ನವದಂಪತಿ ಬದುಕಲ್ಲಿ ವಿಧಿಯಾಟ – ಮದುವೆಯಾಗಿ ತಿಂಗಳಲ್ಲೇ ಇದೆಂಥಾ ದುರಂತ..!?

ನವದಂಪತಿ ಬದುಕಲ್ಲಿ ವಿಧಿಯಾಟ – ಮದುವೆಯಾಗಿ ತಿಂಗಳಲ್ಲೇ ಇದೆಂಥಾ ದುರಂತ..!?

ಕೈಯಲ್ಲಿದ್ದ ಮದರಂಗಿ ಚಿತ್ತಾರ ಪೂರ್ತಿ ಮಾಸಿರಲಿಲ್ಲ. ಕೆನ್ನೆಗೆ ಹಚ್ಚಿದ್ದ ಅರಿಶಿನದ ರಂಗು ಹೋಗಿರಲಿಲ್ಲ. ಭವಿಷ್ಯದ ಬಗ್ಗೆ ಆ ದಂಪತಿ ಕಟ್ಟಿಕೊಂಡಿದ್ದ ಕನಸು ಬೆಟ್ಟದಷ್ಟಿತ್ತು. ನಮ್ಮ ಸಂಸಾರ ಆನಂದ ಸಾಗರ ಅಂತಾ ದಾಂಪತ್ಯ ಜೀವನ ಶುರು ಮಾಡಿದ್ರು. ಆದ್ರೆ ಹೊಸಬಾಳಿಗೆ ಕಾಲಿಟ್ಟು ತಿಂಗಳು ತುಂಬುವ ಹೊತ್ತಿಗೆ ನಡೆಯಬಾರದ್ದು ನಡೆದು ಹೋಗಿದೆ. ಖುಷಿ ಖುಷಿಯಾಗಿ ಒಂದಾಗಿದ್ದ ಜೋಡಿ ಜೊತೆಯಾಗೇ ಉಸಿರು ಚೆಲ್ಲಿದ್ದಾರೆ.

ಇದನ್ನೂ ಓದಿ : ವಿಚ್ಛೇದನಕ್ಕೆ ಬಂದು ಮತ್ತೆ ಒಂದಾದ ನಾಲ್ಕು ಜೋಡಿ – ಕೋರ್ಟ್ ಆವರಣದಲ್ಲಿ ಅಪರೂಪದ ಸಮ್ಮಿಲನ..!

ತುಮಕೂರಿನಲ್ಲಿ ನಡೆದಿರೋ ಭೀಕರ ಅಪಘಾತದ ನವಜೋಡಿಯ ಬದುಕನ್ನೇ ಮುಗಿಸಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರ್ ಗೇಟ್ ಬಳಿ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ನವದಂಪತಿ ಭೀಕರ ಅಪಘಾತಕ್ಕೆ ಬಲಿಯಾಗಿದ್ದಾರೆ. ಕಾರು ಮತ್ತು ಲಾರಿ ನಡುವೆ ಡಿಕ್ಕಿಯಾಗಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇಂದು ಮಧ್ಯಾಹ್ನ ಸಂಭವಿಸಿರೋ ಅಪಘಾತದಲ್ಲಿ ದಂಪತಿ ಪ್ರಾಣ ಬಿಟ್ಟಿದ್ದಾರೆ. ವಿಪರ್ಯಾಸ ಅಂದ್ರೆ ಈ ದಂಪತಿ ಒಂದೂವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಇಬ್ಬರೂ ಕೂಡ ಸಾಫ್ಟ್ ವೇರ್ ಇಂಜಿನಿಯರ್ ಗಳಾಗಿದ್ದರು. ಮೃತರನ್ನು ಅರಸೀಕೆರೆ ಮೂಲದ 35 ವರ್ಷದ ರಘು ಮತ್ತು ತಿಗಳನಹಳ್ಳಿ ಮೂಲದ 28 ವರ್ಷದ ಅನುಷಾ ಎಂದು ಗುರುತಿಸಲಾಗಿದೆ.

ರಘು ಮತ್ತು ಅನುಷಾ ದಂಪತಿ ಇಬ್ಬರೂ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಸಾಫ್ಟ್ ವೇರ್ ಇಂಜಿಜಿನಿಯರ್ ಗಳಾಗಿದ್ರು. ಸಂಬಂಧಿಕರ ಮದುವೆಗೆಂದು ಇಬ್ಬರು ಕಾರಿನಲ್ಲಿ ಬಳ್ಳಾರಿ ಕಡೆಗೆ ತೆರಳುತ್ತಿದ್ದಾಗ ಹುಳಿಯಾರ್ ಗೇಟ್ ಬಳಿ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

suddiyaana