು ಚರ್ಚೆಗೆ ಗ್ರಾಸವಾಗಿದೆ.

Shwetha M