ಮುದ್ದಿನಿಂದ ಬೆಳೆಸಿದ ಮಗಳು ಕ್ಯಾನ್ಸರ್ ಗೆ ಬಲಿ – ಪುತ್ರಿಯ ಸುಂದರ ಮೂರ್ತಿ ಮಾಡಿಸಿದ ತಾಯಿ

ಮುದ್ದಿನಿಂದ ಬೆಳೆಸಿದ ಮಗಳು ಕ್ಯಾನ್ಸರ್ ಗೆ ಬಲಿ – ಪುತ್ರಿಯ ಸುಂದರ ಮೂರ್ತಿ ಮಾಡಿಸಿದ ತಾಯಿ

ತಾಯಿ ಮಕ್ಕಳ ಸಂಬಂಧದ ಬಗ್ಗೆ ಪದಗಳಲ್ಲಿ ವರ್ಣಿಸೋಕೆ ಆಗಲ್ಲ. ತಾನು ಗರ್ಭಿಣಿ ಅನ್ನೋದು ಗೊತ್ತಾಗುತ್ತಿದ್ದಂತೆಯೇ ಆಕೆ ತನ್ನ ಮಗುವಿನ ಕನವರಿಕೆಯಲ್ಲೇ ಕಾಲ ಕಳೆಯುತ್ತಾಳೆ. ಒಂಬತ್ತು ತಿಂಗಳು ಕಂದನ ಬಗ್ಗೆಯೇ ಕನಸು ಕಾಣುತ್ತಾಳೆ. ಮಗು ಹುಟ್ಟಿದ ಮೇಲಂತೂ ತನ್ನ ಮಗುವಿಗಾಗಿಗೇ ಜೀವನ ಮೀಸಲಿಡುತ್ತಾಳೆ. ಈ ತಾಯಿಯೂ ಹಾಗೇ. ತನ್ನ ಮಗಳಿಗಾಗಿ ತನ್ನೆಲ್ಲಾ ನೋವುಗಳನ್ನ ಮರೆತಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು.

ಆ ಮಹಿಳೆ ಮಗುವಿಗೆ ಜನ್ಮ ನೀಡಿ ಕೇವಲ 12 ದಿನಗಳಷ್ಟೇ ಕಳೆದಿತ್ತು. ಆದರೆ ಪತಿ ವಿಧಿಯಾಟಕ್ಕೆ ಬಲಿಯಾಗಿದ್ದ. ಒಂದ್ಕಡೆ ಹಸುಗೂಸು, ಇನ್ನೊಂದು ಕಡೆ ಗಂಡನ ಸಾವು. ತನ್ನೆಲ್ಲಾ ನೋವುಗಳನ್ನ ನುಂಗಿಕೊಂಡು ಮಗಳಿಗಾಗಿಯೇ ತಾಯಿ ಬದುಕೋಕೆ ಆರಂಭಿಸಿದ್ದಳು. ದಿಟ್ಟತನ ಮಾಡಿ ಮಗಳನ್ನ ಓದಿಸಿ ಇಂಜಿನಿಯರ್ ಮಾಡಿದ್ದಳು ತಾಯಿ. ಕೆಲ ವರ್ಷ ಮಗಳು ಖಾಸಗಿ ಕಂಪನಿಯಲ್ಲಿ ಸೇವೆ ಕೂಡಾ ಸಲ್ಲಿದ್ದಳು. ಆದರೆ ನೋವಲ್ಲೇ ಬದುಕಿ ನೋವಲ್ಲೇ ಬಾಳಿದ್ದ ತಾಯಿಗೆ ಮತ್ತೊಂದು ಆಘಾತಕಾರಿ ಸತ್ಯ ಗೊತ್ತಾಗಿತ್ತು. ಕ್ಯಾನ್ಸರ್ (Cancer) ಎಂಬ ರೋಗ ಮುದ್ದಿನ ಮಗಳನ್ನು ಬಲಿ ತೆಗೆದುಕೊಂಡಿತು.

