CSK ಹೆಡ್ ಕೋಚ್ ಮಾರ್ಗನ್? – ಸೂರ್ಯಕುಮಾರ್ ಮೇಲೆ KKR ಕಣ್ಣು!

CSK ಹೆಡ್ ಕೋಚ್ ಮಾರ್ಗನ್? – ಸೂರ್ಯಕುಮಾರ್ ಮೇಲೆ KKR ಕಣ್ಣು!

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಟಿ20 ಕ್ರಿಕೆಟ್ ಟೂರ್ನಿಗಾಗಿ ಭಾರತ ಮತ್ತು ಪಾಕಿಸ್ತಾನ್ ತಂಡಗಳನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಭಾರತ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಿದರೆ, ಪಾಕಿಸ್ತಾನ್ ತಂಡದ ನಾಯಕನಾಗಿ ಸಾಹಿಬ್​ಝಾದ ಫರ್ಹಾನ್ ಆಯ್ಕೆಯಾಗಿದ್ದಾರೆ.  ಉಪನಾಯಕನಾಗಿ ತಿಲಕ್ ವರ್ಮಾ ಕಣಕ್ಕಿಳಿಯಲಿದ್ದಾರೆ. ಇನ್ನು ತಂಡದಲ್ಲಿ ಯುವ ದಾಂಡಿಗ ವೈಭವ್ ಸೂರ್ಯವಂಶಿ ಸ್ಥಾನ ಪಡೆದಿದ್ದಾರೆ.

Pak2026ರ ಏಷ್ಯನ್ ಗೇಮ್ಸ್‌ನ ಆರಂಭಿಕ ಹಂತಗಳಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಪರಸ್ಪರ ಮುಖಾಮುಖಿಯಾಗುವುದಿಲ್ಲ.  ಭಾರತ ಮತ್ತು ಪಾಕಿಸ್ತಾನ್ ಎರಡೂ ತಂಡಗಳು ತಮ್ಮ ಕ್ವಾರ್ಟರ್ ಫೈನಲ್ ಪಂದ್ಯಗಳನ್ನು ಗೆದ್ದರೆ, ಅಕ್ಟೋಬರ್ 1 ರಂದು ನಡೆಯಲಿರುವ ಸೆಮಿಫೈನಲ್‌ನಲ್ಲಿ ಬೇರೆ ಬೇರೆ ಎದುರಾಳಿಗಳ ವಿರುದ್ಧ ಆಡಲಿವೆ. ಹೀಗಾಗಿ, ಎರಡೂ ತಂಡಗಳು ಸೆಮಿಫೈನಲ್‌ನಲ್ಲಿ ಜಯಗಳಿಸಿದರೆ ಅಕ್ಟೋಬರ್ 3 ರಂದು ನಡೆಯಲಿರುವ  ಚಿನ್ನದ ಪದಕದ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯು ಶುಭಮನ್ ಗಿಲ್ ಅವರ ನಾಯಕತ್ವಕ್ಕೆ ಮಹತ್ವದ ಪರೀಕ್ಷೆಯಾಗಲಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಮುರಳಿ ಕಾರ್ತಿಕ್ ಹೇಳಿದ್ದಾರೆ.ಶುಭಮನ್ ಗಿಲ್ ಅವರ ಬ್ಯಾಟಿಂಗ್ ಬಗ್ಗೆ ನನಗೆ ಸ್ವಲ್ಪವೂ ಚಿಂತೆ ಇಲ್ಲ. ಆದ್ರೆ ಗಿಲ್ ಫಿಟ್ ಆಗಿರಬೇಕೆಂದು ಬಯಸುತ್ತೇನೆ. ಯಾಕೆಂದರೆ ಅವರು ಸಾಕಷ್ಟು ಗಾಯಗಳಿಂದ, ಬಹಳಷ್ಟು ತೊಂದರೆಗಳಿಂದ ಬಳಲುತ್ತಿದ್ದಾರೆ. ಅಭ್ಯಾಸ ಪಂದ್ಯದಲ್ಲೂ ಅವರು ಆಡಿಲ್ಲ ಎಂದಿದ್ದಾರೆ.

