ಮದುವೆಯಾದ ಮಾರನೇ ದಿನವೇ ಮದುಮಗ ಮಾಯ – ಟ್ರಾಫಿಕ್ ಜಾಮ್ ನಲ್ಲೇ ಪತ್ನಿ ಬಿಟ್ಟು ಪರಾರಿ..!

ಮದುವೆಯಾದ ಮಾರನೇ ದಿನವೇ ಮದುಮಗ ಮಾಯ – ಟ್ರಾಫಿಕ್ ಜಾಮ್ ನಲ್ಲೇ ಪತ್ನಿ ಬಿಟ್ಟು ಪರಾರಿ..!

ಮನೆಯವರೆಲ್ಲಾ ನೋಡಿ ಮದುವೆ ನಿಶ್ಚಯ ಮಾಡಿದ್ರು. ವಧುವರ ಇಬ್ಬರೂ ಸಮ್ಮತಿ ಸೂಚಿಸಿದ್ರು. ಅಂತೆಯೇ ಎರಡೂ ಕುಟುಂಬಸ್ಥರು, ಸಂಬಂಧಿಗಳು, ಸ್ನೇಹಿತರೆಲ್ಲಾ ಸೇರಿ ವಿವಾಹ ನೆರವೇರಿಸಿದ್ರು. ಇನ್ನೇನು ಬದುಕಿಗೆ ಜೊತೆಗಾರ ಸಿಕ್ಕ ಅಂತಾ ಮದುಮಗಳು ಖುಷಿಯಲ್ಲಿದ್ಲು. ಆತನ ಬಗ್ಗೆ ಹತ್ತಾರು ಕನಸು ಕಾಣ್ತಿದ್ಲು. ಆದ್ರೆ ಮದುವೆಯಾದ ಮಾರನೇ ದಿನವೇ ಮದುಮಗ ಮಾಯವಾಗಿದ್ದಾನೆ. ಬೆಂಗಳೂರಿನ ಟ್ರಾಫಿಕ್ ಜಾಮ್​ನಲ್ಲೇ ಪರಾರಿಯಾಗಿದ್ದಾನೆ.

ಹೌದು. ಈ ಮದುವೆ ನಡೆದು ದಿನ ಕೂಡ ಕಳೆದಿರಲಿಲ್ಲ. ಅಷ್ಟರಲ್ಲಾಗಲೇ ಪತ್ನಿಯನ್ನ ಬಿಟ್ಟು ಮದುಮಗ ಎಸ್ಕೇಪ್ ಆಗಿದ್ದಾನೆ. ಅದೂ ಕೂಡ ಟ್ರಾಫಿಕ್ ಜಾಮ್​ನಲ್ಲಿ ಅನ್ನೋದೇ ಅಚ್ಚರಿ. ವಿಷ್ಯ ಏನಂದ್ರೆ ಫೆಬ್ರವರಿ 15 ರಂದು ವಿಜಯ್ ಜಾರ್ಜ್ ಅನ್ನೋನ ಜೊತೆ ಯುವತಿ ಮದುವೆಯಾಗಿದ್ದಳು. ಮರುದಿನ ಇಬ್ಬರೂ ಚರ್ಚ್‌ಗೆ ಭೇಟಿ ನೀಡಿ ವಾಪಸ್ ಆಗ್ತಿದ್ರು. ಈ ವೇಳೆ ನವದಂಪತಿ ಚಲಿಸ್ತಿದ್ದ ಕಾರು ಪೈ ಲೇಔಟ್ ಬಳಿ 10 ನಿಮಿಷ ಟ್ರಾಫಿಕ್ ಜಾಮ್‌ನಲ್ಲಿ ನಿಂತಿತ್ತು. ಬೇರೆ ವಾಹನಗಳ ಸವಾರರೆಲ್ಲಾ ಏನ್ ಟ್ರಾಫಿಕ್ ಮಾರಾಯ ಅಂತಾ ಹಿಡಿಶಾಪ ಹಾಕ್ತಿದ್ರು. ಆದ್ರೆ ಮದುಮಗ ಮಾತ್ರ ಇದೇ ಒಳ್ಳೆ ಚಾನ್ಸ್ ಅನ್ಕೊಂಡು ಕಾರಿನಿಂದ ಇಳಿದು ಓಟ ಕಿತ್ತಿದ್ದ. ಮದುಮಗ ಏಕಾಏಕಿ ಕಾರಿನಿಂದ ಇಳಿದು ಓಡೋದನ್ನ ಕಂಡು ಮದುಮಗಳಿಗೆ ಗಾಬರಿಯಾಗಿದೆ. ಕೂಡಲೇ ಆಕೆ ಕೂಡ ಕಾರಿನಿಂದ ಇಳಿದು ತನ್ನ ಪತಿಯನ್ನ ಹಿಂಬಾಲಿಸಿಕೊಂಡು ಓಡಿದ್ದಾರೆ. ಅಷ್ಟರಲ್ಲಿ ಮದುಮಗ ಕಾಣೆಯಾಗಿದ್ದಾನೆ. ಹೀಗಾಗಿ ಹತಾಶಳಾದ ಪತ್ನಿ ಪೊಲೀಸರ ಮೊರೆ ಹೋಗಿದ್ದಾರೆ.

ಇದನ್ನೂ ಓದಿ : ‘ನಿನ್ನ ಗಂಡ ಬದುಕಿದ್ದಾನೆ ತಾನೇ, ಹಣೆಗೆ ಬೊಟ್ಟು ಇಟ್ಕೋ’ – ಮಹಿಳೆ ಮುಂದೆ ನಾಲಗೆ ಹರಿಬಿಟ್ಟ ಬಿಜೆಪಿ ಸಂಸದ!