ಇದನ್ನೂ ಓದಿ : ಪ್ರಯಾಣಿಕರ ಸೀಟಿನಲ್ಲಿ ಕುಳಿತು ಕಾಲಿನಲ್ಲಿ ಸ್ಟೇರಿಂಗ್ ತಿರುಗಿಸುವ ಭೂಪ! – ಅಬ್ಬಬ್ಬಾ.. ಭೀತಿ ಹುಟ್ಟಿಸುತ್ತೆ ಈತನ ಸ್ಟಂಟ್‌!

ದಾವಣಗೆರೆಯ (Davanagere Lady Teacher) ಶಿಕ್ಷಕಿ ಜಿಎನ್ ಕಮಲಮ್ಮರವರ ಪುತ್ರಿ ಕಾವ್ಯ ಹುಟ್ಟತ್ತಲೇ ತಂದೆಯ ಮುಖ ನೋಡದ ಮಗುವಾಗಿದ್ದಳು. ಅಂತಹವಳಿಗೆ ಕ್ಯಾನ್ಸರ್ ಬಳುವಳಿಯಾಗಿ ಬಂದಿತ್ತು. ನಾಲ್ಕು ವರ್ಷ ಅ ಮಹಾಮಾರಿಯೊಂದಿಗೆ ಹೋರಾಡಿದ ಕಾವ್ಯ ಕೊನೆಗೂ ಕ್ಯಾನ್ಸರ್ ಗೆ ಶರಣಾಗಿದ್ದಾಳೆ. ಆದ್ರೆ ಕಾವ್ಯ ಸಾವಿನ ಮುನ್ನ ಪಟ್ಟ ಮಹದಾಸೆಯನ್ನು ತಾಯಿ ಕಮಲಮ್ಮ ಈಡೇರಿಸಿದ್ದಾರೆ. ಮಗಳ ಸುಂದರ ಮೂರ್ತಿ ನಿರ್ಮಿಸಿ ‘ನನ್ನ ಮಗಳು ಜೀವಂತ ಇದ್ದಾಳೆ’ ಎಂದು ಭಾವಿಸಿ ಒಂಟಿ ಜೀವನ ಸಾಗಿಸುತ್ತಿದ್ದಾರೆ. ದಾವಣಗೆರೆ ನಗರದ ಸರಸ್ವತಿ ಬಡಾವಣೆಯ ನಿವಾಸಿ ನಿವೃತ್ತ ಶಿಕ್ಷಕಿ ಜಿಎನ್ ಕಮಲಮ್ಮನವರ ಪುತ್ರಿ ಕಾವ್ಯರವರು ಇದ್ದಕ್ಕಿದ್ದಂತೆ ಚಿಕ್ಕ ವಯಸ್ಸಿನಲ್ಲೇ ಕ್ಯಾನ್ಸರ್ ಗೆ ತುತ್ತಾಗಿದ್ದ ನತದೃಷ್ಟ ಯುವತಿ. ಬಿಇ ಪದವಿ ಪಡೆದಿರುವ ಕಾವ್ಯರವರಿಗೆ ಗಂಡು ಓಕೆ ಆಗಿ ಮದುವೆಯೂ ನಿಶ್ಚಿಯಾವಾಗಿತ್ತು. 2019 ರ ಏಪ್ರಿಲ್ ಮೇ ತಿಂಗಳಲ್ಲೇ ಕಾವ್ಯ ವೈವಾಹಿಕ ಜೀವನಕ್ಕೆ ಕಾಲಿಡ್ಬೇಕಿತ್ತು. ದುರಂತ ಅಂದ್ರೆ ಹಸೆಮಣೆ ಏರುವ ಮೊದಲೇ ಕಾವ್ಯ ಕ್ಯಾನ್ಸರ್ ಗೆ ತುತ್ತಾಗಿದ್ದಳು. 2019 ರಲ್ಲಿ ಬೆಂಗಳೂರಿನ‌ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ಆರಂಭ ಮಾಡಿದ್ದರು, ಹೀಗೆ ಸತತ ನಾಲ್ಕು ವರ್ಷಗಳ ಕಾಲ ಮಹಾಮಾರಿ ಕ್ಯಾನ್ಸರ್ ಜೊತೆ ಹೋರಾಡಿದ ನತದೃಷ್ಟೆ ಕಾವ್ಯ ಊಟ ಮಾಡ್ತಾ ಮಾಡ್ತಾ ತಾಯಿಯ ಮಡಿಲಲ್ಲಿ ಮಲಗಿ ಡಿ.10, 2022 ರಂದು ಕೊನೆಯುಸಿರೆಳೆದಳು.

