ಜೆಡಿಎಸ್ ಪಾಳಯದಿಂದ ಅಡ್ಡ ಮತದಾನ – ಜಿ ಟಿ ದೇವೇಗೌಡರ ವಿರುದ್ಧ ಹೆಚ್.ಡಿ ಕುಮಾರಸ್ವಾಮಿ ಸಿಟ್ಟು

ಜೆಡಿಎಸ್ ಪಾಳಯದಿಂದ ಅಡ್ಡ ಮತದಾನ – ಜಿ ಟಿ ದೇವೇಗೌಡರ ವಿರುದ್ಧ ಹೆಚ್.ಡಿ ಕುಮಾರಸ್ವಾಮಿ ಸಿಟ್ಟು

ವಿಧಾನ ಪರಿಷತ್​ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ತೀವ್ರ ಮುಜುಗರಕ್ಕೊಳಗಾಗಿದೆ. ಅದರಲ್ಲೂ ಕಾಂಗ್ರೆಸ್ ವಿರುದ್ಧ ಮೈತ್ರಿ ಪಕ್ಷಕ್ಕೆ ದೊಡ್ಡ ಮುಖಭಂಗವಾಗಿದೆ. ಕ್ರಾಸ್ ವೋಟಿಂಗ್ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದಲ್ಲಿ ನಾಯಕರ ಸಿಟ್ಟಿಗೆ ಕಾರಣವಾಗಿದೆ.

ಇದನ್ನೂ ಓದಿ:ಬಿಜೆಪಿ ಉಚ್ಛಾಟಿತ ಶಾಸಕರಿಂದ ಕಾಂಗ್ರೆಸ್‌ಗೆ ವೋಟ್ – ಸಿಎಂ ಡಿಕೆಶಿ ಜೊತೆ ಹೆಬ್ಬಾರ್, ಸೋಮಶೇಖರ್ ಫೋಟೋ ಶೂಟ್

ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್​​ಡಿ ಕುಮಾರಸ್ವಾಮಿ ಅಡ್ಡ ಮತದಾನ ಮಾಡಿದವರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು. ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ, ಶಾಸಕ ಜಿಟಿ ದೇವೇಗೌಡ  ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.  ಪರಿಷತ್​ ಚುನಾವಣೆ ಫಲಿತಾಂಶದ ಬಗ್ಗೆ ಮೈಸೂರಿನಲ್ಲಿ ಮಾತಾಡಿದ ಕುಮಾರಸ್ವಾಮಿ, ನಾನು ಅಭ್ಯರ್ಥಿಯನ್ನ ಗೆಲ್ಲಿಸಲು ಚುನಾವಣೆಗೆ ನಿಲ್ಲಿಸಿರಲಿಲ್ಲ. ಮೈಸೂರು ಜಿಲ್ಲೆಯ ಒಬ್ಬರನ್ನು ಬಿಟ್ಟು, ಮನೆಯಲ್ಲೇ ಎಲ್ಲಾ ಶಾಸಕರ ಜೊತೆ ಸಭೆ ನಡೆಸಿದ್ದೆ. 17 ಮತಗಳನ್ನು ಉಳಿಸಿಕೊಳ್ಳಬೇಕು ಎಂಬ ದೃಷ್ಟಿಯಿಂದ ಚುನಾವಣೆಗೆ ನಿಲ್ಲಿಸಿದ್ದೆ. 18ರಲ್ಲಿ 17 ಮತಗಳು ಒಡೆಯಬಾರದು ಅಂತ ಹೇಳಿದ್ದೆ. ನಮ್ಮವರನ್ನು ಪರೀಕ್ಷೆ ಮಾಡಬೇಕು ಅಂತಾನೇ ಅಭ್ಯರ್ಥಿ ಹಾಕಿದ್ದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಈ ಚುನಾವಣೆಯ ಫಲಿತಾಂಶ ಬಹುಶಃ ಇನ್ನೊಂದು ಅನುಭವ ಕೊಟ್ಟಿದೆ. ನಾನು ಯಾರನ್ನೂ ದೂಷಿಸಲು ಹೋಗಲ್ಲ. ಅತಿಯಾದ ನಂಬಿಕೆ ಒಳ್ಳೆಯದಲ್ಲ ಎಂಬ ಸಂದೇಶ ಕೊಟ್ಟಿದ್ದಾರೆ. ನಂಬುವ ನಿಮ್ಮ ಗುಣ ಸರಿ ಮಾಡಿಕೊಳ್ಳಿ ಎಂಬ ಮೆಸೇಜ್ ನಮ್ಮವರೇ ನಮಗೆ ಕೊಟ್ಟಿದ್ದಾರೆ. ನಿಜವಾದ ಅಖಾಡ ಇರೋದು 2028 ರ ಚುನಾವಣೆ,  ಹಣ ಬಲ ತೋಳ್ಬಲ ವಿರುದ್ಧ ಹೋರಾಟ ಮಾಡಬೇಕಿದ್ದು, ಪಕ್ಷ ಉಳಿಸೋಕೆ ನಿಜವಾದ ಕಾರ್ಯಕರ್ತರು ಇದ್ದಾರೆ ಎಂದು ಕುಮಾರಸ್ವಾಮಿ ಗುಡುಗಿದರು.

4 ಜನ ಕ್ರಾಸ್ ವೋಟ್ ಹಾಕಿದ್ದಾರೆ. ಯಾರು ಯಾರು ಅಂತಾನೂ ಗೊತ್ತು. ಪಾರ್ಟಿ ಬಿಡುವ ಬಗ್ಗೆಯೂ ಅವರೆಲ್ಲಾ ಚರ್ಚೆ ಮಾಡಿದ್ದಾರೆ ಅದು ಕೂಡ ನನಗೆ ಗೊತ್ತಿದೆ. ಹೋಗೋರು ಹೋಗಲಿ, ಹೊಸದಾಗಿ ಜೆಂಜಿ ಅಂತ ಯುವಕರು ಪಾರ್ಟಿಗೆ ಬರ್ತಾರೆ ಎಂದು  ಕುಮಾರಸ್ವಾಮಿ ಹೇಳಿದ್ದಾರೆ. ಒಟ್ಟಾರೆ ಹೇಳುವುದಾದರೆ ಕುಮಾರಣ್ಣನ ಸಿಟ್ಟು ನೇರವಾಗಿ ಇದ್ದಿದ್ದು ಜಿಟಿ ದೇವೇಗೌಡರ ವಿಚಾರದಲ್ಲಿ ಅನ್ನೋದು ಸ್ಪಷ್ಟವಾಗಿದೆ. ಜಿಟಿ ದೇವೇಗೌಡ ಹೆಸರು ನನ್ನ ಬಳಿ ಹೇಳಲೇ ಬೇಡಿ. ಅವರ ಬಗ್ಗೆ ನಾನು ಮಾತನಾಡಲ್ಲ ಎನ್ನುತ್ತಲೇ ಕಿಡಿಕಾರಿದ ಕುಮಾರಸ್ವಾಮಿ, 2006, 2013, 2018 ಎಲ್ಲಾ ಕಡೆ ಅವ್ರು ಏನು ಮಾಡಿದ್ದಾರೆ ನೋಡಿದ್ದೇನೆ ಎಂದು ಜಿಟಿಡಿ ವಿರುದ್ಧ ವಾಗ್ದಾಳಿ ನಡೆಸಿದರು.

Sulekha

Leave a Reply

Your email address will not be published. Required fields are marked *