ನಿಶ್ಚಿತಾರ್ಥದ ಬೆನ್ನಲ್ಲೇ ಯುವಕನ ಬಾಳಲ್ಲಿ ವಿಧಿಯಾಟ! – ಮದುವೆ ಸಂಭ್ರಮದಲ್ಲಿದ್ದ ಯುವಕ ದುರಂತ ಅಂತ್ಯ!

ಮದುವೆಯ ಸಂಭ್ರಮದಲ್ಲಿದ್ದ ಯುವಕನ ಬಾಳಲ್ಲಿ ವಿಧಿ ಆಟವಾಡಿದೆ. ಮದುವೆ ಮನೆಯಲ್ಲೀಗ ಸೂತಕದ ಛಾಯೆ ಮೂಡಿದೆ. ರಸ್ತೆ ಅಪಘಾತದಲ್ಲಿ ಯುವಕನೊಬ್ಬ ದುರಂತ ಅಂತ್ಯ ಕಂಡಿದ್ದಾನೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಆಮಂತ್ರಣ ಪತ್ರಿಕೆ ವೈರಲ್! – ಇನ್ವಿಟೇಶನ್ ಕಾರ್ಡ್ ಜೊತೆ ಏನೆಲ್ಲಾ ಇದೆ?
ಈ ಹೃದಯವಿದ್ರಾವಕ ಘಟನೆ ಹಾಸನದಲ್ಲಿ ನಡೆದಿದೆ. ಹಸೆಮಣೆ ಏರಬೇಕಾಗಿದ್ದ ಯುವಕನೊಬ್ಬ ವಿಧಿಯಾಟಕ್ಕೆ ಬಲಿಯಾಗಿದ್ದಾನೆ. ಎರಡು ಬೈಕ್ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ನಿಶ್ಚಿತಾರ್ಥವಾಗಿದ್ದ ಯುವಕ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಏನಿದು ಘಟನೆ?
ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ. ಮೃತರನ್ನು ಗುಡ್ಡೇನಹಳ್ಳಿ ನಿವಾಸಿ ರಾಕೇಶ್ (29) ಮತ್ತು ವಲ್ಲಬಾಯಿ ರಸ್ತೆಯ ನಿವಾಸಿ ಮಯೂರ (24) ಎಂದು ಗುರುತಿಸಲಾಗಿದೆ. ಬುಧವಾರ ಸಂಜೆ ಇಬ್ಬರೂ ತಮ್ಮ ತಮ್ಮ ಬೈಕ್ಗಳಲ್ಲಿ ಸಂಚರಿಸುತ್ತಿದ್ದರು. ಎರಡು ಬೈಕ್ಗಳು ಓವರ್ ಸ್ಪೀಡ್ನಲ್ಲಿತ್ತು. ಇದ್ರಿಂದಾಗಿ ನಿಯಂತ್ರಣ ತಪ್ಪಿದ ಎರಡು ವಾಹನಗಳು ಮುಖಾಮುಖಿ ಡಿಕ್ಕಿಯಾಗಿವೆ. ಡಿಕ್ಕಿಯ ರಭಸ ಎಷ್ಟಿತ್ತೆಂದರೆ ಇಬ್ಬರೂ ಯುವಕರು ತೀವ್ರ ರಕ್ತಸ್ರಾವದಿಂದ ರಸ್ತೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಅಂದ್ಹಾಗೆ, ಮೃತರಲ್ಲಿ ಒಬ್ಬರಾದ ರಾಕೇಶ್ ಅವರಿಗೆ ಇತ್ತೀಚೆಗಷ್ಟೇ ನಿಶ್ಚಿತಾರ್ಥವಾಗಿತ್ತು. ಬರುವ ಆಗಸ್ಟ್ 23 ರಂದು ವಿವಾಹ ಮಹೋತ್ಸವ ನಡೆಸಲು ಕುಟುಂಬಸ್ಥರು ನಿಶ್ಚಯಿಸಿದ್ದರು. ಮದುವೆಗೆ ಬೇಕಾದ ತಯಾರಿಗಳು ಆರಂಭವಾಗಿದ್ದವು, ಮಗನ ಮದುವೆ ಕಂಡು ಸಂಭ್ರಮಿಸಬೇಕಾಗಿದ್ದ ಪೋಷಕರಿಗೆ ಈ ಸಾವು ಭರಿಸಲಾಗದ ಆಘಾತ ನೀಡಿದೆ. ಆಗಸ್ಟ್ನಲ್ಲಿ ಮಗನ ಮದುವೆ ಮಾಡಬೇಕು ಅಂದುಕೊಂಡಿದ್ವಿ, ಆದರೆ ಈಗ ಮಗನ ಹೆಣದ ಮುಂದೆ ಕೂರುವಂತಾಯಿತಲ್ಲಾ ಎಂದು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.
ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಹಾಸನ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಅತಿಯಾದ ವೇಗ ಮತ್ತು ಅಜಾಗರೂಕ ಚಾಲನೆಯೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.

ನೋಡಿರಿ

