ರೋಹಿತ್ ಗಾಗಿ ಅಗರ್ಕರ್ ಗೆ ಗೇಟ್ ಪಾಸ್ – ನೀವೇ ಡ್ರಾಪ್ ಮಾಡಿ ಅಂದ್ರಾ HITಮ್ಯಾನ್?
ಆಯ್ಕೆ ಸಮಿತಿಗೆ ಇನ್ಮುಂದೆ ಲಕ್ಷ್ಮಣ್ ಬಾಸ್?

2027ರ ಏಕದಿನ ವಿಶ್ವಕಪ್ ತಂಡದಲ್ಲಿ ಹಿಟ್ಮ್ಯಾನ್ ರೋಹಿತ್ ಶರ್ಮಾ ಇರ್ಬೇಕಾ ಬೇಡ್ವಾ ಅನ್ನೋದೇ ಬಿಸಿಸಿಐ ಮುಂದಿರೋ ಅತಿದೊಡ್ಡ ಪ್ರಶ್ನೆ. ಒಂದ್ಕಡೆ ಮ್ಯಾನೇಜ್ಮೆಂಟೇ ಬೇಕಿದ್ರೆ ಡ್ರಾಪ್ ಮಾಡ್ಲಿ ನಾನಂತೂ ನಿವೃತ್ತಿ ಘೋಷಿಸಲ್ಲ ಅಂತಿರೋ ರೋಹಿತ್.. ಮತ್ತೊಂದ್ಕಡೆ ಹಿರಿಯ ಆಟಗಾರನನ್ನ ನಾವಾಗೇ ಕೈಬಿಟ್ರೆ ವಿರೋಧಗಳು ಜಾಸ್ತಿಯಾಗುತ್ತೆ ಸೋ ಅವ್ರೇ ವಿದಾಯ ಹೇಳಿದ್ರೆ ಒಳ್ಳೇದು ಅಂತಾ ಪ್ರೆಶರ್ ಕ್ರಿಕೆಟ್ ಮಾಡ್ತಿರೋ ಆಯ್ಕೆಸಮಿತಿ. ಆದ್ರೀಗ ಇದಕ್ಕೆಲ್ಲಾ ಕ್ಲೈಮ್ಯಾಕ್ಸ್ ಹೇಳೋ ಟೈಂ ಬಂದಿದೆ. ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥರೇ ಕುರ್ಚಿ ಕಳ್ಕೊಳ್ಳೋ ಭೀತಿಯಲ್ಲಿದ್ದಾರೆ.
ಇದನ್ನೂ ಓದಿ : IPL ಪವರ್ ಗೆ PSL ಪಂಕ್ಚರ್ – ಲೀಗ್ ನೇ ಎತ್ತಂಗಡಿ ಮಾಡುತ್ತಾ PAK?
ಟೀಂ ಇಂಡಿಯಾದಲ್ಲಿ ಸದ್ಯ ರೋಹಿತ್ ಶರ್ಮಾ ಅವ್ರ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಅವ್ರನ್ನ ತಂಡದಲ್ಲಿ ಮುಂದುವರಿಸಬೇಕಾ ಅಥವಾ ಬೇಡ್ವಾ ಅನ್ನೋ ಬಗ್ಗೆ ಪರವಿರೋಧ ಎರಡೂ ಇದೆ. ಇದೀಗ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಈ ಬಗ್ಗೆ ಒಂದು ಇಂಟ್ರೆಸ್ಟಿಂಗ್ ವಿಚಾರವನ್ನ ರಿವೀಲ್ ಮಾಡಿದ್ದಾರೆ. ರೋಹಿತ್ ಶರ್ಮಾ ಅಂತೂ ತಾವಾಗೇ ನಿವೃತ್ತಿ ಘೋಷಣೆ ಮಾಡದಿರಲು ಡಿಸೈಡ್ ಮಾಡಿದ್ದಾರೆ. ಅದ್ರ ಜಬಾಬ್ದಾರಿಯನ್ನ ಸೆಲೆಕ್ಟರ್ಗಳಿಗೇ ಬಿಟ್ಟಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅವ್ರ ಪ್ರದರ್ಶನವೇ ಎಲ್ಲದಕ್ಕೂ ಉತ್ತರ ಕೊಟ್ಟಿದೆ. ಆದ್ರೆ ಈ ಪ್ರದರ್ಶನದಿಂದ ಮ್ಯಾನೇಜ್ಮೆಂಟ್ ಇಕ್ಕಟ್ಟಿಗೆ ಸಿಲುಕಿದೆ.
ಶತಕದ ಮೂಲಕವೇ ಸ್ಥಾನ ಭದ್ರಪಡಿಸಿಕೊಂಡ್ರಾ ರೋಹಿತ್ ಶರ್ಮಾ?
