ಅಜಿತ್ ಅಗರ್ಕರ್ ಗೆ ಗೇಟ್ ಪಾಸ್ – HITಮ್ಯಾನ್ ಕೆಣಕಿದ್ದೇ ಮುಳುವಾಯ್ತಾ?
VVS ಲಕ್ಷ್ಮಣ್ ಗೆ ಒಲಿಯುತ್ತಾ ಪಟ್ಟ?

ಟೀಂ ಇಂಡಿಯಾದಲ್ಲಿ ಹೆಡ್ಕೋಚ್ ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ ಜೋಡಿಯ ನಿರ್ಧಾರಗಳು ಸಾಕಷ್ಟು ವಿರೋಧಗಳಿಗೆ ಕಾರಣವಾಗಿವೆ. ತಂಡದ ಆಯ್ಕೆ, ಅನುಭವಿಗಳ ನಿರ್ಲಕ್ಷ್ಯ, ಪ್ಲೇಯಿಂಗ್ 11, ಬ್ಯಾಟಿಂಗ್ ಎಕ್ಸ್ಪೆರಿಮೆಂಟ್ ಹೀಗೆ ಸಾಕಷ್ಟು ವಿಚಾರಗಳಲ್ಲಿ ಬ್ಯಾಕ್ ಫೈರ್ ಆಗ್ತಾನೇ ಇತ್ತು. ಆದ್ರೀಗ ಈ ಇಬ್ಬರ ದೋಸ್ತಿಗೆ ಬ್ರೇಕ್ ಬೀಳೋ ಟೈಂ ಬಂದಿದೆ. ಅಜಿತ್ ಅಗರ್ಕರ್ ಗೆ ಗೇಟ್ಪಾಸ್ ಟೈಂ ಹತ್ತಿರವಾಗಿದೆ. ರೋಹಿತ್ ಶರ್ಮಾ ಬಗೆಗಿನ ಉದ್ಧಟತನವೇ ಮುಳುವಾಗಿದೆ.
ಇದನ್ನೂ ಓದಿ : ಅಫ್ಘನ್ ಚೆಂಡಾಡಿದ ಚೇಟಾ – ಸೂರ್ಯವಂಶಿಗೆ ಬೆಂಚ್ ಫಿಕ್ಸ್
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ ಅತಿದೊಡ್ಡ ಬದಲಾವಣೆಯ ಟೈಂ ಬಂದಿದೆ. ಮೆನ್ಸ್ ತಂಡದಲ್ಲಿ ಸೆಲೆಕ್ಷನ್ ಕಮಿಟಿ ಮುಖ್ಯಸ್ಥರಾಗಿರೋ ಅಜಿತ್ ಅಗರ್ಕರ್ ಅವರ ಅಧಿಕಾರಾವಧಿ ಮುಕ್ತಾಯದ ಹೊಸ್ತಿಲಲ್ಲಿದೆ. 2023ರ ಜುಲೈನಲ್ಲಿ ಅಗರ್ಕರ್ ಮುಖ್ಯ ಆಯ್ಕೆದಾರರಾಗಿ ಅಧಿಕಾರ ವಹಿಸಿಕೊಂಡಿದ್ದರು. ಬಿಸಿಸಿಐನ ಒಪ್ಪಂದ 2026ರ ಅಕ್ಟೋಬರ್ 4ವರೆಗೂ ಇದ್ದು ಆ ನಂತ್ರದಲ್ಲಿ ಮತ್ತೆ ಅವ್ರನ್ನೇ ಕಂಟಿನ್ಯೂ ಮಾಡ್ಬೇಕಾ ಅಂದ್ರೆ ಒಪ್ಪಂದವನ್ನ ವಿಸ್ತರಣೆ ಮಾಡ್ಬೇಕಾ ಅನ್ನೋ ಬಗ್ಗೆ ಚರ್ಚೆಯಾಗಿತ್ತು. ಮುಂದಿನ ವರ್ಷದ ಏಕದಿನ ವಿಶ್ವಕಪ್ ವರೆಗೆ ಅಗರ್ಕರ್ ಅವರ ಒಪ್ಪಂದವನ್ನು ವಿಸ್ತರಿಸುವ ಬಗ್ಗೆ ಮಾತುಗಳು ಕೇಳಿ ಬಂದಿದ್ವು. ಆದ್ರೆ ಬಿಸಿಸಿಐನ ಅಧಿಕಾರಿಗಳು ಅಗರ್ಕರ್ರನ್ನ ಉಳಿಸಿಕೊಳ್ಳೋಕೆ ತಯಾರಿಲ್ಲ. ಹೀಗಾಗಿ ಅಕ್ಟೋಬರ್ 4ಕ್ಕೆ ಅಗರ್ಕರ್ ಕುರ್ಚಿ ಖಾಲಿ ಮಾಡ್ಬೇಕಿದೆ.
