ಶಿವನ ಜೊತೆ ಗಣೇಶ, ಪಾರ್ವತಿ, ನಂದಿಯನ್ನ ಯಾಕೆ ಪೂಜೆ ಮಾಡ್ತಾರೆ ಗೊತ್ತಾ? – ಶಿವ ಭಕ್ತರು ಇದ್ದನ್ನ ತಪ್ಪದೇ ತಿಳಿದುಕೊಳ್ಳಿ

ಶಿವನ ದೇಗಲಕ್ಕೆ ನಾವು ಹೋದ್ರೆ ಅಲ್ಲಿ ಸುತ್ತಲು ವಿವಿಧ ದೇವರಗಳನ್ನ ಪೂಜೆ ಮಾಡ್ತಾರೆ. ನಂದಿ, ಪಾರ್ವತಿ ದೇವಿ, ಗಣೇಶ, ಕಾರ್ತಿಕೇಯ ಹಾಗೂ ನಾಗದೇವರ ವಿಗ್ರಹಗಳು ಇರುತ್ತವೆ. ಕೇವಲ ಶಿವನಿಗೆ ಮಾತ್ರ ಪೂಜೆ ಸಲ್ಲಿಸುವುದು ಕಮ್ಮಿ. ಶಿವನ ವಿಗ್ರಹ ಇದ್ರೆ ಅಲ್ಲಿ ನಂದಿ ವಿಗ್ರಹ ಇದ್ದೇ ಇರುತ್ತೆ. ಯಾಕೆ ಶಿವನ ಸತ್ತಲು ಬೇರೆ ಬೇರೆ ದೇವರುಗಳು ಇರುತ್ತಾರೆ ಅನ್ನೋದ್ದನ್ನ ತಿಳಿದುಕೊಳ್ಳೋಣ.
ನಂದಿಯ ಕಣ್ಣುಗಳು ಯಾವಾಗಲೂ ಶಿವಲಿಂಗದ ಮೇಲೆಯೇ ನೆಟ್ಟಿರುತ್ತವೆ, ಇದು ಏಕಾಗ್ರತೆ ಮತ್ತು ಸದಾ ದೈವಿಕ ಚಿಂತನೆಯಲ್ಲಿರಬೇಕೆಂಬ ಸಂದೇಶವನ್ನು ನೀಡುತ್ತದೆ. ಭಕ್ತರು ತಮ್ಮ ಮನದ ಇಷ್ಟಾರ್ಥಗಳನ್ನು ನಂದಿಯ ಕಿವಿಯಲ್ಲಿ ಪಿಸುಗುಟ್ಟುವ ಸಂಪ್ರದಾಯವಿದೆ. ನಿರಂತರ ಧ್ಯಾನದಲ್ಲಿರುವ ಶಿವನಿಗೆ ನಂದಿಯು ಭಕ್ತರ ಪ್ರಾರ್ಥನೆಯನ್ನು ತಲುಪಿಸುತ್ತಾನೆ ಎಂಬುದು ನಂಬಿಕೆ.
ಶಿವನ ಪಕ್ಕದಲ್ಲಿ ಜಗನ್ಮಾತೆಯಾದ ಪಾರ್ವತಿ ದೇವಿಯ ವಿಗ್ರಹ ಅಥವಾ ಪೀಠದ ರೂಪದಲ್ಲಿ ಅವಳ ಸಾನ್ನಿಧ್ಯವಿರುತ್ತದೆ. ಶಿವ ಮತ್ತು ಶಕ್ತಿ ಪರಸ್ಪರ ಬೇರೆಯಲ್ಲ. ಶಿವನು ‘ಪ್ರಜ್ಞೆ’ ಆಗಿದ್ದರೆ, ಪಾರ್ವತಿಯು ‘ಶಕ್ತಿ’. ಶಕ್ತಿಯಿಲ್ಲದ ಶಿವನು ಶವಕ್ಕೆ ಸಮಾನ ಎನ್ನಲಾಗುತ್ತದೆ. ದೇವಸ್ಥಾನದಲ್ಲಿ ಇವರಿಬ್ಬರ ಉಪಸ್ಥಿತಿಯು ಪ್ರಕೃತಿ ಮತ್ತು ಪುರುಷನ ಜೋಡಣೆಯನ್ನು ಹಾಗೂ ಜೀವನದಲ್ಲಿ ಸ್ತ್ರೀ-ಪುರುಷ ಸಮಾನತೆಯ ಸಮತೋಲನವನ್ನು ತೋರ್ಪಡಿಸುತ್ತದೆ.
ಶಿವ-ಪಾರ್ವತಿಯರ ಪ್ರಥಮ ಪುತ್ರನಾದ ಗಣೇಶನ ವಿಗ್ರಹವು ಶಿವಲಿಂಗದ ಬಳಿ ಇರುವುದು ಅನಿವಾರ್ಯವಾಗಿದೆ. ಸನಾತನ ಧರ್ಮದಲ್ಲಿ ಯಾವುದೇ ಪೂಜೆ ಅಥವಾ ಶುಭ ಕಾರ್ಯವು ಗಣೇಶನ ಆರಾಧನೆಯಿಲ್ಲದೆ ಆರಂಭವಾಗುವುದಿಲ್ಲ. ಗಣೇಶನು ಬುದ್ಧಿವಂತಿಕೆ, ಜ್ಞಾನ ಮತ್ತು ಯಶಸ್ಸಿನ ಪ್ರತೀಕವಾಗಿದ್ದಾನೆ. ಶಿವಲಿಂಗದ ಪೂಜೆಗೆ ಮುನ್ನ ವಿಘ್ನನಿವಾರಕ ಗಣೇಶನನ್ನು ಆರಾಧಿಸುವುದರಿಂದ ಭಕ್ತಿಯ ಹಾದಿಯಲ್ಲಿರುವ ಎಲ್ಲಾ ಅಡೆತಡೆಗಳು ದೂರವಾಗುತ್ತವೆ.
ಶಿವನ ದ್ವಿತೀಯ ಪುತ್ರ ಹಾಗೂ ದೇವತೆಗಳ ಸೇನಾಧಿಪತಿಯಾದ ಕಾರ್ತಿಕೇಯನ (ಸುಬ್ರಹ್ಮಣ್ಯ) ವಿಗ್ರಹವು ನಮಗೆ ಸಾಹಸ, ಧೈರ್ಯ ಮತ್ತು ನಾಯಕತ್ವದ ಗುಣಗಳನ್ನು ನೆನಪಿಸುತ್ತದೆ. ಶಿವನು ಸರ್ಪಭೂಷಣ. ಕಾಲ ಮತ್ತು ಮೃತ್ಯುವನ್ನು ಜಯಿಸಿದ ಶಿವನ ಕುತ್ತಿಗೆಯಲ್ಲಿರುವ ನಾಗದೇವತೆಯು ಪ್ರಕೃತಿಯ ರಕ್ಷಣೆ ಮತ್ತು ಕುಂಡಲಿನಿ ಶಕ್ತಿಯ ಜಾಗೃತಿಯನ್ನು ಸಂಕೇತಿಸುತ್ತದೆ.

ನೋಡಿರಿ

