ಅತ್ಯಾಚಾರ ಮಾಡಿ ಜೈಲಿಗೆ ಹೋಗಿದ್ದ ಕಟುಕ – ಹೊರ ಬಂದ ಮೇಲೆ ಸಂತ್ರಸ್ತೆಯನ್ನು ಕೊಚ್ಚಿ ಕೊಚ್ಚಿ ಕೊಂದ ಪರಮಪಾಪಿ

ಅತ್ಯಾಚಾರ ಮಾಡಿ ಜೈಲಿಗೆ ಹೋಗಿದ್ದ ಕಟುಕ – ಹೊರ ಬಂದ ಮೇಲೆ ಸಂತ್ರಸ್ತೆಯನ್ನು ಕೊಚ್ಚಿ ಕೊಚ್ಚಿ ಕೊಂದ ಪರಮಪಾಪಿ

ಆಕೆ ಮೇಲೆ ಆತ ಅಮಾನುಷವಾಗಿ ಅತ್ಯಾಚಾರ ಮಾಡಿದ್ದ. ಆತನ ಘೋರ ಕೃತ್ಯದಿಂದ ಆಕೆ ಬದುಕಿದ್ದೇ ಹೆಚ್ಚು. ತನ್ನ ಮೇಲಾದ ದೌರ್ಜನ್ಯದ ವಿರುದ್ಧ ಆಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಆ ಪಾಪಿಗೆ ಮೂರು ವರ್ಷ ಶಿಕ್ಷೆ ಕೂಡಾ ಆಗಿತ್ತು. ಆದರೆ, ಜೈಲಿಂದ ಬಂದ ಕೂಡಲೇ ಆ ಕಟುಕ, ಇನ್ನೊಬ್ಬನ ಜೊತೆ ಸೇರಿ ಅತ್ಯಾಚಾರ ಸಂತ್ರಸ್ತೆಯನ್ನು ಕೊಚ್ಚಿ ಕೊಚ್ಚಿ ಕೊಂದಿದ್ದಾನೆ.

ಇದನ್ನೂ ಓದಿ:ಮದುವೆಗೆ ಇನ್ನೂ ಎರಡು ದಿನ ಬಾಕಿ ಇರುವಾಗಲೇ ವರನ ಮನೆಯಲ್ಲೇ ಯುವತಿ ದುರಂತ ಸಾವು!

ಅತ್ಯಾಚಾರದ ಆರೋಪದ ಮೇಲೆ ಜೈಲು ಸೇರಿದ್ದ ಆರೋಪಿ  ಜಾಮೀನಿನ ಮೇಲೆ ಹೊರಬಂದು ಸಹೋದರನೊಂದಿಗೆ ಸೇರಿ ಅತ್ಯಾಚಾರ ಸಂತ್ರಸ್ತೆಯನ್ನು ಹಾಡಹಗಲಲ್ಲೇ ಕೊಚ್ಚಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅಶೋಕ್ ಮತ್ತು ಪವನ್ ನಿಶಾದ್ ಕ್ರೂರ ಹಂತಕರು. ಇವರಿಬ್ಬರು ಕೆಲವು ದಿನಗಳ ಮೊದಲು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಿಪರ್ಯಾಸವೆಂದರೆ, ಅತ್ಯಾಚಾರ ಸಂತ್ರಸ್ತೆಯ ಕೊಲೆ ನಡೆದಿದ್ದು ಹಾಡಹಗಲಿನಲ್ಲಿ. ಕಟುಕರು ಆಕೆಯನ್ನು ಕೊಚ್ಚಿ ಕೊಚ್ಚಿ ಕೊಲ್ಲುತ್ತಿದ್ದರೆ ಗ್ರಾಮಸ್ಥರು ಭಯ ಹಾಗೂ ಅಸಹಾಯಕತೆಯಿಂದ ನೋಡುತ್ತಾ ನಿಂತಿದ್ದರು. ಕೊಡಲಿ ಹಿಡಿದುಕೊಂಡು ಹಂತಕರು ಮಾತ್ರ ಅಟ್ಟಹಾಸಗೈದಿದ್ದಾರೆ.

ಮೂರು ವರ್ಷಗಳ ಹಿಂದೆ ಪವನ್ ನಿಶಾದ್ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಯುವತಿ ದೂರು ನೀಡಿದ್ದಳು. ಪವನ್ ನಿಶಾದ್ ಹಾಗೂ ಆತನ ಸಹಚರರು ಯುವತಿಯ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದರು. ಜೊತೆಗೆ ದೂರನ್ನು ಹಿಂಪಡೆಯುವಂತೆಯೂ ಕೇಳಿದ್ದರು. ಆದರೆ ಯುವತಿಯ ಪೋಷಕರು ಅದಕ್ಕೆ ಒಪ್ಪಿರಲಿಲ್ಲ. ಪವನ್ ಅವರ ಸಹೋದರ ಅಶೋಕ್ ನಿಶಾದ್ ಪ್ರತ್ಯೇಕ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಯುವತಿಯ ಕೊಲೆಗೆ ಎರಡು ದಿನಗಳ ಮೊದಲು ಬಿಡುಗಡೆಗೊಂಡಿದ್ದ. ಇಬ್ಬರೂ ಹೋಗಿ ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಬಳಿ ಹೋಗಿ ಪ್ರಕರಣ ಮುಚ್ಚಿ ಹಾಕುವಂತೆ ಒತ್ತಾಯಿಸಿದ್ದಾರೆ. ಆದರೆ ಯುವತಿ ಒಪ್ಪಿಕೊಂಡಿರಲಿಲ್ಲ. ಹೀಗಾಗಿ ಹೊಲದಲ್ಲಿ ದನವನ್ನು ಮೇಯಿಸಿ ಹಿಂದಿರುಗುತ್ತಿದ್ದಾಗ ಸಹೋದರರು ಹೊಂಚು ಹಾಕಿ ಆಕೆಯನ್ನು ಹತ್ಯೆ ಮಾಡಿದ್ದಾರೆ. ಪವನ್ ಮತ್ತು ಅಶೋಕ್ ನಿಶಾದ್ ಈಗ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಒಂದೇ ಸಮುದಾಯದ ಎರಡು ಕುಟುಂಬದ ನಡುವೆ ಹಳೆಯ ವೈಷಮ್ಯವಿತ್ತು,ವ್ಯಾಜ್ಯ ನಡೆಯುತ್ತಿತ್ತು. ಮಾಹೆವಾಘಾಟ್ ಪೊಲೀಸ್ ಠಾಣೆ ವ್ಯಾಪ್ತಿಯ ದೇರ್ಹಾ ಗ್ರಾಮದಲ್ಲಿ ಈ ಭೀಕರ ಘಟನೆ ನಡೆದಿದೆ. ಪೊಲೀಸರು ಯುವತಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಮತ್ತು ಆರೋಪಿಗಳನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ತಂಡಗಳನ್ನು ರಚಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Sulekha