ಕಂಬ್ಯಾಕ್ ಬಗ್ಗೆ ಬಾಯಿಬಿಟ್ಟ ಭುವಿ! ತಿಮ್ಮಪ್ಪನಿಗೆ ಮುಡಿ ಕೊಟ್ಟ ಪಾಂಡ್ಯ
ರಜತ್ ಕ್ಯಾಪ್ಟನ್, ರಿಂಕು ವೈಸ್ ಕ್ಯಾಪ್ಟನ್

ಕಂಬ್ಯಾಕ್ ಬಗ್ಗೆ ಬಾಯಿಬಿಟ್ಟ ಭುವಿ! ತಿಮ್ಮಪ್ಪನಿಗೆ ಮುಡಿ ಕೊಟ್ಟ ಪಾಂಡ್ಯರಜತ್ ಕ್ಯಾಪ್ಟನ್, ರಿಂಕು ವೈಸ್ ಕ್ಯಾಪ್ಟನ್

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು

ಭುವನೇಶ್ವರ್ ಕುಮಾರ್‌ ಟೀಂ ಇಂಡಿಯಾಗೆ ಕಂಬ್ಯಾಕ್  ಮಾಡೋ ಬಗ್ಗೆ ಮಾತನಾಡಿದ್ದಾರೆ. ನಾನು ಸಂತೋಷವಾಗಿದ್ದೇನೆ ಮತ್ತು ಅದಕ್ಕಾಗಿ ನನ್ನ ಕುಟುಂಬಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಮನೆಯಲ್ಲಿ ನಾವು ಎಂದಿಗೂ ಕ್ರಿಕೆಟ್ ಬಗ್ಗೆ ಮಾತನಾಡುವುದಿಲ್ಲ. ನಾನು ಭಾರತೀಯ ತಂಡಕ್ಕೆ ಮರಳುತ್ತೇನೆಯೇ? ನನ್ನನ್ನು ಏಕೆ ಆಯ್ಕೆ ಮಾಡಲಾಗಿಲ್ಲ? ಅಥವಾ ಏನು ತಪ್ಪಾಯಿತು ಎಂಬುದರ ಕುರಿತು ನಾವು ಎಂದಿಗೂ ಮಾತನಾಡುವುದಿಲ್ಲ ಎಂದಿದ್ದಾರೆ.

ಟೀಮ್ ಇಂಡಿಯಾ ಸದ್ಯ ಫೈನಲ್ ತಲುಪುವ ಒತ್ತಡವನ್ನು ಬದಿಗಿಟ್ಟು ,ಕೇವಲ ಪಂದ್ಯಗಳನ್ನು ಗೆಲ್ಲುವ ಕಡೆಗೆ ಗಮನ ಹರಿಸಬೇಕೆಂದು ಭಾರತದ ಮಾಜಿ ಕ್ರಿಕೆಟಿಗ ದೀಪ್ ದಾಸ್‌ಗುಪ್ತಾ ಸಲಹೆ ನೀಡಿದ್ದಾರೆ. ಶ್ರೀಲಂಕಾ ಮತ್ತು ನ್ಯೂಝಿಲೆಂಡ್ ವಿರುದ್ಧ ಅವರದ್ದೇ ನೆಲದಲ್ಲಿ ಆಡುವುದು ಮತ್ತು ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಕಠಿಣ ಸರಣಿಯನ್ನು ಎದುರಿಸಬೇಕಿದೆ.  ಪಾಯಿಂಟ್‌ಗಳ ಲೆಕ್ಕಾಚಾರ ಬದಿಗಿಟ್ಟು ಬಲಿಷ್ಠ ತಂಡ ನಿರ್ಮಾಣಕ್ಕೆ ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ಶುಭ್​ಮನ್ ಗಿಲ್ ಒತ್ತು ನೀಡಬೇಕು ಎಂದು ದೀಪ್ ದಾಸ್‌ಗುಪ್ತಾ ಹೇಳಿದ್ದಾರೆ.

2026ರ ಮಹಿಳಾ ಏಷ್ಯಾಕಪ್‌ಗಾಗಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಏಷ್ಯನ್ ಕ್ರೀಡಾಕೂಟಕ್ಕೆ ಆಯ್ಕೆಯಾದ ತಂಡವನ್ನೇ ಉಳಿಸಿಕೊಂಡಿದ್ದರೂ, ಗಾಯದಿಂದ ಚೇತರಿಸಿಕೊಳ್ಳದ ಕನ್ನಡತಿ ಶ್ರೇಯಾಂಕ ಪಾಟೀಲ್ ಬದಲಿಗೆ ಲೆಗ್-ಸ್ಪಿನ್ ಆಲ್‌ರೌಂಡರ್ ಪ್ರೇಮಾ ರಾವತ್‌ಗೆ ಸ್ಥಾನ ನೀಡಲಾಗಿದೆ. ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಏಷ್ಯಾಕಪ್ ನಡೆಯಲಿದ್ದು, ನಂತರ ಏಷ್ಯನ್ ಕ್ರೀಡಾಕೂಟ ಇರಲಿದೆ.

