ಮಾನಕ್ಕಾಗಿ ಭಾರತ ಕೆಣಕಿದ ನಖ್ವಿ – ಸೋಲು ಮುಂದಿಟ್ಟು ಸೊಕ್ಕಿನ ಮಾತು
ಏಷ್ಯಾಕಪ್, ವಿಶ್ವಕಪ್ ಗೆದ್ದಿದ್ಯಾರು?

ಮಾನಕ್ಕಾಗಿ ಭಾರತ ಕೆಣಕಿದ ನಖ್ವಿ – ಸೋಲು ಮುಂದಿಟ್ಟು ಸೊಕ್ಕಿನ ಮಾತುಏಷ್ಯಾಕಪ್, ವಿಶ್ವಕಪ್ ಗೆದ್ದಿದ್ಯಾರು?

ಪಾಕಿಸ್ತಾನ ಕ್ರಿಕೆಟ್​ನಲ್ಲಿ ಈಗ ಹೆಜ್ಜೆ ಹೆಜ್ಜೆಗೂ ಡ್ರಾಮಾಗಳೇ.. ಒಂದಿಲ್ಲೊಂದು ವಿವಾದಗಳೇ. ಅಲ್ಲಿನ ಕ್ರಿಕೆಟ್ ಬೋರ್ಡ್ ಹಾಗೇ ಅಧ್ಯಕ್ಷನ ವಿರುದ್ಧ ಮಾಜಿ ಕ್ರಿಕೆಟರ್​ಗಳೇ ರೊಚ್ಚಿಗೆದ್ದಿದ್ದಾರೆ.. ಶೇಮ್​ಲೆಸ್, ಕ್ರಿಕೆಟ್ ಬೋರ್ಡ್​ನೇ ಡಿಸ್ಮಿಸ್ ಮಾಡಿ ಅಂತೆಲ್ಲಾ ಟೀಸ್ ಮಾಡ್ತಿದ್ದಾರೆ. ಆದ್ರೆ ಇದಕ್ಕೆಲ್ಲಾ ಸಮಜಾಯಿಸಿ ನೀಡಬೇಕಿರೋ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಈ ವಿಚಾರದಲ್ಲಿ ಭಾರತವನ್ನ ಎಳೆದು ತಂದಿದ್ದಾರೆ. ಭಾರತದ ಒಂದು ಸೋಲನ್ನು ಮುಂದಿಟ್ಟು ಜಾರಿಕೊಳ್ಳೋ ಯತ್ನ ಮಾಡಿದ್ದಾರೆ.

ಇದನ್ನೂ ಓದಿ : HITಮ್ಯಾನ್ ಬಿಟ್ಟು ODI ವಿಶ್ವಕಪ್ – BCCI ಸಭೆಯಲ್ಲಿ ರೋಹಿತ್ ಭವಿಷ್ಯ

ಪಾಕ್ ಕ್ರಿಕೆಟ್​ಗೂ ವಿವಾದಗಳಿಗೂ ಎಲ್ಲಿಲ್ಲದ ನಂಟು.. ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧದ 2 ಟೆಸ್ಟ್ ಪಂದ್ಯ ಸೋಲ್ತಿದ್ದಂತೆ ಸರಣಿ ನಡುವೆಯೇ ಅರ್ಧಕ್ಕರ್ಧ ಆಟಗಾರರಿಗೆ ಗೇಟ್​ಪಾಸ್ ಕೊಟ್ಟಿದ್ರು. ಕೋಚ್​ನೂ ಮನೆಗೆ ಕಳ್ಸಿದ್ರು. ಌಂಡ್ ಇಂಜುರಿ ನಾಟಕವಾಡಿದ್ದ ಆಟಗಾರನಿಗೆ ಬ್ಯಾನ್ ಶಿಕ್ಷೆಯೂ ಆಯ್ತು.  ಡ್ರೆಸ್ಸಿಂಗ್ ರೂಮ್​ನಲ್ಲಿನ ಜುಗಲ್​ಬಂಧಿ, ಆಟಗಾರರ ನಡುವಿನ ಬಿರುಕು, ಇಮ್ರಾನ್ ಖಾನ್ ಪುತ್ರರ ಇಂಟರ್​ವ್ಯೂ, ಆಯ್ಕೆ ಸಮಿತಿಯಲ್ಲಿ ರಾಜೀನಾಮೆ ಪರ್ವ, ಕೋಚ್​ಗಳು ಮತ್ತು ಸ್ಟಾಫ್ಸ್ ನಿರಂತರ ಬದಲಾವಣೆ, ರಾಜಕೀಯ ಹಸ್ತಕ್ಷೇಪ, ಸತತ ಸೋಲುಗಳು ಹೀಗೆ ಒಂದಾ ಎರಡಾ.. ಹೇಳ್ತಾ ಹೋದ್ರೆ ಮುಗಿಯೋದೇ ಇಲ್ಲ. ಹೆಜ್ಜೆ ಹೆಜ್ಜೆಗೂ ಅವಮಾನ ಅನುಭವಿಸ್ತಿರೋ ಪಾಕಿಸ್ತಾನ ಕ್ರಿಕೆಟ್ ತಂಡ ಶೋಚನೀಯ ಸ್ಥಿತಿ ತಲುಪಿದೆ. ಈ ವಿಚಾರವಾಗಿ ಪಾಕ್ ತಂಡದ ಅಧ್ಯಕ್ಷ ಮೊಹ್ಸಿನ್ ನಖ್ವಿಯನ್ನ ಪ್ರಶ್ನಿಸಿದ್ರೆ ಭಾರತವನ್ನ ಉದಾಹರಣೆಯಾಗಿ ನೀಡಿ ಉದ್ಧಟತನ ಮೆರೆದಿದ್ದಾರೆ.

