ವೈಭವ್ ಜೊತೆ ಸ್ಯಾಮ್ಸನ್ ಓಪನರ್?- ಬುಮ್ರಾಗೆ ಪ್ರಿನ್ಸ್ ಯಾದವ್ ಬ್ಯಾಕಪ್

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು
ಮಹಿಳಾ ಏಷ್ಯಾಕಪ್ನಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ದುಬೈನಲ್ಲಿ ಮುಖಾಮುಖಿಯಾಗಲಿವೆ. ಭಾರತ ಈಗಾಗಲೇ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡಿದ್ದು, ಸತತ ಗೆಲುವಿನ ಆತ್ಮವಿಶ್ವಾಸದಲ್ಲಿದೆ. ಪಾಕಿಸ್ತಾನ ವಿರುದ್ಧವೂ ಗೆಲುವಿನ ಓಟ ಮುಂದುವರಿಸುವ ಗುರಿ ಹೊಂದಿದೆ. ಪಂದ್ಯ ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.
ಹಾಂಗ್ಕಾಂಗ್ ವಿರುದ್ಧ ಮೂರು ವಿಕೆಟ್ ಪಡೆದ ದೀಪ್ತಿ ಶರ್ಮಾ ಮಹಿಳಾ T20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ. ಭಾರತದ ಬೌಲಿಂಗ್ ವಿಭಾಗದಲ್ಲಿ ದೀಪ್ತಿ ಪ್ರಮುಖ ಅಸ್ತ್ರವಾಗಿದ್ದು, ಏಷ್ಯಾಕಪ್ನ ಮುಂದಿನ ಪಂದ್ಯಗಳಲ್ಲೂ ಅವರ ಪ್ರದರ್ಶನದ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.
ಅಫ್ಘಾನಿಸ್ತಾನ ವಿರುದ್ಧದ ಮುಂಬರುವ T20 ಸರಣಿಗೆ ಸಂಜು ಸ್ಯಾಮ್ಸನ್ ಮರಳಿರುವ ಹಿನ್ನೆಲೆಯಲ್ಲಿ, ವೈಭವ್ ಸೂರ್ಯವಂಶಿ ಜೊತೆ ಅವರು ಆರಂಭಿಕರಾಗಿ ಆಡಬೇಕೇ ಎಂಬ ಚರ್ಚೆ ಆರಂಭವಾಗಿದೆ. ಅಫ್ಘಾನಿಸ್ತಾನ ವಿರುದ್ಧದ ಸರಣಿಗೆ ಸಂಜು ಸ್ಯಾಮ್ಸನ್ ತಂಡಕ್ಕೆ ಮರಳಿದ್ದಾರೆ. ಮತ್ತೊಂದೆಡೆ, ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹೀಗಾಗಿ ಓಪನಿಂಗ್ ಸ್ಥಾನಕ್ಕೆ ವೈಭವ್ ಮತ್ತು ಸಂಜು ಸ್ಯಾಮ್ಸನ್ ಬರಬೇಕು ಅನ್ನೋ ಚರ್ಚೆ ಜೋರಾಗಿದೆ.