ಇದನ್ನೂ ಓದಿ: ಭಾರತಕ್ಕಿಲ್ಲ ಬೌಲಿಂಗ್ ಬ್ರಹ್ಮಾಸ್ತ್ರ – ಲಂಕಾ ಟೆಸ್ಟ್ ನಿಂದ ಜಸ್ಪ್ರೀತ್ ಬುಮ್ರಾ ಔಟ್

ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ   ಕುಲ್‌ದೀಪ್ ಯಾದವ್  ಅವರನ್ನು ಭಾರತದ ಪ್ಲೇಯಿಂಗ್‌ XIನಲ್ಲಿ ಆಡಿಸಬೇಕೆಂದು ಭಾರತದ ಮಾಜಿ ವಿಕೆಟ್‌ಕೀಪರ್-ಬ್ಯಾಟರ್ ದೀಪ್ ದಾಸ್‌ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ. ಸ್ಪಿನ್‌ಗೆ ಹೆಚ್ಚು ನೆರವಾಗುವ ಪಿಚ್‌ಗಳಲ್ಲಿ ಕುಲ್ದೀಪ್ ಅವರಂತಹ ರಿಸ್ಟ್ ಸ್ಪಿನ್ನರ್ ತಂಡಕ್ಕೆ ಅತ್ಯಂತ ಪ್ರಮುಖ ಅಸ್ತ್ರ ಎಂದು ಅವರು ಹೇಳಿದ್ದಾರೆ.‌

ಐಪಿಎಲ್ 2027ರ ಮೆಗಾ ಹರಾಜಿಗೂ ಮುನ್ನವೇ ಡೆಲ್ಲಿ ಕ್ಯಾಪಿಟಲ್ಸ್  ಫ್ರಾಂಚೈಸಿ ತನ್ನ ಸಿದ್ಧತೆಗಳನ್ನು ಚುರುಕುಗೊಳಿಸಿದೆ. ದೇಶಿ ಕ್ರಿಕೆಟ್‌ನ ಯುವ ಪ್ರತಿಭೆಗಳನ್ನು ಗುರುತಿಸಲು ಬೆಂಗಳೂರಿನಲ್ಲಿ ವಿಶೇಷ ಆಯ್ಕೆ ಪ್ರಕ್ರಿಯೆ ಆರಂಭಿಸಿದೆ. ಮುಂಬೈನ ಉದಯೋನ್ಮುಖ ಬ್ಯಾಟರ್‌ಗಳಾದ ಆಯುಷ್ ವರ್ತಕ್, ಅಯಾಝ್ ಖಾನ್ ಮತ್ತು ದಿವ್ಯಾಂಶ್ ಸಕ್ಸೇನಾ ಈ ಟ್ರಯಲ್ಸ್‌ನಲ್ಲಿ ಭಾಗವಹಿಸುತ್ತಿರುವ ಪ್ರಮುಖ ಆಟಗಾರರಾಗಿದ್ದಾರೆ.

ಇಂಗ್ಲೆಂಡ್ ಲಿಸ್ಟ್ ಎ ಟೂರ್ನಿಯಲ್ಲಿ ಲಂಕಾಷೈರ್ ವಿರುದ್ಧ ನಾರ್ಥಾಂಪ್ಟನ್‌ಶೈರ್ 67 ರನ್‌ಗಳ ಜಯ ಸಾಧಿಸಿತು. ಆದ್ರೆ ಈ ಪಂದ್ಯದಲ್ಲಿ ಲಂಕಾಷೈರ್ ಪರ ಬೌಲಿಂಗ್ ಮಾಡಿದ ಯುಜ್ವೇಂದ್ರ ಚಾಹಲ್ 60 ರನ್‌ಗೆ ನಾಲ್ಕು ವಿಕೆಟ್ ಪಡೆದು ಮಿಂಚಿದರು. ಚಾಹಲ್ ಉತ್ತಮ ಬೌಲಿಂಗ್ ಮಾಡಿದ್ರೂ ಕೂಡ ಚೇಸಿಂಗ್‌ನಲ್ಲಿ ಲಂಕಾಷೈರ್ ಎಡವಿ 280 ರನ್‌ಗಳಿಗೆ ಆಲ್‌ಔಟ್ ಆಯ್ತು.

