ಕೋರಮಂಗಲದ ಕಟ್ಟಡವೊಂದರಲ್ಲಿ ಬೆಂಕಿ ಅವಘಡ ಪ್ರಕರಣ – ಕೆಫೆ  ಮಾಲೀಕ ನಾಪತ್ತೆ

ಕೋರಮಂಗಲದ ಕಟ್ಟಡವೊಂದರಲ್ಲಿ ಬೆಂಕಿ ಅವಘಡ ಪ್ರಕರಣ – ಕೆಫೆ  ಮಾಲೀಕ ನಾಪತ್ತೆ

ಬೆಂಗಳೂರಿನ ಕೊರಮಂಗಲದಲ್ಲಿ ಕಟ್ಟಡವೊಂದರಲ್ಲಿ ನಾಲ್ಕನೇ ಮಹಡಿಯಲ್ಲಿ ಬುಧವಾರ ಭಾರಿ ಅಗ್ನಿ ಅವಘಡ ಸಂಭವಿಸಿತ್ತು. ಈ ಸಂಬಂಧ ಪೊಲೀಸರು ಕೆಫೆ  ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಕೆಫೆ ಮಾಲೀಕರು ದುರ್ಘಟನೆ ಬಳಿಕ ತಲೆಮರೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಬುಧವಾರ ಮಧ್ಯಾಹ್ನದ ವೇಳೆ ಕೆಫೆಯೊಂದರಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಕೆಫೆ ಮಾಲೀಕ ಕರಣ್ ಜೈನ್ ಹಾಗೂ ಕಟ್ಟಡ ಮಾಲೀಕ ಕುಟಾಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನಿರ್ಲಕ್ಷ್ಯದ ಆರೋಪದ ಹಿನ್ನೆಲೆ ಐಪಿಸಿ ಸೆಕ್ಷನ್ 338, 286 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಕರಣ್ ಜೈನ್ ನಾಪತ್ತೆಯಾಗಿದ್ದು, ತನ್ನ ಮೊಬೈಲ್ ಫೋನ್ ಅನ್ನು ಸ್ವಿಚ್‌ಆಫ್ ಮಾಡಿಕೊಂಡಿದ್ದಾನೆ. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಪೊಲೀಸರು ಎಫ್‌ಐಆರ್ ದಾಖಲಾಗುತ್ತಿದ್ದಂತೆ ಕೆಫೆ ಮಾಲೀಕ ಕರಣ್ ಜೈನ್ ಹಾಗೂ ಕಟ್ಟಡದ ಮಾಲೀಕ ಕುಟಾಲ್‌ಗೆ ನೋಟಿಸ್ ನೀಡಿದ್ದಾರೆ.

ಇದನ್ನೂ ಓದಿ: ಕೋರಮಂಗಲದಲ್ಲಿ ಧಗಧಗನೆ ಹೊತ್ತಿಯುರಿದ ಕಟ್ಟಡ – ಬೆಂಕಿಯಿಂದ ತಪ್ಪಿಸಿಕೊಳ್ಳಲು ಜಿಗಿದ ವ್ಯಕ್ತಿಯ ಸ್ಥಿತಿ ಚಿಂತಾಜನಕ

ಏನಿದು ಘಟನೆ?

ಬುಧವಾರ ಕೋರಮಂಗಲದ ಬೃಹತ್ ಕಟ್ಟಡವೊಂದರ 4ನೇ ಅಂತಸ್ತಿನಲ್ಲಿದ್ದ ಮಡ್‌ಪೈಪ್ ಕೆಫೆ ಎಂಬ ರೆಸ್ಟೋರೆಂಟ್‌ನಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ರೆಸ್ಟೋರೆಂಟ್‌ನಲ್ಲಿ ಜೋಶಿ, ಪ್ರೇಮ್ ಎನ್ನುವವರು ಅಡುಗೆ ಮಾಡುತ್ತಿದ್ದರು. ಈ ವೇಳೆ 15 ಸಿಲಿಂಡರ್‌ಗಳ ಪೈಕಿ 4 ಸಿಲಿಂಡರ್‌ಗಳು ಸ್ಫೋಟಗೊಂಡಿವೆ.

ತಕ್ಷಣವೇ ಪ್ರೇಮ್ ಕಟ್ಟಡದ 4ನೇ ಮಹಡಿಯಿಂದ ಜಿಗಿದಿದ್ದಾನೆ. ಬೆಂಕಿ ಅದೇ ಕಟ್ಟಡದಲ್ಲಿದ್ದ ಜಿಮ್ ಹಾಗೂ ಕಾರ್ ಶೋ ರೂಮ್‌ಗೂ ವ್ಯಾಪಿಸಿದೆ. 4 ಬೈಕ್‌ಗಳು ಭಸ್ಮ ಆದರೆ, ಶೋರೂಮ್‌ನ 1 ಕಾರು ಅರ್ಧಂಬರ್ಧ ಸುಟ್ಟುಹೋಗಿದೆ. 6 ಅಗ್ನಿಶಾಮಕ ವಾಹನಗಳು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದೆ.

4ನೇ ಮಹಡಿಯಿಂದ ಜಿಗಿದಿದ್ದ ಪ್ರೇಮ್ ತಲೆಗೆ ಗಂಭೀರ ಗಾಯವಾಗಿದ್ದು, ಕೈ ಮುರಿದು ಹೋಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಪ್ರೇಮ್‌ಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.

Shwetha M