ಸಾಕಾನೆ ಶಿಬಿರಗಳಲ್ಲಿ ಪ್ರವಾಸಿಗರಿಗೆ ಲಕ್ಷ್ಮಣ ರೇಖೆ – ನಿಯಮ ಮೀರಿದರೆ ದಂಡದ ಜೊತೆ ಕಾನೂನು ಕ್ರಮ

ದುಬಾರೆ ಆನೆ ಶಿಬಿರದಲ್ಲಿ ನಡೆದ ದುರಂತದಿಂದ ಅರಣ್ಯ ಇಲಾಖೆ ಕೆಲವು ಕಟ್ಟುನಿಟ್ಟಿನ ಕ್ರಮ ಜಾರಿಗೆ ತಂದಿದೆ. ನಾವು ಆನೆ ಪ್ರಿಯರು, ನಮಗೆ ಆನೆ ಜೊತೆ ಫೋಟೋ ಬೇಕು, ಆನೆಯನ್ನ ಟಚ್ ಮಾಡಬೇಕು, ಆನೆ ಹತ್ತಿರವೇ ಹೋಗಬೇಕು ಎಂದು ಸಾಕಾನೆ ಶಿಬಿರಗಳಿಗೆ ಬಂದರೆ ದಂಡದ ಜೊತೆ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ.
ಇದನ್ನೂ ಓದಿ:ಮೂರು ತಿಂಗಳಿಂದ ಮೊದಲ ಬಾರಿ ಇಳಿದ ತೈಲ ಬೆಲೆ – ನಮ್ಮಲ್ಲೂ ಪೆಟ್ರೋಲ್, ಡೀಸೆಲ್, ಎಲ್ಪಿಜಿ ದರ ಇಳಿಯುತ್ತಾ?
ರಾಜ್ಯದ ಎಲ್ಲಾ ಸಾಕಾನೆ ಶಿಬಿರಗಳಿಗೆ ಭೇಟಿ ನೀಡುವ ಪ್ರವಾಸಿಗರಿಗಾಗಿ ಅರಣ್ಯ ಇಲಾಖೆ ಟಫ್ ರೂಲ್ಸ್ ಜಾರಿಗೆ ತಂದಿದೆ. ದುಬಾರೆ ಆನೆಶಿಬಿರದಲ್ಲಿ ನಡೆದ ದುರಂತದಿಂದ ಎಚ್ಚೆತ್ತ ಅರಣ್ಯ ಇಲಾಖೆ ಕೆಲವೊಂದು ರೂಲ್ಸ್ ಜಾರಿಗೆ ತಂದಿದೆ. ಅರಣ್ಯ ಇಲಾಖೆ ಇದೀಗ 10 ಕಠಿಣ ಸೂತ್ರಗಳನ್ನು ಜಾರಿಗೆ ತಂದಿದೆ. ಶಿಬಿರಗಳಲ್ಲಿ ಕೆಂಪು (ಆನೆ), ಕೇಸರಿ (ಸಿಬ್ಬಂದಿ) ಮತ್ತು ಹಸಿರು (ಪ್ರವಾಸಿಗರು) ವಲಯಗಳನ್ನು ಮಾಡಲಾಗಿದೆ. ಹಸಿರು ವಲಯ ಬಿಟ್ಟು ಪ್ರವಾಸಿಗರು ಆಚೆಕಡೆ ಹೆಜ್ಜೆ ಹಾಕಿದರೆ ಕ್ರಮ ಕೈಗೊಳ್ಳಲಾಗುತ್ತದೆ. ಆನೆ ಮತ್ತು ಪ್ರವಾಸಿಗರ ನಡುವೆ ಕನಿಷ್ಠ 10 ಮೀಟರ್ ಅಂತರ ಇರಲೇಬೇಕು. ಡಬಲ್ ಬ್ಯಾರಿಕೇಡ್ ದಾಟುವಂತಿಲ್ಲ. ಆನೆಗಳ ಬಳಿ ಹೋಗಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು, ಆನೆಗಳನ್ನು ಮುಟ್ಟುವುದು ಇನ್ನು ಮುಂದೆ ಪೂರ್ತಿ ನಿಷೇಧ ಮಾಡಲಾಗಿದೆ. ಕಾವೇರಿ ನದಿಯಲ್ಲಿ ಆನೆಗಳಿಗೆ ಸ್ನಾನ ಮಾಡಿಸುವಾಗ ಪ್ರವಾಸಿಗರು ಹತ್ತಿರ ಹೋಗುವಂತಿಲ್ಲ. ಕೇವಲ ದೂರದ ಗ್ಯಾಲರಿಯಿಂದ ಮಾತ್ರ ವೀಕ್ಷಿಸಬೇಕು. ಪ್ರತಿ ಶಿಬಿರ ಹೈಟೆಕ್ ಸಿಸಿಟಿವಿ ಕ್ಯಾಮೆರಾಗಳ ನಿಗಾದಲ್ಲಿರುತ್ತದೆ. ಪ್ರತಿಯೊಂದು ಚಲನವಲನವನ್ನು ಕಂಟ್ರೋಲ್ ರೂಮ್ನಿಂದ ಅಧಿಕಾರಿಗಳು ವಾಚ್ ಮಾಡುತ್ತಾರೆ. ಇನ್ಮುಂದೆ ಕೇವಲ ಸೌಮ್ಯ ಸ್ವಭಾವದ (ಗ್ರೀನ್ ಕೆಟಗರಿ) ಆನೆಗಳನ್ನು ಮಾತ್ರ ಪ್ರವಾಸಿಗರ ಮುಂದೆ ತರಲಾಗುತ್ತದೆ. ಮದವೇರಿದ, ಗಾಯಗೊಂಡ ಅಥವಾ ಒತ್ತಡದಲ್ಲಿರುವ ಆನೆಗಳನ್ನು ಸಾರ್ವಜನಿಕರು ನೋಡುವಂತಿಲ್ಲ. 6 ತಿಂಗಳ ಒಳಗಿನ ಮರಿ ಇರುವ ತಾಯಿ ಆನೆಗಳಿಗೂ ಪ್ರವಾಸಿಗರಿಂದ ಮುಕ್ತಿ ನೀಡಲಾಗಿದೆ.
ಅರಣ್ಯ ಇಲಾಖೆಯ ಈ ಹೊಸ ನಿಯಮ ಕಟ್ಟು ನಿಟ್ಟಲ್ಲಿ ಜಾರಿಯಾಗಬೇಕಿದೆ. ಹೀಗಾದರೆ ಮಾತ್ರ ಆನೆಗಳು ಕ್ಷೇಮ. ಪ್ರವಾಸಿಗರು ಕ್ಷೇಮ.

ನೋಡಿರಿ