ಅಷ್ಟಕ್ಕೂ ಆಂಗ್ಲರ ವಿರುದ್ಧದ ಸರಣಿ ಬಳಿಕ ರೋಹಿತ್ರನ್ನ ಕೈಭಿಟ್ಟು ಯಶಸ್ವಿ ಜೈಸ್ವಾಲ್ರನ್ನ ಭಾರತ ಏಕದಿನ ತಂಡಕ್ಕೆ ಕರೆತರೋಕೆ ಆಯ್ಕೆ ಸಮಿತಿ ಮುಂದಾಗಿತ್ತು. ಆದರೆ ರೋಹಿತ್ ಶರ್ಮಾರ ಸ್ಫೋಟಕ ಇನ್ನಿಂಗ್ಸ್ನಿಂದಾಗಿ ಈಗ ಅವ್ರ ಲೆಕ್ಕಾಚಾರಗಳೆಲ್ಲಾ ಬುಡಮೇಲಾಗಿವೆ. ಕಾರ್ಡಿಫ್ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ 47 ಎಸೆತಗಳಲ್ಲಿ 26 ರನ್ ಗಳಿಸಿ ಔಟಾಗಿದ್ರು. ಹೀಗಾಗಿ ಜುಲೈ 19 ರಂದು ಲಾರ್ಡ್ಸ್ನಲ್ಲಿ ನಡೆಯುವ ಕೊನೇ ಪಂದ್ಯವೇ ರೋಹಿತ್ ಪಾಲಿಗೆ ಕೊನೇ ಪಂದ್ಯ ಎಂದೇ ಬಿಂಬಿತವಾಗಿತ್ತು. ಆದ್ರೆ ಕೊನೇ ಮ್ಯಾಚಲ್ಲಿ ಭಾರತದ ಪರ ರೋಹಿತ್ ಶರ್ಮಾ 110 ಎಸೆತಗಳಲ್ಲಿ 138 ರನ್ ಗಳಿಸುವ ಮೂಲಕ ಬ್ಯಾಟಿಂಗ್ನಲ್ಲಿ ತಮ್ಮ ಅಸಲಿ ಖದರ್ ತೋರಿಸಿದ್ರು. ಅವರ ಇನ್ನಿಂಗ್ಸ್ನಲ್ಲಿ 17 ಬೌಂಡರಿಗಳು ಮತ್ತು ಐದು ಸಿಕ್ಸರ್ಗಳು ಸೇರಿದ್ದವು, ಲಾರ್ಡ್ಸ್ನಲ್ಲಿ ಏಕದಿನ ಶತಕ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್ಮನ್ ಎನಿಸಿಕೊಂಡ್ರು. ಹೀಗಿದ್ರೂ ಭಾರತ ಈ ಪಂದ್ಯವನ್ನ ಸೋಲಬೇಕಾಯ್ತು. ಆದ್ರೆ ರೋಹಿತ್ ಬ್ಯಾಟಿಂಗ್ ಬಗ್ಗೆ ಎಲ್ಲರೂ ಅಪ್ರಿಶಿಯೇಟ್ ಮಾಡಿದ್ರು. ಇದೀಗ ಮೊಹಮ್ಮದ್ ಕೈಫ್ ಕೂಡ ಇದೇ ಇನ್ನಿಂಗ್ಸ್ ಮುಂದಿಟ್ಟುಕೊಂಡು ರೋಹಿತ್ ಬಗ್ಗೆ ಮಾತನಾಡಿದ್ದಾರೆ. ನಾನು ಚೆನ್ನಾಗಿ ಆಡದಿದ್ದರೆ, ನೀವೇ ನಿರ್ಧಾರ ತೆಗೆದುಕೊಳ್ಳಿ. ನನ್ನನ್ನು ಬಿಟ್ಟುಬಿಡಿ ಎಂದು ರೋಹಿತ್ ಶರ್ಮಾರೇ ಮ್ಯಾನೇಜ್ಮೆಂಟ್ಗೆ ಸವಾಲು ಹಾಕಿದಂತಿದೆ ಎಂದಿದ್ದಾರೆ. ಹಾಗೇ ಕೈಫ್ ಹೇಳಿರುವ ಒಂದು ವಿಚಾರ ಕೂಡ ಬಾರೀ ಕುತೂಹಲ ಮೂಡಿಸಿದೆ.
ರೋಹಿತ್ 2027ರ ವಿಶ್ವಕಪ್ ತಂಡದ ಭಾಗ ಎಂದು ಹೇಳ್ತಿಲ್ಲ ಯಾಕೆ?
