ಲವ್‌ ಬ್ರೇಕ್‌ ಅಪ್‌ – ತಾನು ಭಯೋತ್ಪಾದಕ ಎಂದು ಹೇಳಿ ವಿಮಾನದಿಂದ ಕೆಳಗಿಳಿದ ವಿದ್ಯಾರ್ಥಿ!

ಲವ್‌ ಬ್ರೇಕ್‌ ಅಪ್‌ – ತಾನು ಭಯೋತ್ಪಾದಕ ಎಂದು ಹೇಳಿ ವಿಮಾನದಿಂದ ಕೆಳಗಿಳಿದ ವಿದ್ಯಾರ್ಥಿ!

ಕಾಲೇಜು ಅಂದಮೇಲೆ ಪ್ರೀತಿ ಪ್ರೇಮ ಇದ್ದೇ ಇರುತ್ತದೆ. ಕೆಲವರು ಪ್ರೀತಿಸಿದವರನ್ನೇ ಮದುವೆಯಾದರೆ, ಇನ್ನೂ ಕೆಲವರು ಕಾಲೇಜು ಮುಗಿಯುವ ವೇಳೆಗೆ ಬ್ರೇಕ್‌ ಅಪ್‌ ಮಾಡಿಕೊಳ್ಳುತ್ತಾರೆ. ಇದೀಗ ಇಲ್ಲೊಬ್ಬ ತನ್ನ ಪ್ರೇಯಸಿಯೊಂದಿಗೆ ಬ್ರೇಕ್ ಅಪ್‌ ಮಾಡಿಕೊಂಡಿದ್ದಾನೆ. ಬಳಿಕ ವಿಮಾನದಲ್ಲಿ ಪ್ರಯಾಣಿಸುವ ವೇಳೆ ತಾನು  ಭಯೋತ್ಪಾದಕ ಸಂಘಟನೆಯ ಸದಸ್ಯ, ಈ ವಿಮಾನ ಲಖನೌ ತಲುಪುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ.

ಇದನ್ನೂ ಓದಿ: ರೈತರ ಪ್ರತಿಭಟನೆಗೆ ಸಂಬಂಧಿಸಿದ ಖಾತೆ, ಪೋಸ್ಟ್‌ ನಿರ್ಬಂಧಿಸಲು ಕೇಂದ್ರ ಸರ್ಕಾರ ಆದೇಶ – ಅಸಮ್ಮತಿ ಸೂಚಿಸಿದ ಎಕ್ಸ್!

ಅಷ್ಟಕ್ಕೂ ಆಗಿದ್ದೇನು?

ಈ ಘಟನೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಆರೋಪಿಯನ್ನು ಉತ್ತರ ಪ್ರದೇಶ ಮೂಲದ ಆದರ್ಶ್ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ. ಲಕ್ನೋಗೆ ವಿಮಾನ ಹತ್ತಲು ಸಿಂಗ್ KIA ಗೆ ಬಂದಿದ್ದ. ಭದ್ರತಾ ತಪಾಸಣೆಯ ನಂತರ, ಆತ ಬೋರ್ಡಿಂಗ್ ಔಪಚಾರಿಕತೆಗಳನ್ನು ಸಹ ಪೂರ್ಣಗೊಳಿಸಿದ್ದ. ಆದರೆ ಕೊನೆಯ ಕ್ಷಣದಲ್ಲಿ ಪ್ರಯಾಣಿಸಲು ನಿರಾಕರಿಸಿ ಸ್ವಯಂಪ್ರೇರಣೆಯಿಂದ ವಿಮಾನದಿಂದ ಕೆಳಗಿಳಿದಿದ್ದ.

ಏರ್‌ಲೈನ್ ಸಿಬ್ಬಂದಿ ಈ ವಿಷಯವನ್ನು ಸಿಐಎಸ್‌ಎಫ್ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆದರ್ಶ್ ಕುಮಾರ್ ಸಿಂಗ್ ನನ್ನು ವಿಚಾರಣೆಗೆ ಕರೆದೊಯ್ದ ನಂತರ, ನಾನು ಭಯೋತ್ಪಾದಕ ಗುಂಪಿನಿಂದ ಬಂದಿದ್ದು, ವಿಮಾನವು ಲಕ್ನೋವನ್ನು ತಲುಪುವುದಿಲ್ಲ ಎಂದು ಬೆದರಿಕೆ ಹಾಕಿದ್ದಾಗಿ ಹೇಳಿದ್ದ. ನಂತರ ಹೆಚ್ಚಿನ ವಿಚಾರಣೆಗಾಗಿ ಸಿಐಎಸ್ಎಫ್ ಅಧಿಕಾರಿಗಳು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸಿಂಗ್ ನಗರದ ಹೊರವಲಯದಲ್ಲಿರುವ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ, ತನ್ನ ಗೆಳತಿ ತನ್ನೊಂದಿಗೆ ಲವ್ ಬ್ರೇಕ್ ಅಪ್ ಆಗಿದ್ದರಿಂದ ಅಸಮಾಧಾನಗೊಂಡಿದ್ದಾನೆ. ಗೆಳತಿಯ ನೆನಪುಗಳೊಂದಿಗೆ ನಗರದಲ್ಲಿ ಇರಲು ಸಾಧ್ಯವಾಗದೆ, ಅವನು ತನ್ನ ಸ್ವಂತ ಊರಿಗೆ ಹೋಗಲು ನಿರ್ಧರಿಸಿದ್ದ ಎಂದು ತಿಳಿದು ಬಂದಿದೆ.

ಊರಿಗೆ ಹೋಗಲು ನಿರ್ಧರಿಸಿದ್ದ ಆತ ಕೊನೆ ಘಳಿಗೆಯಲ್ಲಿ ಮನಸ್ಸು ಬದಲಿಸಿ, ತನ್ನ ಓದು ಮುಂದುವರಿಸಲು ಬಯಸಿದ್ದ. ಆತನನ್ನು ಸಿಐಎಸ್‌ಎಫ್ ವಶಕ್ಕೆ ಪಡೆದ ನಂತರ ಆತ ತಾನು ಭಯೋತ್ಪಾದಕ ಎಂದು ಹೇಳಿಕೊಂಡಿದ್ದಾನೆ. ನಂತರ ತಾನು ಮಾಡಿದ ಅವಾಂತರಕ್ಕಾಗಿ ಕ್ಷಮೆಯಾಚಿಸಿದ್ದಾನೆ. ಇನ್ನು ಯಾವುದೇ ಭಯೋತ್ಪಾದಕ ಸಂಘಟನೆಯೊಂದಿಗೆ ಆತನ ಸಂಬಂಧ ಇದೆಯೇ ಎಂಬುದನ್ನು ತಿಳಿಯಲು ಪೊಲೀಸರು ಆತನ ಹಿನ್ನೆಲೆಯನ್ನು ಪರಿಶೀಲಿಸುತ್ತಿದ್ದಾರೆ. ಕೆಐಎ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Shwetha M