ಸಾವಿಗೂ ಮುನ್ನ ಸಮಾಧಿ ಮಾಡಿ ಉದ್ಯಾನವನ ನಿರ್ಮಿಸಿ ತನ್ನ ಮೂರ್ತಿ ಮಾಡ್ಸಮ್ಮಾ, ಮೃತದೇಹವನ್ನು ದಾನ ಮಾಡು ಎಂದು ಕಾವ್ಯ ತನ್ನತಾಯಿಗೆ ಹೇಳಿದ್ದಳಂತೆ. ಅದ್ರೇ ಡಿಸೀಜ್ ಇರುವುದರಿಂದ ಬಾಡಿ ಡೊನೇಶನ್​ ಮಾಡಲಾಗಲ್ಲ ಎಂದು ವೈದ್ಯರು ನಿರಾಕರಿಸಿದ್ದರಿಂದ ತಾಯಿ ಕಮಲಮ್ಮನವರು ಒಂದೂವರೆ ಲಕ್ಷ ರೂಪಾಯಿ ನೀಡಿ ದಾವಣಗೆರೆ ತಾಲೂಕಿನ ಗೋಪನಾಳು ಗ್ರಾಮದಲ್ಲಿ 04 ಗುಂಟೆ ಜಮೀನಿ ಖರೀದಿ ಮಾಡಿ ಶವಸಂಸ್ಕಾರ ಮಾಡಿದ್ದರು. ಕಾವ್ಯಳ ಕೊನೆಯಾಸೆಯಂತೆ ಉದ್ಯಾನವನ, ಗಿಡಗಳನ್ನು ನೆಟ್ಟು ಸಮಾಧಿ ಮಾಡಿ, ಅದರ ಮೇಲೆ ಡೈಮಂಡ್ ಶೇಪ್ ಕಮಾನು ನಿರ್ಮಿಸಿದ್ದಾರೆ. ಮಗಳನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ತಾಯಿ ಸೋತಿದ್ದರು. ಕ್ಯಾನ್ಸರ್ ಗೆ ತುತ್ತಾಗಿದ್ದ ತನ್ನ ಮುದ್ದು ಮಗಳು ಕಾವ್ಯಳನ್ನು ಉಳಿಸಿಕೊಳ್ಳಲು 04 ವರ್ಷಗಳಲ್ಲಿ ತಾಯಿ ಕಮಲಮ್ಮ ಒಟ್ಟು 40 ಲಕ್ಷ ಖರ್ಚು ಮಾಡಿದ್ದಾರೆ. ಆದರೂ ಮಗಳು ಬದುಕಿ ಬರಲೇ ಇಲ್ಲ.

