ಅವಮಾನಕ್ಕೆ ಉತ್ತರಿಸಿದ ಅಕ್ಷರ್ – RO-KOಗೆ ಧೋನಿ ಸಾಥ್
ಸಹಾಯಕ ಕೋಚ್‌ಗೆ ಗಂಭೀರ್ ಮೋಸ?

ಅವಮಾನಕ್ಕೆ ಉತ್ತರಿಸಿದ ಅಕ್ಷರ್ –  RO-KOಗೆ ಧೋನಿ ಸಾಥ್ಸಹಾಯಕ ಕೋಚ್‌ಗೆ ಗಂಭೀರ್ ಮೋಸ?

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು 

ಎಡ್ಜ್​ಬಾಸ್ಟನ್​ನಲ್ಲಿ ಇಂಗ್ಲೆಂಡ್ ತಂಡಕ್ಕೆ ಸೋಲುಣಿಸುವ ಮೂಲಕ ಭಾರತ ಆಂಗ್ಲರ 12 ವರ್ಷಗಳ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದೆ. ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಇಂಗ್ಲೆಂಡ್ ತಂಡ ಕೊನೆಯ ಬಾರಿಗೆ ಏಕದಿನ ಪಂದ್ಯದಲ್ಲಿ 2014 ರ ಸೆಪ್ಟೆಂಬರ್ 2 ರಂದು ಸೋತಿತ್ತು. ಅಂದು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡವೇ ಇಂಗ್ಲೆಂಡ್ ತಂಡವನ್ನು ಮಣಿಸಿತ್ತು. ಆ ಬಳಿಕ ಕಳೆದ 12 ವರ್ಷಗಳಲ್ಲಿ ಇಲ್ಲಿ ನಡೆದ ಸತತ 7 ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ಸೋಲಿಲ್ಲದ ಸರದಾರರಾಗಿ ಮುಂದುವರೆದಿತ್ತು. ಈ ಮತ್ತೆ ಟೀಂ ಇಂಡಿಯಾ ಇಂಗ್ಲೆಂಡ್‌ನನ್ನ ಸೋಲಿಸಿದೆ.

ಅಕ್ಷರ್ ಪಟೇಲ್ ಇಂಗ್ಲೆಂಡ್ ವಿರುದ್ಧ ಆಲ್‌ರೌಂಡ್ ಪ್ರದರ್ಶನ ನೀಡಿದ್ದಾರೆ. ಭಾರತದ ಪರ ಅಕ್ಷರ್‌ ಪಟೇಲ್‌ ಬೌಲಿಂಗ್‌ನಲ್ಲಿ ಮಿಂಚಿದರು. 62 ರನ್‌ಗಳಿಗೆ 4 ವಿಕೆಟ್‌ ಕಬಳಿಸಿದರು. ಹಾಗೇ 52 ಎಸೆತಗಳಲ್ಲಿ 57ರನ್‌ಗಳಿಸಿದ್ದಾರೆ. ಅಕ್ಷರ್‌ ಪಟೇಲ್‌ ಅವರ ಆಲ್‌-ರೌಂಡರ್‌ ಆಟ ಇಂಗ್ಲೆಂಡ್‌ ಪ್ರವಾಸದಲ್ಲಿ ಭಾರತಕ್ಕೆ ಮೊದಲ ಗೆಲುವು ತಂದುಕೊಟ್ಟಿದ್ದಾರೆ. ಉಪನಾಯಕ ಪಟ್ಟದಿಂದ ಕೆಳಗಿಳಿಸಿ ಅವಮಾನ ಮಾಡಿದ್ದಕ್ಕೆ ಅಕ್ಷರ್ ಪಟೇಲ್‌ ತಮ್ಮ ಆಟದ ಮೂಲಕವೇ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾ ಪಂದ್ಯಕ್ಕೆ ಕೂಲ್ ಕ್ಯಾಪ್ಟನ್ ಸಾಥ್ – ಇಂಗ್ಲೆಂಡ್‌ನಲ್ಲಿ ಅಭಿಮಾನಿಗಳ ಮನಗೆದ್ದ ಎಂ.ಎಸ್ ಧೋನಿ

ಬರ್ಮಿಂಗ್​ಹ್ಯಾಮ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ವಿರಾಟ್ ಕೊಹ್ಲಿ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 300 ಇನಿಂಗ್ಸ್​ ಆಡಿದ ಸಾಧನೆ ಮಾಡಿದ್ದಾರೆ. ಈ ಸಾಧನೆಯೊಂದಿಗೆ 300 ಏಕದಿನ ಇನಿಂಗ್ಸ್​ಗಳ ಮೂಲಕ ಅತ್ಯಧಿಕ ರನ್​ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.  ಇದಕ್ಕೂ ಮುನ್ನ ಈ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು.

