ಪತಿಯ ಪರಸಂಗಕ್ಕೆ ಅಡ್ಡಿಯಾದ ಪತ್ನಿ – ಪ್ರೇಯಸಿಗಾಗಿ ಹೆಂಡತಿಯನ್ನು ಕೊಂದೇ ಬಿಟ್ಟ ಪಾಪಿ ಗಂಡ

ಪತಿಯ ಪರಸಂಗಕ್ಕೆ ಅಡ್ಡಿಯಾದ ಪತ್ನಿ – ಪ್ರೇಯಸಿಗಾಗಿ ಹೆಂಡತಿಯನ್ನು ಕೊಂದೇ ಬಿಟ್ಟ ಪಾಪಿ ಗಂಡ

ಆಕೆ ಮೂರು ವರ್ಷದ ಹಿಂದಷ್ಟೇ ಮದುವೆಯಾಗಿದ್ದಳು. ಮಲೆನಾಡಿನ ಹೆಣ್ಣು ಬೆಂಗಳೂರಿನ ಹುಡುಗನ ಕೈ ಹಿಡಿದಾಗ ನೂರೆಂಟು ಕನಸು ಕಂಡಿದ್ದಳು. ತನ್ನ ಸಂಸಾರದ ಬಗ್ಗೆ ಅದೆಷ್ಟೋ ಆಸೆ ಇಟ್ಟುಕೊಂಡಿದ್ದಳು. ಆದರೆ, ಪಾಪಿ ಗಂಡ ಮನೆಯಲ್ಲಿ ಹೆಂಡತಿಯಿದ್ದರೂ ಬೇರೊಬ್ಬಳ ಸಹವಾಸ ಮಾಡಿದ್ದ. ಆದರೆ, ಗಂಡನ ಅನೈತಿಕ ಸಂಬಂಧ ಹೆಂಡತಿಗೆ ಗೊತ್ತಾಗುತ್ತಲೇ ಪತ್ನಿಯನ್ನು ಕ್ರೂರವಾಗಿ ಕೊಂದೇ ಬಿಟ್ಟಿದ್ದಾನೆ.

ಇದನ್ನೂ ಓದಿ: ಬೆಂಕಿಯ ಜ್ವಾಲೆಯಲ್ಲಿ ಸುಟ್ಟುಕರಕಲಾದ 200 ಕೋಳಿಗಳು, 100 ಕುರಿಗಳು!

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ದರ್ಶನ್, ಮೂರು ವರ್ಷದ ಹಿಂದೆ ಶ್ವೇತಾ ಎಂಬಾಕೆಯನ್ನು ಮದುವೆಯಾಗಿದ್ದ. ನಾಲ್ಕು ದಿನಗಳ ಹಿಂದೆಯಷ್ಟೇ ಬೆಂಗಳೂರಿನಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ದೇವವೃಂದ ಗ್ರಾಮಕ್ಕೆ ದಂಪತಿ  ಆಗಮಿಸಿದ್ದರು. ಮಗಳು ಊರಿಗೆ ಬಂದಿದ್ದಾಳೆ. ಮನೆಗೆ ಕರೆಯಬೇಕು ಎಂದು ಶ್ವೇತಾ ಮನೆಯವರು ಕೂಡಾ ಸಂಭ್ರಮದಲ್ಲಿದ್ದರು. ಆದರೆ, ಶ್ವೇತಾ ಮನೆಯವರಿಗೆ ಆಘಾತಕಾರಿ ಸುದ್ದಿಯೊಂದು ಬರಸಿಡಿಲಿನಂತೆ ಬಡಿದಿತ್ತು. ನಿಮ್ಮ ಮಗಳು ಹಾರ್ಟ್ ಅಟ್ಯಾಕ್ ಆಗಿ ಸತ್ತಿದ್ದಾಳೆ ಎಂದು ಶ್ವೇತಾ ಮನೆಯವರಿಗೆ ದರ್ಶನ್ ಕಾಲ್ ಮಾಡಿ ಹೇಳಿದ್ದ. ಮೂರು ವರ್ಷದ ಹಿಂದಷ್ಟೇ ಹಸೆಮಣೆ ಏರಿದ ಮಗಳಿಗೆ ಏನಾಯ್ತು ದೇವರೇ ಅಂತಾ ಹೆತ್ತವರು ಓಡೋಡಿ ಬಂದಿದ್ದರು. ಆದರೆ, ಪೋಷಕರು ಬರುವ ಮೊದಲೇ ಅಂತ್ಯಕ್ರಿಯೆಗೆ ತರಾತುರಿಯಲ್ಲಿ ಸಿದ್ಧತೆ ನಡೆಸಿದ್ದ ದರ್ಶನ್. ಅಳಿಯನ ಮೇಲೆ ಅನುಮಾನಗೊಂಡ ಶ್ವೇತಾ ಪೋಷಕರು ಅಂತ್ಯಕ್ರಿಯೆಯನ್ನು ತಡೆದಿದ್ದಾರೆ. ಇದು ಸಾವಲ್ಲ, ಕೊಲೆಯಾಗಿದೆ ಎಂದು ಆರೋಪಿಸಿದ್ದಾರೆ. ಶ್ವೇತಾಳ ಮೃತದೇಹ ಪರೀಕ್ಷೆ ಆಗಲೇಬೇಕು ಎಂದು ಪೋಷಕರು ಆಗ್ರಹಿಸಿದರು.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿದ್ದ ದರ್ಶನ್ ಮೂರು ವರ್ಷಗಳ ಹಿಂದೆಯಷ್ಟೇ ಶ್ವೇತಾಳೊಂದಿಗೆ ಮದುವೆ ಆಗಿದ್ರೂ ಬೇರೆಯವಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎಂದು ಆರೋಪಿಸಲಾಗಿದೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತ್ನಿಗೆ ಇಂಜೆಕ್ಷನ್ ನೀಡಿ ಕೊಲೆ ಮಾಡಿದ್ದಾನೆ ಎಂದು ಶ್ವೇತಾ ಪೋಷಕರು ಆರೋಪ ಮಾಡಿದ್ದಾರೆ. ಸದ್ಯ ಮೃತದೇಹ ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಶವಪರೀಕ್ಷೆ ಬಳಿಕ ಕೊಲೆಯೋ ಹಾರ್ಟ್ ಅಟ್ಯಾಕ್ ಆಗಿ ಸಾವನ್ನಾಪ್ಪಿದ್ದಾರೆಯೋ ಎಂಬುದು ಗೊತ್ತಾಗಲಿದೆ. ಪ್ರಕರಣ ಸಂಬಂಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sulekha