ತಂದೆಯಿಂದ ಮಗಳ ಮರ್ಯಾದೆ ಗೇಡು ಹತ್ಯೆ – ಪ್ರೇಯಸಿಯ ಕೊಲೆ ವಿಚಾರ ತಿಳಿದು ಪ್ರಿಯಕರನಿಂದ ಆತ್ಮಹತ್ಯೆ..!

ತಂದೆಯಿಂದ ಮಗಳ ಮರ್ಯಾದೆ ಗೇಡು ಹತ್ಯೆ – ಪ್ರೇಯಸಿಯ ಕೊಲೆ ವಿಚಾರ ತಿಳಿದು ಪ್ರಿಯಕರನಿಂದ ಆತ್ಮಹತ್ಯೆ..!

ಹದಿಹರಯದ ಪ್ರೀತಿ. ಪ್ರೇಮಿಗಳಿಗೆ ಪ್ರೀತಿ ಬಿಟ್ಟು ಬೇರೇನೂ ಕಾಣಿಸುವುದೇ ಇಲ್ಲ. ಪೋಷಕರ ಬಗ್ಗೆ ಆ ಹೊತ್ತಿನಲ್ಲಿ ಚಿಂತಿಸುವ ಮನಸ್ಥಿತಿಯೂ ಪ್ರೇಮಿಗಳಿಗಿಲ್ಲ. ಆದರೆ, ಮಕ್ಕಳ ಭಾವನೆಗಳ ಬಗ್ಗೆ ಪೋಷಕರು ಕೂಡಾ ಸರಿಯಾಗಿಯೇ ಸ್ಪಂದಿಸಬೇಕು. ಮಕ್ಕಳು ಪ್ರೀತಿ ಮಾಡಿದರೆ, ಎಲ್ಲಾ ಸರಿಯಾದರೆ ಚೆನ್ನಾಗಿಯೇ ಇರುತ್ತದೆ. ಇಲ್ಲವಾದರೆ, ಹೆತ್ತವರು ಮಕ್ಕಳ ಭವಿಷ್ಯಕ್ಕಾಗಿ ಸ್ವಲ್ಪ ಕಟುವಾಗಿಯೂ ವರ್ತಿಸಬೇಕಾಗುತ್ತದೆ. ಮಕ್ಕಳಿಗೆ ತಿದ್ದಿ ತೀಡಿ ಸರಿ, ತಪ್ಪುಗಳನ್ನು ಬುದ್ದಿವಾದದ ಮೂಲಕ ಹೇಳಬೇಕಾಗುತ್ತದೆ. ಆದರೆ, ಇಲ್ಲೊಂದು ದಾರುಣ ಘಟನೆ ನಡೆದಿದೆ. ಇಲ್ಲಿ ತಂದೆ ಮಗಳ ಪ್ರೀತಿಗೆ ಅಡ್ಡ ಬಂದಿದ್ದೂ ಅಲ್ಲದೇ, ಕೆಳಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಕರುಳ ಕುಡಿಯ ಕುತ್ತಿಗೆಯನ್ನೇ ಹಿಸುಕಿ ಕೊಂದಿದ್ದಾನೆ. ಇಷ್ಟಕ್ಕೆ ನಿಂತಿಲ್ಲ ದುರಂತದ ಸಾವು. ಪ್ರೇಯಸಿಯ ಹತ್ಯೆ ಸುದ್ದಿ ಕೇಳಿ ಪ್ರಿಯಕರನೂ ಪ್ರಾಣಬಿಟ್ಟಿದ್ದಾನೆ.