ಇಂಗ್ಲೆಂಡ್ ವಿರುದ್ಧದ ಮೊದಲ ODI ಪಂದ್ಯದ ನಂತ್ರ  ಶುಭ್​ಮನ್ ಗಿಲ್ ವಿಶ್ವ ದಾಖಲೆಯನ್ನೂ ನಿರ್ಮಿಸಿದರು. ಇದೀಗ ಶುಭ್​ಮನ್ ಗಿಲ್ ಏಕದಿನ ಕ್ರಿಕೆಟ್‌ನಲ್ಲಿ 50 ಕ್ಕೂ ಹೆಚ್ಚು ಇನ್ನಿಂಗ್ಸ್​ಗಳನ್ನು ಆಡಿದ ಆಟಗಾರರ ಪಟ್ಟಿಯಲ್ಲಿ 100 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ ಮತ್ತು 60 ರ ಸರಾಸರಿಯನ್ನು ಹೊಂದಿರುವ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕೆಎಲ್ ರಾಹುಲ್ ಹಿಡಿದ ಕ್ಯಾಚ್‌ ಈಗ ಸಖತ್ ವೈರಲ್ ಆಗ್ತಿದೆ.  ಶಿವಂ ದುಬೆ ಅವರು ಔಟ್ ಸೈಡ್‌ ಆಫ್‌ ಸ್ಟಂಪ್‌ನಲ್ಲಿ ಬಿದ್ದ ಲೆಂಥ್ ಚೆಂಡನ್ನು ಎಸೆದರು. ಈ ವೇಳೆ ಇದನ್ನು ಕಟ್ ಮಾಡಿ ರನ್‌ಗಳಿಸುವ ಯೋಚನೆ ವಿಲ್ ಜಾಕ್ಸ್ ಅವರದ್ದಾಗಿತ್ತು. ಆದರೆ ಚೆಂಡು ಇವರ ಬ್ಯಾಟ್‌ಗೆ ಜಸ್ಟ್ ತಾಗಿ ಹೋಯಿತು. ಆಗ ವಿಕೆಟ್‌ ಕೀಪರ್ ಕೆಎಲ್ ರಾಹುಲ್‌ ತಮ್ಮ ಬಲಕ್ಕೆ ಡೈವ್ ಮಾಡಿ ಅಮೋಘ ಕ್ಯಾಚ್ ಪಡೆದರು.

ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕನ್ನಡದ ಕಂಪು ಜೋರಾಗಿ ಕೇಳಿದೆ. ಕೆಎಲ್ ರಾಹುಲ್ ಮತ್ತು ಪ್ರಸಿದ್ಧ್ ಕೃಷ್ಣ ಕನ್ನಡದಲ್ಲಿ ಮಾತನಾಡಿದ್ದಾರೆ. ಕೆಎಲ್ ರಾಹುಲ್‌ ಈ  ಲೈನ್ ಚೆನ್ನಾಗಿದೆ ಮಗ, ಮುಂದೆ ಹಾಕು ಅಂತ ಕನ್ನಡದಲ್ಲೇ ಪ್ರಸಿದ್ಧ್ ಕೃಷ್ಣಗೆ ಹೇಳಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ಕನ್ನಡದ ಕಂಪು ಹರಡುತ್ತಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗ್ತಿದೆ.