ಭಾರತ ಐರ್ಲೆಂಡ್ ವಿರುದ್ಧ ಸೋತಿದೆ.. ಕ್ರಿಕೆಟ್ ಕೊನೆಗೊಂಡಿದೆಯೇ?

ಪಾಕಿಸ್ತಾನ ಕ್ರಿಕೆಟ್ ದುಸ್ಥಿತಿಯ ಬಗ್ಗೆ ಲಂಡನ್​ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರೋ ಮೊಹ್ಸಿನ್ ನಖ್ವಿ ಭಾರತದ ಸೋಲನ್ನ ಪ್ರಸ್ತಾಪ ಮಾಡಿದ್ದಾರೆ. ಪಾಕ್ ಕ್ರಿಕೆಟ್‌ನ ಹೀನಾಯ ಸ್ಥಿತಿಯನ್ನ ಸಮರ್ಥಿಸಿಕೊಳ್ಳಲು ಭಾರತದ ಸೋಲನ್ನು ಎತ್ತಿ ತೋರಿಸಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ಪಾಕಿಸ್ತಾನ ತಂಡವು ಸತತವಾಗಿ ಹೀನಾಯ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಕ್ರಿಕೆಟ್ ಮುಗಿದುಹೋಗಿದೆ ಎಂದು ಅಲ್ಲಿನ ಮಾಜಿ ಆಟಗಾರರು ಮತ್ತು ವಿಶ್ಲೇಷಕರು ತೀವ್ರವಾಗಿ ಟೀಕಿಸುತ್ತಿದ್ದರು. ಈ ಟೀಕೆಗಳಿಗೆ ತಿರುಗೇಟು ನೀಡುವ ಭರದಲ್ಲಿ ನಖ್ವಿ, ದಕ್ಷಿಣ ಆಫ್ರಿಕಾ ತಂಡ ನಮೀಬಿಯಾ ವಿರುದ್ಧ ಸೋತಿದೆ, ಭಾರತ ತಂಡ ಐರ್ಲೆಂಡ್ ವಿರುದ್ಧ ಸೋತಿದೆ. ಹಾಗಂದ ಮಾತ್ರಕ್ಕೆ ಆ ದೇಶಗಳಲ್ಲಿ ಕ್ರಿಕೆಟ್ ಕೊನೆಗೊಂಡಿದೆ ಎಂದು ಅರ್ಥವೇ ಎನ್ನುವ ಮೂಲಕ ಪಾಕಿಸ್ತಾನ ಕೂಡ ಸೋತ ಮಾತ್ರವೇ ಕ್ರಿಕೆಟ್ ಮುಗಿದಿಲ್ಲ ಅಂತಾ ಟಾಂಟ್ ಕೊಟ್ಟಿದ್ದಾರೆ. ಅಷ್ಟಕ್ಕೂ ಇಲ್ಲಿ ತಮ್ಮ ವಿರುದ್ಧದ ಆಕ್ರೋಶಗಳಿಂದ ಪಾರಾಗಲು ಭಾರತವೂ ಸೇರಿದಂತೆ ದೊಡ್ಡ ದೊಡ್ಡ ತಂಡಗಳೂ ಸಣ್ಣ ತಂಡಗಳ ಎದುರು ಸೋಲುತ್ತವೆ ಎಂಬ ನೆಪ ಹೇಳಿದ್ದಾರೆ. ಆದ್ರೆ ನಖ್ವಿಯ ಈ ಕಳ್ಳಾಟಕ್ಕೆ ಪಾಕ್​ನಲ್ಲಿ ಮತ್ತೆ ಅಸಮಾಧಾನ ಸ್ಫೋಟಗೊಂಡಿದೆ.

ಭಾರತ ಏಷ್ಯಾಕಪ್, ವಿಶ್ವಕಪ್ ಗೆದ್ದಿದೆ.. ಹೋಲಿಕೆಯೇ ಬೇಡ!