ಮೊಹಮ್ಮದ್ ಸಿರಾಜ್ ದುಲೀಪ್ ಟ್ರೋಫಿ ಫೈನಲ್ನಲ್ಲಿ ಸೌತ್ ಜೋನ್ ಪರ ಆಡಲಿದ್ದಾರೆ. ಇತ್ತೀಚಿನ ಪ್ರದರ್ಶನದ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಪಂದ್ಯ ಸಿರಾಜ್ಗೆ ತಮ್ಮ ಲಯವನ್ನು ಮರಳಿ ಪಡೆಯಲು ಮಹತ್ವದ ಅವಕಾಶವಾಗಿದೆ. ದೇವದತ್ ಪಡಿಕ್ಕಲ್ ಕೂಡ ತಂಡಕ್ಕೆ ಸೇರ್ಪಡೆಯಾಗಿದ್ದು, ಫೈನಲ್ ಮತ್ತಷ್ಟು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಸೆನ್ಸೇಷನ್ ಅಲ್ಲ LEGEND ಗುರಿ – BCCIಗೆ ಸೂರ್ಯವಂಶಿಯದ್ದೇ ಭಯ
ಅಫ್ಘಾನಿಸ್ತಾನ್ ತಂಡದ ಸ್ಫೋಟಕ ಬ್ಯಾಟರ್ ರಹಮಾನುಲ್ಲಾ ಗುರ್ಬಾಝ್ ಪಾಕಿಸ್ತಾನ್ ತಂಡದ ಬಾಬರ್ ಆಝಂ ದಾಖಲೆ ಮುರಿದು ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್ನ 26ನೇ ಪಂದ್ಯದಲ್ಲಿ ಜಮೈಕಾ ಕಿಂಗ್ಸ್ಮೆನ್ ವಿರುದ್ಧ ಗಯಾನಾ ಅಮೆಝಾನ್ ವಾರಿಯರ್ಸ್ ಪರ ಕಣಕ್ಕಿಳಿದ ರಹಮಾನುಲ್ಲಾ ಗುರ್ಬಾಝ್ ಕೇವಲ 35 ಎಸೆತಗಳಲ್ಲಿ 54 ರನ್ ಬಾರಿಸಿದ್ದರು. ಈ 54 ರನ್ಗಳೊಂದಿಗೆ ಟಿ20 ಕ್ರಿಕೆಟ್ನಲ್ಲಿ 7 ಸಾವಿರ ರನ್ ಪೂರೈಸಿದ್ದಾರೆ. ಈ 7000 ರನ್ಗಳೊಂದಿಗೆ, ಟಿ20 ಕ್ರಿಕೆಟ್ ಇತಿಹಾಸದಲ್ಲೇ 7 ಸಾವಿರ ರನ್ ಪೂರೈಸಿದ ವಿಶ್ವದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ದಾಖಲೆ ಬಾಬರ್ ಹೆಸರಿನಲ್ಲಿತ್ತು.
ಅಫ್ಘಾನಿಸ್ತಾನ್ ವಿರುದ್ಧದ ಟಿ20 ಸರಣಿಗೆ ವಾಷಿಂಗ್ಟನ್ ಸುಂದರ್ ಅವರ ಆಯ್ಕೆಯನ್ನು ಮಾಜಿ ನಾಯಕ ಕ್ರಿಸ್ ಶ್ರೀಕಾಂತ್ ತೀವ್ರವಾಗಿ ಟೀಕಿಸಿದ್ದು, ಕೇವಲ ವೈದ್ಯರ ಪ್ರಮಾಣಪತ್ರದ ಆಧಾರದ ಮೇಲೆ ಆಟಗಾರರನ್ನು ಆಯ್ಕೆ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇವಲ ವೈದ್ಯಕೀಯ ಪ್ರಮಾಣಪತ್ರ ಇಟ್ಟುಕೊಂಡು ಯಾರನ್ನೂ ತಂಡಕ್ಕೆ ಆಯ್ಕೆ ಮಾಡಬಾರದು. ಭಾರತ ತಂಡಕ್ಕೆ ಮರಳುವ ಮುನ್ನ ಅವರು ಯಾವುದಾದರೂ ಒಂದು ಮಟ್ಟದ ದೇಶೀಯ ಅಥವಾ ಸ್ಪರ್ಧಾತ್ಮಕ ಕ್ರಿಕೆಟ್ ಆಡಿ ತಮ್ಮ ಫಿಟ್ನೆಸ್ ಸಾಬೀತುಪಡಿಸಬೇಕಿತ್ತು” ಎಂದು ವಾದಿಸಿದ್ದಾರೆ.
ಟೀಮ್ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರಿತ್ ಬುಮ್ರಾ ಅವರ ಟೆಸ್ಟ್ ಕ್ರಿಕೆಟ್ ಪುನರಾಗಮನಕ್ಕೆ ಬಿಸಿಸಿಐ ಹಾಗೂ ರಾಷ್ಟ್ರೀಯ ಆಯ್ಕೆ ಸಮಿತಿ ಮಹತ್ವದ ಷರತ್ತೊಂದನ್ನು ವಿಧಿಸಿದೆ. ಮುಂಬರುವ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಬುಮ್ರಾ ಕಡ್ಡಾಯವಾಗಿ ಕನಿಷ್ಠ ಒಂದು ದೇಶಿ ಫಸ್ಟ್-ಕ್ಲಾಸ್ ಪಂದ್ಯವನ್ನು ಆಡಬೇಕೆಂದು ಆಯ್ಕೆ ಸಮಿತಿ ಸೂಚಿಸಿದೆ. ಬುಮ್ರಾ ಅವರು ನವೆಂಬರ್ 2025 ರ ನಂತರ ಯಾವುದೇ ಪ್ರಥಮ ದರ್ಜೆ ಅಥವಾ ಟೆಸ್ಟ್ ಪಂದ್ಯವನ್ನು ಆಡಿಲ್ಲ, ಹೀಗಾಗಿ ಈ ನಿರ್ಧಾರವನ್ನ ಬಿಸಿಸಿಐ ಕೈ ಗೊಂಡಿದೆ.
ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಅವರಿಗೆ ಬಿಸಿಸಿಐ ವೈದ್ಯಕೀಯ ತಂಡದಿಂದ ಇನ್ನೂ ಫಿಟ್ನೆಸ್ ಅನುಮತಿ ಸಿಕ್ಕಿಲ್ಲ. ಹೀಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಯ್ಕೆದಾರರು ಪ್ರಿನ್ಸ್ ಯಾದವ್ ಅವರನ್ನು ಗಾಯದ ಸಮಸ್ಯೆಯಿಂದ ಬಳಲುತ್ತಿರೋ ಬುಮ್ರಾ ಬದಲಿಗೆ ಸಂಭವನೀಯ ಬ್ಯಾಕಪ್ ಆಗಿ ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ.
ದುಲೀಪ್ ಟ್ರೋಫಿಯ ಫೈನಲ್ ಕದನಕ್ಕೆ ವೇದಿಕೆ ಸಿದ್ಧವಾಗಿದೆ. ಪ್ರಶಸ್ತಿಗಾಗಿ ಸೌತ್ ಜೋನ್ ಮತ್ತು ಈಸ್ಟ್ ಜೋನ್ ತಂಡಗಳು ಮುಖಾಮುಖಿಯಾಗಲಿವೆ. ನಾಳೆಯಿಂದ ಸೆಪ್ಟಂಬರ್ 10 ತನಕ ಚೆನ್ನೈನ ಐತಿಹಾಸಿಕ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ಆರಂಭವಾಗಲಿದೆ. ಸೌತ್ ಜೋನ್ VS ಈಸ್ಟ್ ಜೋನ್ ತಂಡ ಸೆಮಿಫೈನಲ್ನಲ್ಲಿ ಕಾದಾಟ ನಡೆಸಲಿದೆ. ಯುವ ತಾರೆ ವೈಭವ್ ಸೂರ್ಯವಂಶಿ ಹಾಗೂ ನಾಯಕ ಇಶಾನ್ ಕಿಶನ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಅಮೆರಿಕದಲ್ಲಿ ಕ್ರಿಕೆಟ್ ಅನ್ನು ಕ್ರಿಕೆಟ್ ಎಂದು ಕರೆಯುವುದನ್ನು ನಿಲ್ಲಿಸಬೇಕೆಂದು ರಿಕಿ ಪಾಟಿಂಗ್ ಹೇಳಿದ್ದಾರೆ. ಅಮೆರಿಕನ್ನರಿಗೆ ಕ್ರಿಕೆಟ್ ಎಂದ ತಕ್ಷಣ ನೆನಪಿಗೆ ಬರುವುದು ದಿನಗಟ್ಟಲೆ ನಡೆಯುವ ಟೆಸ್ಟ್ ಪಂದ್ಯಗಳು ಅಥವಾ ಇಡೀ ದಿನ ತೆಗೆದುಕೊಳ್ಳುವ ಏಕದಿನ ಪಂದ್ಯಗಳು. ಅಮೆರಿಕದ ಇಂತಹ ಸಾಂಪ್ರದಾಯಿಕ ಮನಸ್ಥಿತಿಯನ್ನು ಬದಲಾಯಿಸಲು ಅಮೆರಿಕದಲ್ಲಿ ಈ ಆಟವನ್ನು ‘ಕ್ರಿಕೆಟ್’ ಎಂದು ಕರೆಯುವುದನ್ನು ನಿಲ್ಲಿಸಿ, ಬದಲಿಗೆ ಕೇವಲ ‘ಟಿ20’ ಎಂದು ಪ್ರಚಾರ ಮಾಡಬೇಕೆಂದು ರಿಕಿ ಪಾಂಟಿಂಗ್ ಸಲಹೆ ನೀಡಿದ್ದಾರೆ.

ನೋಡಿರಿ

