‘ಕರಿ ಹೈದ ಕರಿ ಅಜ್ಜ’ ಸಿನಿಮಾ ಚಿತ್ರೀಕರಣದಲ್ಲಿ ವಿಶೇಷ ಅನುಭವ – ಗುಳಿಗನಿಗೆ ಗುಡಿ ಕಟ್ಟಿದ ಚಿತ್ರತಂಡ..!

‘ಕರಿ ಹೈದ ಕರಿ ಅಜ್ಜ’ ಸಿನಿಮಾ ಚಿತ್ರೀಕರಣದಲ್ಲಿ ವಿಶೇಷ ಅನುಭವ – ಗುಳಿಗನಿಗೆ ಗುಡಿ ಕಟ್ಟಿದ ಚಿತ್ರತಂಡ..!

ತುಳುನಾಡ ಪವಾಡ ಪುರುಷ ಕೊರಗಜ್ಜನ ಜೀವನವನ್ನು ಆಧರಿಸಿ ‘ಕರಿ ಹೈದ ಕರಿ ಅಜ್ಜ’ ಸಿನಿಮಾ ಚಿತ್ರೀಕರಣ ಮುಕ್ತಾಯಗೊಂಡಿದೆ. ಆದರೆ, ಈ ಚಿತ್ರದ ಶೂಟಿಂಗ್ ವೇಳೆ ಚಿತ್ರತಂಡಕ್ಕೆ ಅನೇಕ ಬಾರಿ ವಿಚಿತ್ರ ಅನುಭವವಾಗಿದೆ. ಸಿನಿಮಾ ಸೆಟ್‌ಲ್ಲೂ ಕೂಡಾ ಪವಾಡವೇ ನಡೆದಿದೆ ಅನ್ನಿಸುವ ಹಾಗೆ ಅನುಭವ ಆಗಿದೆ ಎನ್ನಲಾಗಿದೆ. ಇದಕ್ಕೆ ಕಬೀರ್ ಬೇಡಿ, ಶ್ರುತಿ, ಭವ್ಯ ಹಾಗೂ ಚಿತ್ರತಂಡದವರು ಸಾಕ್ಷಿಯಾಗಿದ್ದಾರೆ. ಇದೀಗ ಮತ್ತೊಂದು ವಿಷಯವನ್ನ ಚಿತ್ರತಂಡ ಬಹಿರಂಗ ಪಡಿಸಿದೆ.

ಇದನ್ನೂ ಓದಿ: ಕನ್ನಡಕ್ಕೆ ಬಂದ ದಿಗ್ಗಜ ನಟ ಕಬೀರ್ ಬೇಡಿ – ‘ಕರಿ ಹೈದ ಕರಿ ಅಜ್ಜ’ ಸಿನಿಮಾದ ಪಾತ್ರ ರಿವೀಲ್

‘ಕರಿ ಹೈದ ಕರಿ ಅಜ್ಜ’ ಸಿನಿಮಾದ ಚಿತ್ರೀಕರಣ ಆರಂಭಕ್ಕೂ ಮುನ್ನವೇ ಪುತ್ತೂರಿನಲ್ಲಿ ಸೆಟ್ ನಿರ್ಮಿಸಲಾಗಿತ್ತು. ಸೆಟ್ ಕೆಲಸಗಾರರು ಸೆಟ್ ನಿರ್ಮಾಣದ ವೇಳೆ ಆವೇಶ ಬಂದಂತವರಾಗಿ ಅಲ್ಲಲ್ಲೇ ಮೂರ್ಛೆ ಹೋಗತೊಡಗಿದರು. ಆಗ ಸ್ಥಳೀಯರು ಅರಿಶಿನ ನೀರನ್ನು ಪ್ರೋಕ್ಷಿಸಿ, ಕೆಲವರನ್ನು ಅಲ್ಲಿನ ಆಸ್ಪತ್ರೆಗೂ ದಾಖಲಿಸಿದ್ದರು. ನಂತರ ಆ ಪ್ರದೇಶದಲ್ಲಿ ಯಾರೂ ಸೆಟ್ ಕೆಲಸ ಮಾಡಲು ಮುಂದೆ ಬರಲಿಲ್ಲ. ಗುಳಿಗನ ಸ್ಥಳ ಸೆಟ್ ಹಾಕಲಾಗುತ್ತಿದ್ದ ಆ ಜಾಗವು ಕರಾವಳಿಯ ಉಗ್ರ ರೂಪದ ದೈವ ‘ಗುಳಿಗ’ನ ಸ್ಥಳವೆಂದು ಸ್ಥಳೀಯರು ತಿಳಿಸಿದರು. ದೈವದ ಮೇಲಿನ ಗೌರವ-ಭಕ್ತಿಯಿಂದಾಗಿ ಪುತ್ತೂರಿನಿಂದ ಬೆಳ್ತಂಗಡಿಯ ಅರಣ್ಯ ಪ್ರದೇಶಕ್ಕೆ ಸೆಟ್ ಕೆಲಸವನ್ನು ಸ್ಥಳಾಂತರಗೊಳಿಸಲಾಯಿತು.