ಹುಟ್ಟತ್ತಲೇ ತಂದೆಯನ್ನು ಕಳೆದುಕೊಂಡಿದ್ದ ಮೃತ ಕಾವ್ಯರವರು ತಂದೆ ಇಲ್ಲ ಎಂಬ ಪಾಪ ಪ್ರಜ್ಞೆ ಹಾಗೂ ಅನಾಥ ಭಾವನೆ ಕಾಡಬಾರದೆಂಬ ರೀತಿಯಲ್ಲಿ ಸಾಕಿ ತಾಯಿ ಕಮಲಮ್ಮರವರೇ ತಂದೆ ಸ್ಥಾನ ತುಂಬಿದ್ದರು. ಕಾವ್ಯಳು ಸಹ ಉದಾತ್ತ, ಆದರ್ಶ ಹಾಗೂ ಮೌಲ್ಯಯುತ ಗುಣಗಳನ್ನು ಹೊಂದಿದ್ದಳು. ರಾಣೇಬೆನ್ನೂರಿನ ಇಂಜಿನಿಯರ್ ಕಾಲೇಜಿನಲ್ಲಿ ಬಿಇ ಪದವಿ ಪಡೆದಿದ್ದಳು. ಬೆಂಗಳೂರಿನಲ್ಲಿ ಎರಡು ವರ್ಷ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ್ದಳು. ತನ್ನ ಮೊಬೈಲ್ ನಲ್ಲಿ ಅದೊಮ್ಮೆ ಮಹಿಳೆಯೊಬ್ಬರ ಮೂರ್ತಿಯ ವಿಡಿಯೋವೊಂದನ್ನು ವೀಕ್ಷಿಸಿ ಈ ರೀತಿಯ ಗಿಫ್ಟ್​​​​ ನನಗೂ ಮಾಡ್ಸಮ್ಮಾ ಎಂದು ಅಮ್ಮನಿಗೆ ಸೂಚ್ಯವಾಗಿ ಹೇಳಿದ್ದಳು. ಜೊತೆಗೆ, ಅಮ್ಮ ಈಗಾಗಲೇ ಜೀವನದುದ್ದಕ್ಕೂ ನೀನು ನೊಂದಿದ್ದೀಯಾ, ನನ್ನ ಮೂರ್ತಿ ಮನೆಯಲ್ಲಿ ಇದ್ರೇ ನಾನು ನಿಜವಾಗಿಯೂ ಮನೆಯಲ್ಲಿದ್ದೇನೆ ಎಂದು ಭಾವಿಸಿ ಜೀವನ ಮಾಡಬಹುದು. ನನ್ನ ಸಾವಿನ ಬಳಿಕ ಅಮ್ಮ ಕುಗ್ಗುವುದಿಲ್ಲ ಎಂಬ ಭಾವನೆ ಕಾವ್ಯಳ ತಲೆಗೆ ಬಂದಿತ್ತು. ಅದ್ದರಿಂದ ಮೂರ್ತಿ ಮಾಡ್ಸಮ್ಮಾ ಎಂದು ಜೀವ ಹೋಗುವ ಅಂತಿಮ ದಿನಗಳಲ್ಲಿ ಹೇಳಿದ್ದನ್ನು ನೆನೆದು ತಾಯಿ ಕಮಲಮ್ಮ ಕಣ್ಣೀರು ಹಾಕುತ್ತಾರೆ ಈಗ. ಮಗಳು ಜೊತೆಯಲ್ಲೇ ಇದ್ದಾಳೆಂಬ ಭಾವನೆ ಇರಲಿ ಎಂದು ಮೂರ್ತಿ ಮಾಡಿಸಿದ ತಾಯಿ ಕಮಲಮ್ಮ, ಮಗಳ ಆಸೆಯಂತೆ ಪುತ್ರಿ ಕಾವ್ಯ ಸಾವನಪ್ಪಿದ ಕೆಲವೆ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮೂರ್ತಿ ಮಾಡುವವರನ್ನು ಹುಡುಕಿ ಕಲಾವಿದ ವಿಶ್ವನಾಥ್ ಎಂಬುವವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದರು. ಬೆಂಗಳೂರು ಮೂಲದ ಕಲಾವಿದ ವಿಶ್ವನಾಥ್ ಅವರು 3.30 ಲಕ್ಷ ರೂಪಾಯಿಗೆ, ಸಿಲಿಕಾನ್ ಮಾದರಿಯ ಕಾವ್ಯಳ ಸುಂದರ ಮೂರ್ತಿಯನ್ನು ತಾಯಿಯ ಭಾವನೆಗೆ ಮಣಿದು ನಿರ್ಮಿಸಿಕೊಟ್ಟಿದ್ದಾರೆ.