ಎಲ್ಲ ಮಾದರಿ ಕ್ರಿಕೆಟ್​ಗೆ ವಿದಾಯ ಹೇಳಿರುವ 37 ವರ್ಷದ ಅಜಿಂಕ್ಯ ರಹಾನೆ ತಮ್ಮ ಕ್ರಿಕೆಟ್‌ ಜತೆಗಿನ ನಂಟನ್ನು ಮುಂದುವರಿಸಲಿದ್ದಾರೆ. ಇದೀಗ ಹೊಸ ಪಾತ್ರದೊಂದಿಗೆ ಟೆಸ್ಟ್​ ಕ್ರಿಕೆಟ್​ಗೆ ಮರಳುತ್ತಿದ್ದಾರೆ. ಗಾಲೆಯಲ್ಲಿ ನಡೆಯಲಿರುವ ಭಾರತ-ಶ್ರೀಲಂಕಾ ನಡುವಿನ ಟೆಸ್ಟ್​ ಸರಣಿಯಲ್ಲಿ ರಹಾನೆ ಸೋನಿ ಸ್ಪೋರ್ಟ್ಸ್​ ನೆಟ್​ವರ್ಕ್​ನಲ್ಲಿ ವೀಕ್ಷಕ ವಿವರಣೆಕಾರರಾಗಿ ಕಾಣಿಸಿಕೊಳ್ಳಲಿದ್ದಾರೆ.

ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್‌ನಲ್ಲಿ ಮೊಹಮ್ಮದ್ ಸಿರಾಜ್, ಸರ್ಫರಾಜ್ ಖಾನ್‌ಗೆ ಹೇರ್ ಕಟ್ ಮಾಡಲು ಯತ್ನಿಸಿದ ತಮಾಷೆಯ ವಿಡಿಯೋ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಸಿರಾಜ್ ಟ್ರಿಮ್ಮರ್ ಹಿಡಿದು ಸರ್ಫರಾಜ್ ಖಾನ್ ಅವರ ಹೇರ್ ಸ್ಟೈಲ್ ಬದಲಿಸಲು ಮುಂದಾಗುತ್ತಾರೆ. ಆದರೆ ಸಿರಾಜ್ ಅವರ ಹೇರ್ ಕಟಿಂಗ್ ಕೌಶಲ್ಯದ ಬಗ್ಗೆ ಸರ್ಫರಾಜ್‌ಗೆ ಭಯವಾಗಿ, ತಪ್ಪಿಸಿಕೊಳ್ಳಲು ಮುಂದಾದ ವಿಡಿಯೋ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಪಾಕಿಸ್ತಾನದೊಂದಿಗೆ ನಿರಂತರ ಸಂಪರ್ಕ – ಕಲಬುರಗಿಯಲ್ಲಿ ಇಬ್ಬರು ಶಂಕಿತ ಉ*ಗ್ರರು ವಶ

ಕೆಕೆಆರ್‌ಗೆ ಯಾರು ಕ್ಯಾಪ್ಟನ್ ಆಗ್ತಾರೆ ಅನ್ನೋ ಕುತೂಹಲ ಕೆರಳಿಸಿದೆ. ಇಷ್ಟು ದಿನ ಹಾರ್ದಿಕ್ ಪಾಂಡ್ಯ ಕೋಲ್ಕತ್ತಾ ಕ್ಯಾಪ್ಟನ್ ಆಗ್ತಾರೆ ಅನ್ನೋ ಸುದ್ದಿ ಇತ್ತು, ಈಗ ಸೂರ್ಯಕುಮಾರ್ ಯಾದವ್ ಮೇಲೆ ಕೆಕೆಆರ್ ಕಣ್ಣಿಟ್ಟಿದೆ ಅನ್ನೋ ಸುದ್ದಿ ಹೊರ ಬಿದ್ದಿದೆ. ಸೂರ್ಯ ಅವರಿಗಾಗಿ ಮುಂಬೈ ಜೊತೆ ಟ್ರೇಡಿಂಗ್ ಒಪ್ಪಂದ ಮಾಡಿಕೊಳ್ಳಲು ಕೆಕೆಆರ್ ಸಿದ್ಧವಾಗಿದೆ. ಅಥವಾ ಅವರು ಹರಾಜಿಗೆ ಪ್ರವೇಶಿಸಿದರೆ ಅವರನ್ನು ಪಡೆಯಲು ಭಾರಿ ಖರ್ಚು ಮಾಡಲು ಸಹ ಸಿದ್ಧವಾಗಿದೆ.

ಸ್ಟೀಫನ್‌ ಫ್ಲೆಮಿಂಗ್‌ ಅವರು ಹೆಡ್‌ ಕೋಚ್‌ ಹುದ್ದೆಯನ್ನು ತೊರೆದ ಬಳಿಕ CSK  ಹೆಡ್ ಕೋಚ್ ಯಾರ್ ಆಗ್ತಾರೆ ಅನ್ನೋ ಕುತೂಹಲ ಮೂಡಿಸಿದ್ದು, ಆರ್ ಅಶ್ವಿನ್‌ ಈ ಬಗ್ಗೆ ದೊಡ್ಡ ಹಿಂಟ್ ಕೊಟ್ಟಿದ್ದಾರೆ. ಮೂಲಗಳ ಪ್ರಕಾರ ಚೆನೈ ಸೂಪರ್‌ ಕಿಂಗ್ಸ್‌ ತಂಡದ ಹೆಡ್‌ ಕೋಚ್‌ ಹುದ್ದೆಗೆ ಇಯಾನ್‌ ಮಾರ್ಗನ್‌ ಅವರ ಹೆಸರು ಬಲವಾಗಿ ಕೇಳಿಬರುತ್ತಿದೆ. ಮುಂದಿನ ವಾರ ಈ ನಿರ್ಧಾರ ಹೊರಬೀಳಬಹುದು ಎಂದು ಆರ್‌ ಅಶ್ವಿನ್ ಭವಿಷ್ಯ ನುಡಿದಿದ್ದಾರೆ.

