ಕರಡಿ ದಾಳಿಯಿಂದ ಕಣ್ಣುಗುಡ್ಡೆ ಕಿತ್ತುಬಂದರೂ 2 ಕಿಮೀ ನಡೆದು ಬಂದ ವ್ಯಕ್ತಿ!

ಕರಡಿ ದಾಳಿಯಿಂದ ಕಣ್ಣುಗುಡ್ಡೆ ಕಿತ್ತುಬಂದರೂ 2 ಕಿಮೀ ನಡೆದು ಬಂದ ವ್ಯಕ್ತಿ!

 ಉತ್ತರ ಕನ್ನಡ: ವ್ಯಕ್ತಿಯೊಬ್ಬ ರಸ್ತೆಯಲ್ಲಿ ನಡೆದು ಬರುತ್ತಿರುವಾಗ ಆತನ ಮೇಲೆ ಕರಡಿ ದಾಳಿ ನಡೆಸಿದೆ. ಕರಡಿ ದಾಳಿಯಿಂದ ಆತನ ಕಣ್ಣುಗುಡ್ಡೆ ಕಿತ್ತು ಬಂದಿದೆ. ಆದರೂ ಕೂಡ ಆತ 2 ಕಿಮೀ ನಡೆದುಕೊಂಡು ಬಂದಿರುವ ಘಟನೆ ಉತ್ತರಕನ್ನಡ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.

ಇದನ್ನೂ ಓದಿ: ವಿದ್ಯುತ್ ದರ ಏರಿಕೆಗೆ ವಿರೋಧ – ರಾಜ್ಯದ ಹಲವೆಡೆ ವ್ಯಾಪಾರಿಗಳು, ಸಣ್ಣ ಕೈಗಾರಿಕೆಗಳ ಮಾಲೀಕರಿಂದ ಪ್ರತಿಭಟನೆ

ಮಹಾರಾಷ್ಟ್ರದ ವಿಟ್ಟು ಶೆಳಾಕೆ (70) ಕರಡಿ ದಾಳಿಗೆ ತುತ್ತಾದ ವ್ಯಕ್ತಿ. ಶಳಾಕೆ ರಾಮನಗರದಿಂದ ತಿಂಬೋಲಿ ಗ್ರಾಮಕ್ಕೆ ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕರಡಿ ದಾಳಿ ನಡೆಸಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.  ಅವರ ಒಂದು ಕಣ್ಣನ್ನು ಕಿತ್ತುಹಾಕಿದೆ ಮತ್ತು ಇನ್ನೊಂದು ಕಣ್ಣಿಗೂ ಗಾಯ ಉಂಟುಮಾಡಿದೆ. ಆದರೆ, ವೃದ್ಧ ದೃತಿಗೆಡದೆ ಧೈರ್ಯದಿಂದ ಕರಡಿ ವಿರುದ್ಧ ಹೋರಾಡಿ, ಕಿರುಚುತ್ತಾ, ಕೂಗಾಡಿದ್ದಾರೆ. ಇದರಿಂದ ಕರಡಿ ಗಾಬರಿಯಿಂದ ಅಲ್ಲಿಂದ ಕಾಲ್ಕಿತ್ತಿದೆ. ಕರಡಿ ಅವರನ್ನು ಬಿಟ್ಟು ಕಾಡಿನಲ್ಲಿ ಕಣ್ಮರೆಯಾದ ನಂತರ, ತೀವ್ರ ರಕ್ತಸ್ರಾವವಾಗುತ್ತಿದ್ದರೂ ಕೂಡ ವೃದ್ಧ ಸುಮಾರು ಎರಡು ಕಿ.ಮೀ. ನಡೆದು ಜೀವ ಉಳಿಸಿಕೊಂಡಿದ್ದಾರೆ.

ಶಳಾಕೆ ಅವರ ಸ್ಥಿತಿ ಚಿಂತಾಜನಕವಾಗಿದ್ದು ರಾಮನಗರದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಆಸ್ಪತ್ರೆಗೆ ರವಾನಿಸಲಾಗಿದೆ. ರಾಮನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಮಧ್ಯೆ, ಕರಡಿ ದಾಳಿಯು ಆ ಪ್ರದೇಶದ ಜನರಲ್ಲಿ ಭಯ ಮತ್ತು ಆತಂಕವನ್ನು ಉಂಟುಮಾಡಿದೆ. ಕರಡಿ ದಾಳಿಯಿಂದ ಜನರನ್ನು ರಕ್ಷಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಅರಣ್ಯಾಧಿಕಾರಿಗಳು ಕೂಡ ಈ ಪ್ರದೇಶದ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.

suddiyaana