ಇದನ್ನೂ ಓದಿ: ಕಂತೆ ಕಂತೆ ಹಣ, ಚಿನ್ನಾಭರಣ.. ಮನೆಯಲ್ಲಿ ಆಮೆಗಳು ಪತ್ತೆ – ಭ್ರಷ್ಟಾಧಿಕಾರಿಗಳ ಸಂಪತ್ತು ಬಯಲಿಗೆಳೆದ ಲೋಕಾಯುಕ್ತ

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೋಡಗುರ್ಕಿ ಗ್ರಾಮದಲ್ಲಿ ಈ ಮರ್ಯಾದಾ ಹತ್ಯೆ ನಡೆದಿದೆ. ಪರಿಶಿಷ್ಟ ಜಾತಿಯ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ತಂದೆಯೇ ಮಗಳ ಹತ್ಯೆ ಮಾಡಿದ್ದಾನೆ. ಇತ್ತ ಯುವತಿ ಸಾವಿನ ಸುದ್ದಿ ತಿಳಿದು ಪ್ರಿಯಕರ ಕೂಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. 20 ವರ್ಷದ ಮಗಳು ಕೀರ್ತಿ, ದಲಿತ ಯುವಕನನ್ನು ಪ್ರೀತಿಸುತ್ತಿದ್ದಾಳೆ ಎಂಬ ವಿಚಾರ ತಂದೆ ಕೃಷ್ಣಮೂರ್ತಿಗೆ ಗೊತ್ತಾಗುತ್ತದೆ. ಕೋಲಾರ ಜಿಲ್ಲೆಯ ಕೆಜಿಎಫ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ಓದುತ್ತಿದ್ದ ಮಗಳು, ಪಿಯುಸಿಯಲ್ಲಿ ಅನುತ್ತೀರ್ಣನಾಗಿದ್ದ ಗಂಗಾಧರ್ ನನ್ನು ಪ್ರೀತಿ ಮಾಡುತ್ತಿದ್ದಳು. ಗಂಗಾಧರ್, ಗಾರೆ ಕೆಲಸ ಮಾಡುತ್ತಿದ್ದ. ಇಬ್ಬರ ಮನೆ ಕೂಡ ಒಂದೇ ಕಡೆಯಿದ್ದು ಪ್ರೀತಿ ಮೂಡಿದೆ. ಮದುವೆಯಾಗುವ ನಿರ್ಧಾರ ಕೂಡಾ ಇಬ್ಬರೂ ಮಾಡಿದ್ದರು. ಈ ವಿಚಾರ ತಿಳಿದ ಮೇಲೆ ತಂದೆ ಕೃಷ್ಣಮೂರ್ತಿ, ಮಗಳನ್ನು ಪ್ರಶ್ನೆ ಮಾಡಿದ್ದಾರೆ. ಆದರೆ, ಆತನನ್ನೇ ಮದುವೆಯಾಗುವುದಾಗಿ ಯುವತಿ ಹಠ ಹಿಡಿದಿದ್ದಾಳೆ.

ತಂದೆಗೆ ತಿಳಿದು ಸೋಮವಾರ ರಾತ್ರಿ ಜಗಳ ನಡೆದಿದೆ. ಈ ವೇಳೆ ಯುವತಿ ಅವನನ್ನೇ ಮದುವೆಯಾಗುವುದಾಗಿ ಹಟ ಹಿಡಿದಿದ್ದಾಳೆ. ಇದರಿಂದ ಕೋಪಗೊಂಡ ತಂದೆ ಬೆಳಗಿನ ಜಾವ ಮಗಳನ್ನು ಉಸಿರುಗಟ್ಟಿಸಿ ಕೊಂದೇ ಬಿಟ್ಟಿದ್ದಾನೆ. ಈ ವಿಷಯ ತಿಳಿದು ಯುವಕ ಗಂಗಾಧರ್, ಮೈಸೂರು ಚೆನ್ನೈ ಎಕ್ಸ್‌ಪ್ರೆಸ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಪೊಲೀಸರು ಮಗಳನ್ನು ಕೊಂದ ಕೊಲೆಗಾರ ತಂದೆಯನ್ನು ಬಂಧಿಸಿದ್ದಾರೆ. ಗ್ರಾಮದಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್ ನೇಮಿಸಲಾಗಿದೆ. ಕಾಮಸಮುದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

suddiyaana