ಬರೋಬ್ಬರಿ 40 ವರ್ಷಗಳ ಬಳಿಕ ಮತ್ತೊಮ್ಮೆ ಕಾಶ್ಮೀರ ಪ್ರಮುಖ ಕ್ರಿಕೆಟ್‌ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಈ ಬಾರಿ ಇರಾನಿ ಕಪ್‌ ದೇಸಿ ಕ್ರಿಕೆಟ್‌ ಟೂರ್ನಿಯಲ್ಲಿ ಹಾಲಿ ರಣಜಿ ಚಾಂಪಿಯನ್‌ ಜಮ್ಮು-ಕಾಶ್ಮೀರ ಹಾಗೂ ರೆಸ್ಟ್‌ ಆಫ್‌ ಇಂಡಿಯಾ ತಂಡಗಳ ನಡುವಿನ ಫೈನಲ್‌ ಪಂದ್ಯ ಅ.1ರಿಂದ 5ರ ವರೆಗೆ ಶ್ರೀನಗರದ ಶೇರ್‌ ಎ ಕಾಶ್ಮೀರ ಕ್ರೀಡಾಂಗಣದಲ್ಲಿ ನಡೆಯಲಿದೆ.1986 ರ ನಂತ್ರ  ಈ ಕ್ರಿಡಾಂಗಣದಲ್ಲಿ ಯಾವುದೇ ಪ್ರಮುಖ ಪಂದ್ಯ ನಡೆದಿರಲಿಲ್ಲ.

ಕೆರಿಬಿಯನ್ ಪ್ರೀಮಿಯರ್ ಲೀಗ್ 2026ರ 4ನೇ ಪಂದ್ಯದಲ್ಲಿ ಆ್ಯಂಡ್ರೆ ರಸೆಲ್ ಅಕ್ಷರಶಃ ಅಬ್ಬರಿಸಿದ್ದಾರೆ. ಜಮೈಕಾ ಕಿಂಗ್ಸ್‌ಮೆನ್  ಪರ  7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆ್ಯಂಡ್ರೆ ರಸೆಲ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.  ರಸೆಲ್ ಕೇವಲ 38 ಎಸೆತಗಳಲ್ಲಿ 68 ರನ್ ಚಚ್ಚಿದರು. ರಸೆಲ್ ಅವರ ಈ ಆರ್ಭಟದಲ್ಲಿ 9 ಭರ್ಜರಿ ಸಿಕ್ಸರ್​ಗಳು ಮೂಡಿಬಂದಿದ್ದವು. ಇದಾಗ್ಯೂ ಒಂದೇ ಒಂದು ಫೋರ್ ಬಾರಿಸಿರಲಿಲ್ಲ. ಈ ಮೂಲಕ ಫೋರ್ ಬಾರಿಸದೇ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ವಿಶ್ವದ 2ನೇ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ರಸೆಲ್ ತಮ್ಮದಾಗಿಸಿಕೊಂಡರು.

ಇಂಗ್ಲೆಂಡ್ ಆಲ್‌ರೌಂಡರ್ ಮತ್ತು ಸಸೆಕ್ಸ್ ಆಟಗಾರ ಡ್ಯಾನಿ ಲ್ಯಾಂಬ್ ಎಲ್ಲಾ ಮಾದರಿಯ ಕ್ರಿಕೆಟ್​​​ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಕುತ್ತಿಗೆಗೆ ಆದ ಗಂಭೀರ ಗಾಯದಿಂದಾಗಿ ಕೇವಲ 30ನೇ ವಯಸ್ಸಿನಲ್ಲಿ ವೃತ್ತಿಪರ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ. ವೈದ್ಯರ ಸಲಹೆಯನ್ನು ಅನುಸರಿಸಿ ಲ್ಯಾಂಬ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ. ಅವರು ಸಾಮಾಜಿಕ ಮಾಧ್ಯಮದ ಮೂಲಕ ಈ ಸುದ್ದಿಯನ್ನು ಪ್ರಕಟಿಸಿದರು.

Kishor KV

Leave a Reply

Your email address will not be published. Required fields are marked *