ಈ ಮೂರ್ತಿಯ ವಿಶೇಷವೆಂದರೆ ಮನುಷ್ಯನ ಚರ್ಮದ ಮಾದರಿಯಲ್ಲೇ ಈ ಮೂರ್ತಿಯನ್ನು ನಿರ್ಮಿಸಿ ಕೊಟ್ಟಿರುವುದು. ಈ ಸಿಲಿಕಾನ್ ಮಾದರಿಯ ಮೂರ್ತಿಯನ್ನು ಮನೆಯಲ್ಲಿಟ್ಟುಕೊಂಡು ತಾಯಿ ಕಮಲಮ್ಮ ಅವರು ಜೀವನ ನಡೆಸುತ್ತಿದ್ದಾರೆ. ಇನ್ನು ಕಾವ್ಯಳ ನೋವಿನ ಕಥೆ ಕೇಳಿ ಕಲಾವಿದ ವಿಶ್ವನಾಥ್ ರವರು 5 ಲಕ್ಷ ವೆಚ್ಚದ ಮೂರ್ತಿಯನ್ನು ಲಾಭವಿಲ್ಲದೆ, 3.30 ಲಕ್ಷ ರೂಪಾಯಿಗೆ ನಿರ್ಮಿಸಿಕೊಟ್ಟಿದ್ದಾರೆ. ಈ ವೇಳೆ ಕಲ್ಯಾಣ ಮಂಟಪದಲ್ಲಿ ಅದ್ಧೂರಿ ಕಾರ್ಯಕ್ರಮ‌ ಮಾಡಿ ಮೂರ್ತಿಯನ್ನು ಇರಿಸಿ ಮಗಳ ಹೆಸರಿನಲ್ಲಿ ಪುಸ್ತಕ ಬಿಡುಗಡೆ ಮಾಡಲಾಗಿದೆ. ಮಗಳು ಕಾವ್ಯಳ ಮೂರ್ತಿ ಮನೆಯಲ್ಲಿರುವುದರಿಂದ ತಾಯಿ ಕಮಲಮ್ಮನವರು ಆ ಮೂರ್ತಿಯೇ ತನ್ನ ಮಗಳೆಂದು ಭಾಸ ಮಾಡಿಕೊಂಡು ಅದರೊಂದಿಗೆ ಲವಲವಿಕೆಯಿಂದ ಮಾತನಾಡಿಕೊಂಡು ಮನೆಯಲ್ಲಿ ಕಾಲಕಳೆಯುತ್ತಿದ್ದಾರೆ. ಸರ್ಕಾರಿ ಶಿಕ್ಷಕರಾಗಿ 27 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಕಮಲಮ್ಮನವರು ಮಕ್ಕಳಿಗೆ ವಿದ್ಯಾ ದಾನ ಮಾಡಿದ್ದಾರೆ. ಈಗ ನಿವೃತ್ತಿ ಹೊಂದಿದ ನಂತರ ನಿತ್ಯ ಮಗಳ ಮೂರ್ತಿಯೊಂದಿಗೆ ಬದುಕುತ್ತಿದ್ದಾರೆ. ಆದರೆ ಕಮಲಮ್ಮನವರಿಗೆ ಇಡೀ ಬದುಕಿನುದ್ದಕ್ಕೂ ಬರೀ ನೋವನ್ನೇ ಕೊಟ್ಟಿದ್ದು ಮಾತ್ರ ದುರಂತ.

Shantha Kumari