ರೋಹಿತ್ ಶರ್ಮಾ ಅವ್ರ ಭವಿಷ್ಯದ ಬಗೆಗಿನ ಹೇಳಿಕೆಯೇ ಮುಳುವಾಯ್ತಾ?
ಅಷ್ಟಕ್ಕೂ ಕಳೆದ ಜೂನ್ನಲ್ಲೇ ಅಗರ್ಕರ್ ಒಪ್ಪಂದ ಮುಗಿದಿದ್ದು ಅಕ್ಟೋಬರ್ 4ರವರೆಗೆ ಬಿಸಿಸಿಐ ವಿಸ್ತರಿಸಿತ್ತು. ಮುಂದಿನ ವರ್ಷ ಅಕ್ಟೋಬರ್ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ವರೆಗೆ ತಮ್ಮ ಒಪ್ಪಂದವನ್ನು ಕಂಟಿನ್ಯೂ ಮಾಡ್ಬೇಕು ಅಂತಾ ಅಗರ್ಕರ್ ಅನ್ಕೊಂಡಿದ್ರು. ಆದ್ರೆ ಈ ಬಗ್ಗೆ ಬಿಸಿಸಿಐ ಉನ್ನತ ಅಧಿಕಾರಿಗಳಲ್ಲಿ ಈ ಬಗ್ಗೆ ಒಮ್ಮತ ಮೂಡಿಲ್ಲ. ಕೆಲವ್ರು ಕಂಟಿನ್ಯೂ ಮಾಡೋಣ ಅಂದ್ರೆ ಇನ್ನೂ ಕೆಲವ್ರು ಬೇಡ ಅಂತಾ ಪಟ್ಟು ಹಿಡಿದಿದ್ರು. ಅದಕ್ಕೆ ಕಾರಣ ರೋಹಿತ್ ಶರ್ಮಾ ಅವರ ಏಕದಿನ ಕೆರಿಯರ್ನೂ ಮುಗಿಸೋಕೆ ಅಗರ್ಕರ್ ಪ್ರಯತ್ನಿಸಿದ್ದರು ಎನ್ನುವ ಆರೋಪಗಳಿವೆ. 2027ರ ವಿಶ್ವಕಪ್ಗೆ ರೋಹಿತ್ ಶರ್ಮಾ ನಮ್ಮ ಪ್ಲಾನ್ನಲ್ಲಿ ಇಲ್ಲ ಎಂದು ಅಗರ್ಕರ್ ಮತ್ತು ಅವರ ತಂಡ ಓಪನ್ನಾಗೇ ಸ್ಟೇಟ್ಮೆಂಟ್ಸ್ ಕೊಟ್ಟಿದ್ರು. ಆದರೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ರೋಹಿತ್ಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ್ದರು. ಇದೇ ವಿಚಾರ ಆಯ್ಕೆ ಸಮಿತಿ ಮತ್ತು ಬಿಸಿಸಿಐ ನಾಯಕರ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು. ಇದಾದ ಮೇಲೆ ಬಿಸಿಸಿಐ ಉನ್ನತ ಅಧಿಕಾರಿಗಳು ಮತ್ತು ಆಯ್ಕೆ ಸಮಿತಿಯ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಹೀಗಾಗಿ ಬಿಸಿಸಿಐ ಕಡೆಯಿಂದ ಯಾವುದೇ ಮಾತುಕತೆ ನಡೆಯದ ಹಿನ್ನೆಲೆಯಲ್ಲಿ, ವೆಸ್ಟ್ ಇಂಡೀಸ್ ಸರಣಿಯ ತಂಡದ ಆಯ್ಕೆ ಬಳಿಕ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರಿಗೆ ಧನ್ಯವಾದ ಪತ್ರ ಕಳುಹಿಸಿ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಎನ್ನಲಾಗಿದೆ. ಆಲ್ರೆಡಿ ಹೊಸ ಅಧ್ಯಕ್ಷರು ಯಾರು ಅನ್ನೋ ರೇಸ್ ಕೂಡ ಶುರುವಾಗಿದೆ.