ಈ ಚಿತ್ರದಲ್ಲಿ ಗುಳಿಗ ದೈವದ ಪಾತ್ರವನ್ನು ಹಾಲಿವುಡ್, ಫ್ರೆಂಚ್, ಬಾಲಿವುಡ್ ನಟ ಹಾಗೂ ಕೊರಿಯೋಗ್ರಾಫರ್ ಸಂದೀಪ್ ಸೋಪರ್ಕರ್ ಅಭಿನಯಿಸುತ್ತಿದ್ದಾರೆ. ಮಂಗಳೂರಿನ ಸೋಮೇಶ್ವರ ಸಮುದ್ರ ಕಿನಾರೆಯಲ್ಲಿ ಗುಳಿಗ ದೈವದ ಚಿತ್ರೀಕರಣವನ್ನು ನಡೆಸುತ್ತಿದ್ದಾಗಲೂ, ಚಿತ್ರತಂಡಕ್ಕೆ ಹಲವಾರು ರೀತಿಯ ಅಡೆತಡೆಗಳು ಎದುರಾಯಿತು. ಈ ಬಗ್ಗೆ ತಿಳಿದವರಲ್ಲಿ ಕೇಳಿದಾಗ, ನಿರ್ದೇಶಕ ಸುಧೀರ್ ಅತ್ತಾವರ್ ಅವರ ಹಿರಿಯರಿದ್ದ ಮನೆಯಲ್ಲಿ ಗುಳಿಗ ದೈವದ ಸಾನಿಧ್ಯವಿದ್ದು, ಹಲವಾರು ವರ್ಷಗಳಿಂದ ಆ ಮನೆಯಲ್ಲಿ ಯಾರೂ ವಾಸವಿರದೆ, ಪಾಳು ಬಿದ್ದ ಕಾರಣ ದೈವಕ್ಕೆ ಪೂಜೆ ಪುನಸ್ಕಾರಗಳು ನಡೆಯದಿರುವ ವಿಚಾರ ತಿಳಿದುಬಂದಿದೆ. ಕೂಡಲೇ ನಿರ್ದೇಶಕರು ದೈವಕ್ಕೆ ಗುಡಿ ನಿರ್ಮಾಣ ಮಾಡುವ ಕಾರ್ಯಕ್ಕೆ ಮುಂದಾಗಿ, ಚಿತ್ರದ ಎಡಿಟಿಂಗ್ ಕೆಲಸ ಮುಗಿದ ಕೂಡಲೇ, ದೇವಸ್ಥಾನದ ಕಾರ್ಯ ಮುಗಿಸಿ, ಗುಳಿಗ ಹಾಗೂ ಕಲ್ಲುರ್ಟಿ ದೈವಗಳಿಗೆ ಅದ್ದೂರಿಯ ಕೋಲ ಸೇವೆಯನ್ನು ನಡೆಸಿದರು. ಈ ಸಮಯದಲ್ಲಿ ಹಿರಿಯ ನಟಿ ಭವ್ಯ, ನಿರ್ಮಾಪಕರಾದ ತ್ರಿವಿಕ್ರಮ ಸಾಫಲ್ಯ, ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ, ಕಲಾವಿದರಾದ ಭರತ್ ಸೂರ್ಯ, ರಿತಿಕ ಹಾಗೂ ಹಲವು ತಂತ್ರಜ್ಞರು ಅಹೋರಾತ್ರಿ ವಿಜೃಂಭಣೆಯಿಂದ ನಡೆದ ಕೋಲಸೇವೆಯಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಚಿತ್ರತಂಡವು ಚಿತ್ರೀಕರಣ ಮುಗಿದ ಕೂಡಲೇ ಕೊರಗಜ್ಜನಿಗೂ ಕೋಲಸೇವೆಯನ್ನು ಅದ್ದೂರಿಯಾಗಿ ನೆರವೇರಿಸಿತ್ತು. ಕೊರಗಜ್ಜ’ನ ಕುರಿತಾದ ಸಿನಿಮಾ ಮಾಡಬೇಕೆಂದು ಹಲವಾರು ನಿರ್ಮಾಪಕರು ಕಳೆದ ಕೆಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದರು. ಆದರೆ ನಿರ್ಮಾಪಕ ತ್ರಿವಿಕ್ರಮ ಅವರು ಬಿಗ್ ಬಜೆಟ್ನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದು, ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.

suddiyaana