ಭಾರತ ತಂಡದ ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ  ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೂತನ ದಾಖಲೆಯನ್ನು ಬರೆದಿದ್ದಾರೆ.  ಎಜ್‌ಬಾಸ್ಟನ್‌ನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ  ಹ್ಯಾರಿ ಬ್ರೂಕ್‌ ಅವರನ್ನು ಔಟ್‌ ಮಾಡುವ ಮೂಲಕ ಒಡಿಐ ಕ್ರಿಕೆಟ್‌ನಲ್ಲಿ 150 ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 150 ವಿಕೆಟ್‌ಗಳು, 200 ಟೆಸ್ಟ್‌ ವಿಕೆಟ್‌ಗಳು ಹಾಗೂ ಟಿ20ಐ ಕ್ರಿಕೆಟ್‌ನಲ್ಲಿ 100 ವಿಕೆಟ್‌ಗಳನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಬೌಲರ್‌ ಎಂಬ ದಾಖಲೆಯನ್ನು ಬರೆದಿದ್ದಾರೆ.

ಭಾರತ   ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಎಂಎಸ್ ಧೋನಿ  ಕಾಣಿಸಿಕೊಂಡರು.   ಕಪ್ಪು ಕನ್ನಡಕ ಮತ್ತು ಕಪ್ಪು ಜಾಕೆಟ್ ಧರಿಸಿದ್ದು ಎಲ್ಲರ ಗಮನ ಸೆಳೆಯಿತು. ಈ ವೇಳೆ ಒಂದು ಮಗು ಧೋನಿಗೆ ಪಾಪ್‌ಕಾರ್ನ್‌ ಕೊಟ್ಟಿತು. ಧೋನಿ ಆ ಮಗುವಿಗೆ ಬೇಜಾರ್ ಆಗುವುದು ಬೇಡವೆಂದು ಪಾಪ್‌ಕಾರ್ನ್‌ ತೆಗೆದುಕೊಂಡು ತಿಂದಿದ್ದಾರೆ. ಆಮೇಲೆ ನನಗೆ ಸಾಕು ಅಂತ ಹೇಳಿದ್ದಾರೆ. ಈ ವಿಡಿಯೋ ಈ ಸಖತ್ ವೈರಲ್ ಆಗಿದ್ದು, ಜನರ ಮನಸ್ಸು ಗೆದ್ದಿದೆ.

ಗಂಭೀರ್ ಮತ್ತು ಅಗರ್ಕರ್ ನಡುವಿನ ಭಿನ್ನಾಭಿಪ್ರಾಯಗಳೇ ಭಾರತೀಯ ತಂಡದ ಕಳಪೆ ಸ್ಥಿತಿಗೆ ಕಾರಣ ಎಂದು ದಿನೇಶ್ ಕಾರ್ತಿಕ್ ಪರೋಕ್ಷವಾಗಿ ಹೇಳಿದ್ದಾರೆ. ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದಾರೆ. ದೀರ್ಘಾವಧಿಯ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಬಲಿಷ್ಠ ತಂಡವನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದಾರೆ. ಆದರೆ ಕೋಚ್ ಗಂಭೀರ್ ವಿಭಿನ್ನ ಆಲೋಚನೆವುಳ್ಳವರಾಗಿದ್ದಾರೆ. ಅವರಿಗೆ ಪ್ರತಿಯೊಂದು ಪಂದ್ಯ ಮತ್ತು ಪ್ರತಿ ಸರಣಿಯನ್ನು ಗೆಲ್ಲಬೇಕೆಂದು ಬಯಸುತ್ತಾರೆ ಎಂದಿದ್ದಾರೆ.

ಟೀಂ ಇಂಡಿಯಾದ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್ ಅವರು ಹುದ್ದೆಯಿಂದ ಕೆಳಗಿಳಿಯುವ ಬಗ್ಗೆ ತಮ್ಮ ನಿರ್ಧಾರವನ್ನು BCCIಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ತಂಡದ ಫೀಲ್ಡಿಂಗ್ ಕೋಚ್ ಜವಾಬ್ದಾರಿಯನ್ನೂ ನೀಡಲಾಗುವುದು ಎಂಬ ಭರವಸೆಯ ಮೇರೆಗೆ ಟೆನ್ ಡೋಸ್ಚೇಟ್ ಭಾರತದ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದರು. ಆದ್ರೆ ತಂಡಕ್ಕೆ ಸೇರ್ಪಡೆಯಾಗಿ ಎರಡು ವರ್ಷ ಕಳೆದಿದ್ದರೂ ಆ ಭರವಸೆ ಈಡೇರದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

Kishor KV