ಅಷ್ಟಕ್ಕೂ ಇಲ್ಲಿ ಮದುಮಗ ಓಡಿ ಹೋಗೋಕೆ ಕಾರಣವೇ ಪರಸ್ತ್ರೀ ಮೋಹ. ಚಿಕ್ಕಾಬಳ್ಳಾಪುರ ಜಿಲ್ಲೆ ಚಿಂತಾಮಣಿಯವರಾದ ವಿಜಯ್ ಜಾರ್ಜ್ ಕರ್ನಾಟಕ ಹಾಗೂ ಗೋವಾದಲ್ಲಿದ್ದ ಮ್ಯಾನ್‌ಪವರ್ ಏಜೆನ್ಸಿಯನ್ನು ನೋಡಿಕೊಳ್ಳುತ್ತಿದ್ದ. ಇದೇ ಸಮಯದಲ್ಲಿ ಗೋವಾದ ಏಜೆನ್ಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎರಡು ಮಕ್ಕಳ ತಾಯಿಯಾಗಿದ್ದ ಕ್ಲರ್ಕ್ ಜೊತೆ ಸಂಬಂಧ ಬೆಳೆಸಿದ್ದಾನೆ.

ಯಾವಾಗ ಜಾರ್ಜ್ ವಿವಾಹಿತೆ ಜೊತೆ ಸಂಬಂಧ ಇಟ್ಟುಕೊಂಡಿರುವುದು ಗೊತ್ತಾಯ್ತೋ ಕುಟುಂಬಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಈ ಸಂಬಂಧವನ್ನು ಕೊನೆಗಾಣಿಸುವುದಾಗಿ ತಾಯಿಗೆ ಭರವಸೆ ನೀಡಿದ್ದಾನೆ. ಇಷ್ಟಾದ ಮೇಲೂ ಆತ ಕದ್ದುಮುಚ್ಚಿ ಆಕೆಯೊಂದಿಗೆ ಸಂಬಂಧ ಹೊಂದಿದ್ದ. ಹೀಗಾಗಿ ಇದನ್ನು ಇಲ್ಲಿಗೇ ಮುಕ್ತಾಯಗೊಳಿಸಬೇಕೆಂಬ ನಿಟ್ಟಿನಲ್ಲಿ ಜಾರ್ಜ್ ಕುಟುಂಬಸ್ಥರು ಬೇರೆ ಕಡೆ ಆತನಿಗೆ ವಿವಾಹ ನಿಶ್ಚಯಿಸಿದ್ದರು.  ಆದರೆ ಜಾರ್ಜ್‌ನ ವಿವಾಹದ ವಿಷಯ ತಿಳಿಯುತ್ತಿದ್ದಂತೆ ಆತನ ಮಾಜಿ ಪ್ರಿಯತಮೆ ಬ್ಲಾಕ್‌ಮೇಲ್ ಮಾಡಿ ತಮ್ಮ ಖಾಸಗಿ ಫೋಟೋಗಳನ್ನು ಕುಟುಂಬಸ್ಥರಿಗೆ ಕಳಿಸೋದಾಗಿ ಬೆದರಿಸಿದ್ದಳಂತೆ. ಹೀಗಾಗಿ ಜಾರ್ಜ್ ತುಂಬಾ ಮಂಕಾಗಿದ್ದರು ಹಾಗೂ ಆತ್ಮಹತ್ಯೆಗೂ ಯತ್ನಿಸಿದ್ದರು ಎಂದು ಜಾರ್ಜ್ ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಿವಾಹಕ್ಕೂ ಮುನ್ನ ಜಾರ್ಜ್ ಅಕ್ರಮ ಸಂಬಂಧದ ಬಗ್ಗೆ ತಿಳಿದಿತ್ತು. ಆದರೆ ಜಾರ್ಜ್ ತಮ್ಮ ಸಂಬಂಧವನ್ನು ಕೊನೆಗಾಣಿಸುವುದಾಗಿ ಮಾತುಕೊಟ್ಟಿದ್ದರು. ಹೀಗಾಗಿ ವಿವಾಹಕ್ಕೆ ಸಮ್ಮತಿಸಿದೆ ಎಂದು ಪತ್ನಿ ಪೊಲೀಸರಿಗೆ ತಿಳಿಸಿದ್ದಾರೆ. ಮದುವೆಯ ನಂತರ ಜಾರ್ಜ್ ಮಾಜಿ ಪ್ರಿಯತಮೆಯ ಬ್ಲಾಕ್‌ಮೇಲ್ ಬಗ್ಗೆ ಪತ್ನಿಗೆ ತಿಳಿಸಿದ್ದರು. ಇಂತಹ ಸಮಯದಲ್ಲಿ ತಾನು ಹಾಗೂ ತನ್ನ ಕುಟುಂಬ ಆತನ ಜೊತೆಗಿರುವುದಾಗಿ ಆಶ್ವಾಸನೆ ನೀಡಿದ್ದೆ ಎಂದು ತಿಳಿಸಿದ್ದಾರೆ. ಸದ್ಯ ಪತಿ ಮರಳುತ್ತಾರೆಂಬ ನಿರೀಕ್ಷೆಯಲ್ಲಿರುವ ಪತ್ನಿ ವಿಜಯ್ ಜಾರ್ಜ್ ಏಕೆ ಇಂತಹ ನಿರ್ಧಾರ ಕೈಗೊಂಡರು ಎಂಬುದು ತಿಳಿಯುತ್ತಿಲ್ಲ. ಸುರಕ್ಷಿತರಾಗಿದ್ದಾರೆ ಮತ್ತು ಮರಳಿ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ಹೆಂಡತಿ ಕಾಯುತ್ತಿದ್ದಾಳೆ.

suddiyaana