ರೋಹಿತ್ ಶರ್ಮಾ ಬೆನ್ನಿಗೆ ನಿಂತಿರೋ ಕೈಫ್ ಇನ್ನೊಂದು ವಿಚಾರವನ್ನ ಪ್ರಸ್ತಾಪ ಮಾಡಿದ್ದಾರೆ. ಕೆಲವೊಮ್ಮೆ, ಕೋಚಿಂಗ್ ಸಿಬ್ಬಂದಿ ಬಂದು ಮಾತನಾಡ್ತಾರೆ. ರೋಹಿತ್ ಶರ್ಮಾ ಅವರಿಗೆ ಅವರ ನ್ಯಾಚುರಲ್ ಗೇಮ್ ಆಡೋಕೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದೇವೆ ಅಂತಾರೆ. ಆದ್ರೆ ಎಲ್ಲಿಯೂ ಕೂಡ ರೋಹಿತ್ ಶರ್ಮಾ 2027 ರ ವಿಶ್ವಕಪ್ಗಾಗಿ ನಮ್ಮ ಯೋಜನೆಗಳ ಭಾಗವಾಗಿದ್ದಾರೆ ಎಂದು ಯಾಕೆ ಯಾರೂ ಇನ್ನೂ ಸ್ಪಷ್ಟ ಹೇಳಿಕೆ ನೀಡಿಲ್ಲ. ಆ ಹೇಳಿಕೆಯೂ ಬರಬೇಕಾಗಿದೆ. ಅಂದ್ರೆ ರೋಹಿತ್ ಅವ್ರ ಫಾರ್ಮ್ ಏನೇ ಇದ್ರೂ ನಾವು ಅವ್ರ ಬೆಂಬಲಕ್ಕೆ ಇದ್ದೇವೆ ಅಂತಾ ಸ್ಪಷ್ಟಪಡಿಸಬೇಕು ಎಂದಿದ್ದಾರೆ. ಅದೂ ಅಲ್ದೇ ರೋಹಿತ್ ಶರ್ಮಾ ಈಗಾಗ್ಲೇ ಟಿ-20ಐ ಮತ್ತು ಟೆಸ್ಟ್ ತಂಡಕ್ಕೆ ತಾವಾಗೇ ತಾವು ನಿವೃತ್ತಿ ಹೇಳಿರುವಂಥದ್ದು. 2024ರ ಟಿ-20 ವಿಶ್ವಕಪ್ ಗೆದ್ದು ಇನ್ಮುಂದೆ ಹೊಸಬರಿಗೆ ಅವಕಾಶ ಸಿಗ್ಲಿ ಅಂತಾ ಹೊರನಡೆದ್ರು. ಹಾಗೇ 2024-25ರಲ್ಲಿ ಆಸ್ಟ್ರೇಲಿಯಾ ಸರಣಿಯಲ್ಲಿ ರನ್ಸ್ ಬಂದಿಲ್ಲ ಅಂತಾ 2025ರ ಮೇ ತಿಂಗಳಲ್ಲಿ ತಾವೇ ಟೆಸ್ಟ್ ತಂಡದಿಂದಲೂ ಹೊರಬಂದ್ರು. ಆದ್ರೆ ಈಗ ಇಷ್ಟೆಲ್ಲಾ ಪ್ರೆಶರ್ ಇದ್ರೂ ಏಕದಿನಕ್ಕೆ ನಿವೃತ್ತಿ ಹೇಳ್ತಿಲ್ಲ ಅಂದ್ರೆ ನೀವು ನನ್ನನ್ನು ಕೈಬಿಡಿ. ಅದು ನನಗೆ ಅವಮಾನಕರವಾಗಿದ್ದರೂ ಸಹ, ಅದು ಸರಿ. ನೀವೇ ನಿರ್ಧಾರ ತೆಗೆದುಕೊಳ್ಳಿ ಎಂದು ಡಿಸೈಡ್ ಮಾಡಿದಂತಿದೆ ಎಂದಿದ್ದಾರೆ. ಹೀಗೆ ರೋಹಿತ್ ವಿಚಾರದಲ್ಲಿ ದಿನಕ್ಕೊಂದು ಸುದ್ದಿ ಹೊರಬೀಳ್ತಿರೋ ಹೊತ್ತಲ್ಲೇ ಟೀಂ ಇಂಡಿಯಾ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಅವ್ರ ಕುರ್ಚಿಗೇ ಕುತ್ತು ಬಂದಂತಿದೆ.
ಅಜಿತ್ ಅಗರ್ಕರ್ ಗೆ ಗೇಟ್ ಪಾಸ್!