ಟೀಂ ಇಂಡಿಯಾದ ಸ್ಟಾರ್ ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಭಾನುವಾರ ತಿರುಮಲದ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ,     ಮುಡಿ ಅರ್ಪಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಅವರೊಂದಿಗೆ ಅವರ ಗರ್ಲ್‌ಫ್ರೆಂಡ್ ಮಹಿಕಾ ಶರ್ಮಾ ಕೂಡ ಇದ್ದರು. ಪಾಂಡ್ಯ ಮತ್ತು ಮಹಿಕಾ ಸಾಂಪ್ರದಾಯಿಕ ಬಿಳಿ ಬಟ್ಟೆ ಧರಿಸಿದ್ದು, ಇವರಿಬ್ಬರ ಫೋಟೊಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್ ದೇಶೀಯ ಕ್ರಿಕೆಟ್‌ನಲ್ಲೂ ಮಿಂಚಲು ಸಜ್ಜಾಗಿದ್ದಾರೆ. ಆಗಸ್ಟ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ‘ದುಲೀಪ್ ಟ್ರೋಫಿ 2026’ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ‘ಸೆಂಟ್ರಲ್ ಜೋನ್’  ತಂಡವನ್ನು ಮುನ್ನಡೆಸುವ ಜವಾಬ್ದಾರಿ ಪಾಟಿದಾರ್ ಹೆಗಲಿಗೇರಿದೆ. ಟೀಮ್ ಇಂಡಿಯಾದ ಸ್ಟಾರ್ ಫಿನಿಶರ್ ರಿಂಕು ಸಿಂಗ್ ಈ ತಂಡಕ್ಕೆ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.

ಜಾಂಬಿಯಾದಲ್ಲಿ ನಡೆದ ಏಷ್ಯನ್ ಲೆಜೆಂಡ್ಸ್ ಲೀಗ್‌ನಲ್ಲಿ ಇಂಡಿಯನ್ ರಾಯಲ್ಸ್ ತಂಡ ಪಾಕಿಸ್ತಾನ್ ಪ್ಯಾಂಥರ್ಸ್ ವಿರುದ್ಧ 2 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಇದು ಲೀಗ್‌ನಲ್ಲಿ ರಾಯಲ್ಸ್ ತಂಡದ ಸತತ ಎರಡನೇ ಗೆಲುವು. ಪಾಕಿಸ್ತಾನ್ 168 ರನ್ ಗಳಿಸಿದ್ದು, ಭಾರತ 17.4 ಓವರ್‌ಗಳಲ್ಲಿ ಗುರಿ ತಲುಪಿತು. ರಿಷಿ ಧವನ್ ಮತ್ತು ಸರುಲ್ ಅವರ ಅಬ್ಬರದ ಬ್ಯಾಟಿಂಗ್ ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು.

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಲೀಗ್​ ಟೂರ್ನಿಯಲ್ಲಿ ಟ್ರೆಂಟ್ ರಾಕೆಟ್ಸ್ ತಂಡ ರೋಚಕ ಜಯ ಸಾಧಿಸಿದೆ. ಟ್ರೆಂಟ್ ರಾಕೆಟ್ಸ್  ಕಲೆ ಹಾಕಿದ 147 ರನ್​ಗಳ ಗುರಿ ಬೆನ್ನತ್ತಿದ ಸನ್​ರೈಸರ್ಸ್ ಲೀಡ್ಸ್ ತಂಡವು 80 ಎಸೆತಗಳ ಮುಕ್ತಾಯದ ವೇಳೆಗೆ 111 ರನ್​ ಕಲೆಹಾಕಿದ್ದರು. 20 ಎಸೆತಗಳಲ್ಲಿ ಕೇವಲ 35 ರನ್​ಗಳು ಬೇಕಿತ್ತು. ಈ ವೇಳೆ ದಾಳಿಗಿಳಿದ ಮೊಹಮ್ಮದ್ ಅಮಿರ್ ಸತತ 10 ಎಸೆತಗಳಲ್ಲಿ ರನ್‌ ನೀಡಿ  ಹ್ಯಾರಿ ಬ್ರೂಕ್  ಹಾಗೂ ಮಿಚೆಲ್ ಮಾರ್ಷ್ ಅವರ ವಿಕೆಟ್​ಗಳನ್ನು ಪಡೆದು ತಂಡವನ್ನ ಗೆಲ್ಲಿಸಿದ್ರು.

Kishor KV

Leave a Reply

Your email address will not be published. Required fields are marked *