ಪಾಕಿಸ್ತಾನದ ಕೆಲ ಮಾಜಿ ಕ್ರಿಕೆಟರ್​ಗಳಿಗೆ ಪರಿಸ್ಥಿತಿ ಚೆನ್ನಾಗಿ ತಿಳಿದಿದೆ. ಹೀಗಾಗಿ ನಖ್ವಿ ಹುಚ್ಚಾಟಕ್ಕೆ ತಿರುಗೇಟು ಕೊಟ್ಟಿದ್ದಾರೆ. ಭಾರತ ಐರ್ಲೆಂಡ್ ವಿರುದ್ಧ ಸೋತಿದ್ದರೂ ಇತ್ತೀಚಿನ ವರ್ಷಗಳಲ್ಲಿ ಟಿ20 ವಿಶ್ವಕಪ್, ಏಷ್ಯಾ ಕಪ್‌ಗಳನ್ನು ಗೆದ್ದಿದೆ. ಆದರೆ ಪಾಕಿಸ್ತಾನ ತಾಯ್ನಾಡಿನಲ್ಲೇ ಬಾಂಗ್ಲಾದೇಶದ ವಿರುದ್ಧ ಸೋತು, ಈಗ ಇಂಗ್ಲೆಂಡ್ ಎದುರು ಮಂಡಿಯೂರಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಕೊನೆಯ ಸ್ಥಾನದಲ್ಲಿದೆ ಎಂದು ಪಾಕ್ ಕ್ರಿಕೆಟ್ ಅಭಿಮಾನಿಗಳೇ ನಖ್ವಿ ಅವರ ಬೇಜವಾಬ್ದಾರಿ ಹೇಳಿಕೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇಷ್ಟಾದ್ರೂ ನಖ್ವಿ ಮಾತ್ರ ಬುದ್ಧಿ ಕಲಿಯುತ್ತಿಲ್ಲ. ಮತ್ತೆ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಹೌದು ನಾವು ಇತ್ತೀಚೆಗೆ ಟೆಸ್ಟ್ ಪಂದ್ಯಗಳನ್ನ ಸೋತಿದ್ದೇವೆ. ಆದ್ರೆ ಮುಂಬರುವ ದಿನಗಳಲ್ಲಿ ನಾವು ಏಕದಿನ ಮತ್ತು ಟಿ 20ಐಗಳಲ್ಲಿ ಪ್ರಗತಿ ಸಾಧಿಸಿದಂತೆ ಟೆಸ್ಟ್​ನಲ್ಲೂ ಸಾಧಿಸಬಹುದು. ನಾನು ಟೀಕೆಗಳಿಗೆ ಹೆದರಲ್ಲ. ನಾನು ಬಂದಾಗಿನಿಂದ ಪಾಕ್ ಕ್ರಿಕೆಟ್ ನಾಶವಾಗಿದೆ ಅಂತಾ ಕೆಲವರು ಬ್ಲೇಮ್ ಮಾಡ್ತಾರೆ. ಆದ್ರೆ ನಾವು ನಮ್ಮ ಕೋಚಿಂಗ್ ತಂಡವನ್ನು ತರುವ ಮೊದಲು ರ್ಯಾಂಕಿಂಗ್ ಹೇಗಿತ್ತು ನೋಡಿ. ಏಕದಿನಗಳಲ್ಲಿ ಎಂಟನೇ ಸ್ಥಾನದಲ್ಲಿದ್ದೆವು ಮತ್ತು ಈಗ ನಾವು ಐದನೇ ಸ್ಥಾನದಲ್ಲಿದ್ದೇವೆ, ಟಿ 20 ಐಗಳಲ್ಲಿ ನಾವು ಒಂಬತ್ತನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಜಿಗಿದಿದ್ದೇವೆ ಎನ್ನುವ ಮೂಲಕ ನಾನು ಪಿಸಿಬಿ ಅಧ್ಯಕ್ಷ ಆದ್ಮೇಲೆ ತಂಡ ಸುಧಾರಿಸಿದೆ ಎನ್ನುತ್ತಾ ತಮ್ಮ ಬೆನ್ನನ್ನ ತಾವೇ ತಟ್ಟಿಕೊಂಡಿದ್ದಾರೆ. ಆದ್ರೆ ಇದೆಲ್ಲದ್ರ ನಡುವೆ ಭಾರತದ ಒಂದು ಸೋಲಿನ ವಿಚಾರವನ್ನ ಪ್ರಸ್ತಾಪಿಸಿ ತಮ್ಮನ್ನ ತಾವು ಸಮರ್ಥನೆ ಮಾಡಿಕೊಳ್ಳೋದನ್ನ ಯಾರು ಒಪ್ಪೋಕೆ ಸಾಧ್ಯವಿಲ್ಲ ಅಷ್ಟೇ.

Shantha Kumari

Leave a Reply

Your email address will not be published. Required fields are marked *