ಆಯ್ಕೆ ಸಮಿತಿ ಮತ್ತು ಬಿಸಿಸಿಐ ಉನ್ನತ ಅಧಿಕಾರಿಗಳ ನಡುವೆ ಭಿನ್ನಾಭಿಪ್ರಾಯ
ಸೀನಿಯರ್ ಪ್ಲೇಯರ್ಸ್ ಆಯ್ಕೆ ವಿಚಾರದಲ್ಲಿ ಸಮಿತಿ ವಿರುದ್ಧ ಅಧಿಕಾರಿಗಳು ಗರಂ
ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರ ಸ್ಥಾನಕ್ಕೆ ಕುತ್ತು
ಭಾರತದ ಮಾಜಿ ದಿಗ್ಗಜ ವಿವಿಎಸ್ ಲಕ್ಷ್ಮಣ್ ನೇಮಕಕ್ಕೆ ಗಂಭೀರ ಚಿಂತನೆ
ರೋಹಿತ್ ಶರ್ಮಾ ಭವಿಷ್ಯದ ಬಗೆಗಿನ ವಿವಾದದ ಬೆನ್ನಲ್ಲೇ ಹೊಸ ಬೆಳವಣಿಗೆ
2027ರ ಏಕದಿನ ವಿಶ್ವಕಪ್ ನಿಂದ ರೋಹಿತ್ ಕೈಬಿಡಲು ಸಮಿತಿ ಯೋಚನೆ
ರೋಹಿತ್, ಕೊಹ್ಲಿ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಲಕ್ಷ್ಮಣ್ ಸೂಕ್ತ
2026ರ ಜೂನ್ ನಲ್ಲಿ ಅಗರ್ಕರ್ ಅವಧಿ ಮುಕ್ತಾಯ, ಸೆಪ್ಟೆಂಬರ್ ವರೆಗೆ ವಿಸ್ತರಣೆ
ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ ನಿರ್ಧಾರ
ಲಕ್ಷ್ಮಣ್ ಜೊತೆಗೆ ರವಿಶಾಸ್ತ್ರಿ ಮತ್ತು ರವಿಚಂದ್ರನ್ ಅಶ್ವಿನ್ ಹೆಸರುಗಳೂ ರೇಸ್
ಇಲ್ಲಿ ಆಯ್ಕೆಸಮಿತಿಗೆ ಇರುವಂಥ ಅತಿದೊಡ್ಡ ಸವಾಲೇ ಸೀನಿಯರ್ ಪ್ಲೇಯರ್ಗಳನ್ನ ಹೇಗೆ ನಡೆಸಿಕೊಳ್ತಾರೆ ಅನ್ನೋದು. ಅದ್ರಲ್ಲೂ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅಂತಾ ಬಂದಾಗ ಇವ್ರಿಬ್ರೂ ಟೀಂ ಇಂಡಿಯಾದ ಲೆಜೆಂಡರಿ ಪ್ಲೇಯರ್ಸ್. ಪ್ರಸ್ತುತ ಬರೀ ಭಾರತಕ್ಕೆ ಮಾತ್ರ ಅಲ್ಲ ವಿಶ್ವದಲ್ಲೇ ಗ್ರೇಟ್ ಪ್ಲೇಯರ್ಸ್. ನಾಯಕರಾಗಿ, ಆಟಗಾರರಗಾಗಿ ಭಾರತವನ್ನ ಯಶಸ್ಸಿನ ಉತ್ತುಂಗದಲ್ಲಿರಿಸಿದ್ದಾರೆ. ಕೋಟ್ಯಂತರ ಅಭಿಮಾನಿ ಬಳಗವಿದೆ. ಹೀಗಿರುವಾಗ ಅವ್ರ ನಿವೃತ್ತಿ ವಿಚಾರದಲ್ಲಿ ಆಯ್ಕೆ ಸಮಿತಿ ಅಳೆದು ತೂಗಿ ಹೆಜ್ಜೆಗಳನ್ನ ಇಡ್ಬೇಕಾಗುತ್ತೆ. ಆದ್ರೆ ಅಜಿತ್ ಅಗರ್ಕರ್ ಆಗ್ಲಿ ಹೆಡ್ ಕೋಚ್ ಗೌತಮ್ ಗಂಭೀರ್ ಆಗ್ಲಿ ಈ ವಿಚಾರದಲ್ಲಿ ಬರೀ ಎಡವಟ್ಟುಗಳನ್ನೇ ಮಾಡಿಕೊಂಡಿದ್ದಾರೆ. ಇದೇ ಕಾರಣಕ್ಕೆ ದೊಡ್ಡ ಬೆಲೆ ತೆರಬೇಕಾದ ಟೈಂ ಬಂದಿದೆ.

ನೋಡಿರಿ

