ಬುದ್ದಿ ಹೇಳಿದ ಶಿಕ್ಷಕನ ಮುಂದೆ ಲಾಂಗ್ ಝಳಪಿಸಿದ ವಿದ್ಯಾರ್ಥಿ! – ಮುಂದೇನಾಯ್ತು ಗೊತ್ತಾ?

ಸರಿಯಾಗಿ ತರಗತಿಗೆ ಹಾಜರಾಗುತ್ತಿಲ್ಲ ಎಂದು ಪೋಷಕರಿಗೆ ದೂರು ನೀಡಿದ್ದಕ್ಕೆ ಇಲ್ಲೊಬ್ಬ ವಿದ್ಯಾರ್ಥಿ ಕೆಂಡಾಮಂಡಲನಾಗಿದ್ದಾನೆ. ಇದರಿಂದ ಕೆರಳಿದ ಆತ ತನಗೆ ಪಾಠ ಹೇಳುತ್ತಿದ್ದ ಶಿಕ್ಷಕರಿಗೆ ಲಾಂಗ್ ಝಳಪಿಸಿ ಬೆದರಿಕೆ ಹಾಕಿರುವ ಘಟನೆ ನಾಗಮಂಗಲ ತಾಲೂಕಿನ ಬಿ.ಜಿ.ನಗರದ ಡಿಪ್ಲೊಮಾ ಕಾಲೇಜಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ತುಮಕೂರು ಜಿಲ್ಲೆ, ಕುಣಿಗಲ್ ತಾಲೂಕಿನ ಯಡಿಯೂರು ಹೋಬಳಿಯ ಅವರೇಗೆರೆ ಗ್ರಾಮದ ಪ್ರಥಮ ವರ್ಷದ ಡಿಪ್ಲೊಮಾ ವಿದ್ಯಾರ್ಥಿ ಈ ದುಷ್ಕೃತ್ಯ ಮೆರೆದಿದ್ದಾನೆ. ಕಾಲೇಜಿನ ಉಪನ್ಯಾಸಕ ಚಂದನ್ ಅವರಿಗೆ ಲಾಂಗ್ ತೋರಿಸಿ ಬೆದರಿಕೆ ಹಾಕಿದ್ದಾನೆ.
ಇದನ್ನೂ ಓದಿ: ಮದುವೆಯಾಗಲು ಸೂಕ್ತ ಹೆಣ್ಣು ಹುಡುಕಿಲ್ಲ ಎಂದು ತಾಯಿಯನ್ನೇ ಕೊಂದ ಪಾಪಿ!
ಏನಿದು ಘಟನೆ?
ವಿದ್ಯಾರ್ಥಿ ತರಗತಿಗೆ ಸರಿಯಾಗಿ ಬರುತ್ತಿಲ್ಲ, ಜೊತೆಗೆ ಆತನ ವರ್ತನೆಯೂ ಸರಿಯಿಲ್ಲ, ಪಾಠವನ್ನು ಸಹ ಸಮರ್ಪಕವಾಗಿ ಕಲಿಯುತ್ತಿಲ್ಲ. ಆದ್ದರಿಂದ ತಂದೆ ತಾಯಿಗಳಾದ ತಾವು ಆತನಿಗೆ ಬುದ್ಧಿ ಮಾತು ಹೇಳಿ, ಒಳ್ಳೆಯದನ್ನು ಕಲಿಯಲು ತಿಳಿಸಿ ಎಂದು ಪೋಷಕರಿಗೆ ಉಪನ್ಯಾಸಕ ಚಂದನ್ ದೂರು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿ ಮರು ದಿನ ಬೈಕ್ನಲ್ಲಿ ಉಪನ್ಯಾಸಕರಿದ್ದ ಕೊಠಡಿಗೆ ಮಾಸ್ಕ್ ಧರಿಸಿಕೊಂಡು ಆಗಮಿಸಿ ಲಾಂಗ್ ಹಿಡಿದು ನನ್ನ ವಿಚಾರಕ್ಕೆ ಬಂದರೇ ತಕ್ಕ ಪಾಠ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಈ ವೇಳೆ ಕೊಂಚ ವಿಚಲಿತರಾದ ಉಪನ್ಯಾಸಕರು ಘಟನೆಯನ್ನು ತಹಬದಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸಹ ಉಪನ್ಯಾಸಕರು ಸ್ಥಳೀಯ ಪೊಲೀಸರಿಗೆ ದೂರವಾಣಿ ಮೂಲಕ ವಿಚಾರ ತಿಳಿಸಿದ್ದಾರೆ. ತಕ್ಷಣವೇ ಕಾಲೇಜಿಗೆ ಆಗಮಿಸಿದ ಪೊಲೀಸರು ಆತನ ಕೈಯಲ್ಲಿದ್ದ ಲಾಂಗ್ ಮತ್ತು ಆತನ ಬೈಕ್ನ್ನು, ಆತನನ್ನೂ ವಶಕ್ಕೆ ಪಡೆದು ಅವರ ತಂದೆ ತಾಯಿಗಳಿಗೆ ವಿಚಾರ ಮುಟ್ಟಿಸಿದ್ದಾರೆ.
ಈ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತದನಂತರ ಆತನನ್ನು ತಂದೆ ತಾಯಿಯವರ ಸಮ್ಮುಖದಲ್ಲಿ ಬುದ್ಧಿ ಮಾತು ಹೇಳಿ ಠಾಣೆಯಿಂದ ಕಳುಸಿಕೊಡಲಾಗಿದೆ. ಪೋಷಕರು ಮತ್ತು ಪೊಲೀಸರೆದುರು ತಾನು ಇನ್ನು ಮುಂದೆ ಇಂತಹ ತಪ್ಪನ್ನು ಮಾಡುವುದಿಲ್ಲ ಎಂದು ವಿದ್ಯಾರ್ಥಿ ಪ್ರತಿಜ್ಞೆ ಮಾಡಿದ್ದಾನೆಂದು ತಿಳಿದು ಬಂದಿದೆ. ವಿದ್ಯಾರ್ಥಿಯ ಈ ವರ್ತನೆಯಿಂದ ಇಡಿ ಕಾಲೇಜಿನಲ್ಲಿ ಆತಂಕ ಸೃಷ್ಟಿಯಾಗಿತ್ತು.