ಅಪಘಾತಕ್ಕೀಡಾದವರ ಸಹಾಯಕ್ಕೆ ಬಂದ ಆಟೋ ಚಾಲಕ – ಸಹಾಯ ಮಾಡಿದವನು ಸೇರಿದ್ದು ಸಾವಿನ ಮನೆಗೆ..!

ಅಪಘಾತಕ್ಕೀಡಾದವರ ಸಹಾಯಕ್ಕೆ ಬಂದ ಆಟೋ ಚಾಲಕ – ಸಹಾಯ ಮಾಡಿದವನು ಸೇರಿದ್ದು ಸಾವಿನ ಮನೆಗೆ..!

ಕಣ್ಣೆದುರೇ ಅಪಘಾತವಾದಾಗ ಸಹಾಯಕ್ಕೆ ಓಡೋಡಿ ಬರುತ್ತಾರೆ ಅಂದರೆ ಅವರಲ್ಲಿ ನಿಜವಾದ ಮಾನವೀಯತೆ, ಹೃದಯ ವೈಶಾಲ್ಯತೆ ಇದ್ದೇ ಇರುತ್ತದೆ. ಬೇರೆಯವರ ಕಷ್ಟಕ್ಕೆ ಮರುಗುವ ಅವರ ಸಂಸಾರ ಹಾಯಾಗಿರಲಿ ಎಂದು ಹೇಳುತ್ತೇವೆ. ಆದರೆ, ಉಪಕಾರ ಮಾಡಿದವರಿಗೆ ಆ ವಿಧಿಯೇ ಅಪಕಾರ ಮಾಡಿದರೆ ಇದಕ್ಕಿಂತ ಅನ್ಯಾಯ ಇನ್ನೇನಿದೆ. ಇಲ್ಲಾಗಿದ್ದೂ ಹಾಗೆ. ಅವರೊಬ್ಬರು ಆಟೋ ಡ್ರೈವರ್. ಕಣ್ಣೆದುರೇ ಕಾರು ಅಪಘಾತಕ್ಕೀಡಾಗಿತ್ತು. ತಕ್ಷಣವೇ ಸಹಾಯಕ್ಕೆ ಓಡೋಡಿ ಬಂದಿದ್ದಾರೆ. ಹಾಗೆ ಸಹಾಯ ಮಾಡಲು ಬಂದವರು ಸೇರಿದ್ದು ಮಾತ್ರ ಸಾವಿನ ಮನೆಯನ್ನು.

ಇದನ್ನೂ ಓದಿ: ಮೋಹದ ಬಲೆ ಬೀಸಿದ ಪ್ರೇಮಿ ಮಾಡಿದ್ದು ಮೋಸ – ಮಾಡೆಲ್ ಸಾವಿನ ರಹಸ್ಯ ಬಯಲು ಮಾಡಿದ ಡೈರಿ..!

ಮೈಸೂರಿನ ಮಾನಂದವಾಡಿಯ ರಸ್ತೆಯ ಅಶೋಕಪುರಂನ ರೈಲ್ವೆ ವರ್ಕ್ ಶಾಪ್ ಬಳಿ ಗುರುವಾರ ತಡರಾತ್ರಿ ಕಾರೊಂದು ಅಪಘಾತಕ್ಕೀಡಾಗಿತ್ತು. ಚಾಮರಾಜನಗರ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ಸಹೋದರಿಯ ಮಗ ಧೀರಜ್ ಪ್ರಸಾದ್‌ಗೆ ಸೇರಿದ ಕಾರು ಅಶೋಕಪುರಂನ ರೈಲ್ವೆ ವರ್ಕ್ ಶಾಪ್ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ಬಳಿಕ ಅಪಘಾತವಾದ ಸ್ಥಳದಿಂದ ಕಾರನ್ನು ತಳ್ಳಲು ಕಾರಿನಲ್ಲಿದ್ದ ನಾಲ್ವರು ಹರಸಾಹಸ ಪಟ್ಟಿದ್ದಾರೆ. ಈ ವೇಳೆ ಅಲ್ಲೇ ಇದ್ದ ಆಟೋ ಚಾಲಕ ರವಿ ಕೂಡಾ ಸಹಾಯಕ್ಕೆ ಬಂದಿದ್ದಾರೆ. ಎಲ್ಲರೂ ಸೇರಿ ಕಾರನ್ನು ತಳ್ಳುವಾಗ ಏಕಾಏಕಿ ವಿದ್ಯುತ್ ಪ್ರವಹಿಸಿದೆ. ಪರಿಣಾಮ ಕಾರು ಚಾಲನೆ ಮಾಡುತ್ತಿದ್ದ ಕಿರಣ್ ಹಾಗೂ ಸಹಾಯಕ್ಕೆ ಬಂದಿದ್ದ ಆಟೋ ಚಾಲಕ ರವಿ ಸಾವನ್ನಪ್ಪಿದ್ದಾರೆ. ಇಲ್ಲಿ ಆಟೋ ಚಾಲಕ ಹೋಗಿದ್ದು ಅವರ ಸಹಾಯಕ್ಕೆ. ಆದರೆ, ಸಹಾಯ ಮಾಡಲು ಹೋಗಿದ್ದೇ ಸಾವಿನ ಮನೆಗೆ ಸೇರಲು ಹೋಗುವಂತಾಗಿದ್ದು ನಿಜಕ್ಕೂ ವಿಧಿ ವಿಪರ್ಯಾಸವೇ. ಇದಕ್ಕೆ ಹೇಳುವುದು, ಈ ಜಗತ್ತಿನಲ್ಲಿ ಒಳ್ಳೆಯದಕ್ಕೆ, ಒಳ್ಳೆಯತನಕ್ಕೆ ಆಯಸ್ಸು ಕಡಿಮೆ.

suddiyaana