ಅಗರ್ಕರ್ ಜಾಗಕ್ಕೆ ಮೂವರ ರೇಸ್.. ಯಾರು ಫೈನಲ್?
ಇನ್ನು ಅಗರ್ಕರ್ ಜಾಗಕ್ಕೆ ಯಾರು ಅನ್ನೋ ಬಗ್ಗೆ ಆಲ್ರೆಡಿ ಚರ್ಚೆಗಳು ಶುರುವಾಗಿವೆ. ಅಗರ್ಕರ್ ಜಾಗಕ್ಕೆ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮುಖ್ಯಸ್ಥ, ಟೀಂ ಇಂಡಿಯಾದ ಮಾಜಿ ಆಟಗಾರ ವಿ.ವಿ.ಎಸ್. ಲಕ್ಷ್ಮಣ್ ಹೊಸ ಚೀಫ್ ಸೆಲೆಕ್ಟರ್ ಆಗಿ ಅಧಿಕಾರ ವಹಿಸಿಕೊಳ್ಳುವ ಬಗ್ಗೆ ಸುದ್ದಿ ಇದೆ. ಅಟ್ ದಿ ಸೇಮ್ ಟೈಂ ಭಾರತದ ಮಾಜಿ ಆಟಗಾರರಾದ ಪಾರ್ಥಿವ್ ಪಟೇಲ್ ಮತ್ತು ಪ್ರಗ್ಯಾನ್ ಓಜಾ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಬಿಸಿಸಿಐ ನಿಯಮಗಳ ಪ್ರಕಾರ, ಆಯ್ಕೆ ಸಮಿತಿಯಲ್ಲಿ ಕನಿಷ್ಠ ಒಬ್ಬ ವಿಕೆಟ್ ಕೀಪರ್ ಇರಬೇಕು. ಈ ಹಿನ್ನೆಲೆಯಲ್ಲಿ ಪಾರ್ಥಿವ್ ಪಟೇಲ್ ಅವರು ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗ್ತಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ 95ನೇ ವಾರ್ಷಿಕ ಮಹಾಸಭೆಯು ನಾಳೆ ಅಂದ್ರೆ ಸೆಪ್ಟೆಂಬರ್ 18ರಂದು ಮುಂಬೈನಲ್ಲಿರುವ ಬಿಸಿಸಿಐ ಪ್ರಧಾನ ಕಛೇರಿಯಲ್ಲಿ ನಡೆಯಲಿದೆ. ಆ ಸಭೆಯ ಬಳಿಕ ಹೊಸ ಮುಖ್ಯ ಆಯ್ಕೆದಾರರ ಹೆಸರನ್ನು ಅಧಿಕೃತವಾಗಿ ಅನೌನ್ಸ್ ಮಾಡೋ ಸಾಧ್ಯತೆಗಳಿವೆ.

ನೋಡಿರಿ

