ಕಾಲೇಜು ಬಳಿಯೇ ಚಾಕು ಇರಿದು ವಿದ್ಯಾರ್ಥಿನಿ ಕಿಡ್ನ್ಯಾಪ್ – ಆಸ್ಪತ್ರೆಗೆ ದಾಖಲಿಸಿದ್ದ ಆರೋಪಿ ಅರೆಸ್ಟ್

ಕಾಲೇಜು ಬಳಿಯೇ ಚಾಕು ಇರಿದು ವಿದ್ಯಾರ್ಥಿನಿ ಕಿಡ್ನ್ಯಾಪ್ – ಆಸ್ಪತ್ರೆಗೆ ದಾಖಲಿಸಿದ್ದ ಆರೋಪಿ ಅರೆಸ್ಟ್

ಕಾಲೇಜಿಗೆ ತೆರಳುತ್ತಿದ್ದ ಅಪ್ರಾಪ್ತೆಯನ್ನ ಯುವಕನೊಬ್ಬ ಚಾಕು ಇರಿದು ಅಪಹರಣ ಮಾಡಿರುವ ಘಟನೆ ರಾಮನಗರದಲ್ಲಿ ನಡೆದಿದೆ. ರಾಮನಗರದ ಮಹಿಳಾ ಪಿಯು ಕಾಲೇಜು ಎದುರು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಂಜನಾ ಎಂಬುವವರಿಗೆ ಚಾಕುವಿನಿಂದ ಇರಿದು, ಕಾರಿನಲ್ಲಿ ಕಿಡ್ನ್ಯಾಪ್ ಮಾಡಲಾಗಿದೆ. ಈ ವೇಳೆ ಜೊತೆಗಿದ್ದ ವಿದ್ಯಾರ್ಥಿನಿಯರು ಗಾಬರಿಯಾಗಿ ಕಾಲೇಜು ಉಪನ್ಯಾಸಕರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಪಲಾವ್ ಗೆ ವಿಷ ಹಾಕಿ ತಂದೆ ತಾಯಿಯನ್ನೇ ಕೊಂದ ನೀಚ – ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದವನು ಕೊನೇ ಕ್ಷಣದಲ್ಲಿ ಸಿಕ್ಕಿಬಿದ್ದ

ಕನಕಪುರದ ದಾಳಿಂಬ ಗ್ರಾಮದ ಕುಮಾರ್, ಕನ್ಯಾ ಅವರ ಪುತ್ರಿಯಾದ ಸಂಜನಾ, ಎಂದಿನಂತೆ ಬೆಳಿಗ್ಗೆ 9.15ರ ಸುಮಾರಿಗೆ ಸಹಪಾಠಿಗಳೊಂದಿಗೆ ಕಾಲೇಜಿಗೆ ಬರುತ್ತಿದ್ದರು. ಯುವತಿ ಕಾಲೇಜು ಪ್ರವೇಶದ್ವಾರಕ್ಕೆ ಬರುತ್ತಿದ್ದಂತೆ, ಇನ್ನೋವಾ ಕಾರಿನಲ್ಲಿ ರಾಮನಗರದ ಸರ್ಕಾರಿ ಮಹಿಳಾ ಕಾಲೇಜು ಬಳಿ ಬಂದ ಆರೋಪಿಗಳು ಮೊದಲು ಯುವತಿಯ ಕೈ ಹಾಗೂ ಭುಜದ ಭಾಗಕ್ಕೆ ಚಾಕುವಿನಿಂದ ಇರಿದಿದ್ದು, ಆಕೆಗೆ ತಪ್ಪಿಸಿಕೊಳ್ಳಲಾಗದಂತೆ ಮಾಡಿದ್ದಾರೆ. ಬಳಿಕ ಸಿನಿಮೀಯ ಶೈಲಿಯಲ್ಲಿ ಇನ್ನೋವಾ ಕಾರಿನಲ್ಲಿ ಕೂರಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆ ಗಮನಿಸಿದ ಸ್ಥಳದಲ್ಲಿದ್ದವರು ಕಾರಿಗೆ ಕಲ್ಲು ತೂರಿ ತಡೆಯಲು ಯತ್ನಿಸಿದ್ದಾನೆ. ಆದರೂ, ನಿಲ್ಲಿಸದೆ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಘಟನೆಯನ್ನು ಕಾಲೇಜಿನ ಉಪನ್ಯಾಸಕರಿಗೆ ತಿಳಿಸಿದಾಗ, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪ್ರತ್ಯಕ್ಷದರ್ಶಿಗಳಿಂದ‌ ಮಾಹಿತಿ ಪಡೆದು ಅಪಹರಣಕಾರರ ಪತ್ತೆಗೆ ಬಲೆ ಬೀಸಿದ್ದಾರೆ. ಚಾಕು ಇರಿದು ಅಪಹರಣ ಮಾಡಿದ ಯುವಕನನ್ನು ದಾಳಿಂಬ ಗ್ರಾಮದ ಚೇತನ್ ಎಂದು ಗುರುತಿಸಲಾಗಿದೆ. ಚಾಕು ಇರಿದ ನಂತರ ತೀವ್ರವಾಗಿ ಗಾಯಗೊಂಡಿದ್ದ ಸಂಜನಾಳನ್ನು ತಾನೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಈ ಮಾಹಿತಿ ತಿಳಿದ ಪೊಲೀಸರು ಚಾಕು ಇರಿದ ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಯಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ರಾಮನಗರದ ರಾಮಕೃಷ್ಣ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

suddiyaana