ಚಪ್ಪಲಿ ಹಾಕದೇ ನಡೆದ್ರೆ ಶನಿ ದೋಷ ಕಡಿಮೆಯಾಗುತ್ತಾ? – ಜ್ಯೋತಿಷ್ಯ ಶಾಸ್ತ್ರ ಏನ್ ಹೇಳುತ್ತೆ?

ಚಪ್ಪಲಿ ಹಾಕದೇ ನಡೆದ್ರೆ ಶನಿ ದೋಷ ಕಡಿಮೆಯಾಗುತ್ತಾ? – ಜ್ಯೋತಿಷ್ಯ ಶಾಸ್ತ್ರ ಏನ್ ಹೇಳುತ್ತೆ?

ಶನಿ ದೇವನಿಗೆ ದೇವಾನು ದೇವತೆಗಳೇ ಹೆದರುತ್ತಾರೆ. ಕರ್ಮಫಲದಾತನಾಗಿದ್ದು, ಒಬ್ಬರ ಕರ್ಮಗಳಿಗೆ ತಕ್ಕಂತೆ ಫಲವನ್ನು ನೀಡುತ್ತಾನೆ ಎಂಬ ನಂಬಿಕೆ ಇದೆ. ಸಾಡೆ ಸಾತಿ, ಅರ್ಧಾಷ್ಟಮ ಶನಿ, ಪಂಚಮ ಶನಿ, ಅಷ್ಟಮ ಶನಿ ಮುಂತಾದ ಶನಿ ಪ್ರಭಾವದ ಅವಧಿಗಳಲ್ಲಿ ವ್ಯಕ್ತಿಗಳು ಹಲವು ಕಷ್ಟ-ನಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಆದ್ರೆ ಚಪ್ಪಲಿ ಹಾಕದೇ ನಡೆದ್ರೆ ಶನಿ ದೋಷ ಕಡಿಮೆಯಾಗುತ್ತೆ ಅನ್ನೋ ನಂಬಿಕೆಯಿದೆ.. ಈ ಬಗ್ಗೆ ನೋಡ್ತಾ ಹೋಗೋಣ ಬನ್ನಿ.

ಶನಿವಾರದಂದು ಎಳ್ಳು ದಾನ, ಎಳ್ಳೆಣ್ಣೆ ದೀಪ ಹಚ್ಚುವುದು, ಕಪ್ಪು ಬಟ್ಟೆ ಧರಿಸುವುದು ಮುಂತಾದವು ಶನಿ ಪ್ರಭಾವವನ್ನು ಕಡಿಮೆ ಮಾಡಲು ಸಾಮಾನ್ಯವಾಗಿ ಅನುಸರಿಸುವ ವಿಧಾನಗಳಾಗಿವೆ. ಸತ್ಯ ಹರಿಶ್ಚಂದ್ರ, ನಳ ಮಹಾರಾಜ, ದಶರಥ, ವಿಕ್ರಮಾದಿತ್ಯ, ರಾವಣರಂತಹ ಮಹಾರಾಜರೂ ಶನಿಯ ದೃಷ್ಟಿಗೆ ಬಿದ್ದವರೇ. ಆದರೆ ಈ ಕಲಿಯುಗದಲ್ಲಿ ಶನಿ ಕಾಟದಿಂದ ಹೊರಬರಲು ಯಾವುದೇ ಖರ್ಚಿಲ್ಲದ ಒಂದು ಸೂಕ್ಷ್ಮ ತಂತ್ರವಿದೆ ಎಂದು ಜ್ಯೋತಿಷ್ಯ ತಿಳಿಸುತ್ತದೆ.

ಶನಿ ಭಗವಾನರು ಸಂಚಾರಿ, ಅವರು ಎಲ್ಲೆಡೆಯೂ ಸಂಚರಿಸುತ್ತಾ ಎಲ್ಲರ ಕರ್ಮಗಳನ್ನು ಪರಿಶೀಲಿಸುತ್ತಾರೆ ಎಂಬ ನಂಬಿಕೆ ಇದೆ. ಶನಿಗೆ ಪೂಜೆ, ಜಪ ಅಥವಾ ಎಣ್ಣೆ ದೀಪ ಹಚ್ಚುವ ಸಾಂಪ್ರದಾಯಿಕ ವಿಧಾನಗಳ ಜೊತೆಗೆ, ಒಂದು ಸರಳ ತಂತ್ರವನ್ನು ಅನುಸರಿಸಬಹುದು. ಅದು ವ್ಯಾಪಾರ ವೃದ್ಧಿ, ಉತ್ತಮ ಆರೋಗ್ಯ, ಅಪವಾದಗಳಿಂದ ಮುಕ್ತಿ, ಕಾನೂನು ವಿಷಯಗಳಲ್ಲಿ ಜಯ, ರಾಜಕೀಯ ಪ್ರಗತಿ, ಹಿತ ಶತ್ರುಗಳು ಮಿತ್ರರಾಗುವುದು ಹಾಗೂ ಕುಟುಂಬದಲ್ಲಿ ಪ್ರೀತಿ ಹೆಚ್ಚುವುದಕ್ಕೆ ಸಹಕಾರಿಯಾಗಿದೆ. ಸಾಡೆ ಸಾತಿ ಇರುವವರು ಸಹ ಉನ್ನತ ಸ್ಥಾನಗಳನ್ನು ತಲುಪಿದ ನಿದರ್ಶನಗಳು ಇವೆ.

ಇದನ್ನೂ ಓದಿ: ಸೋಮವಾರದ ದಿನ ಶಿವನ ಆರಾಧನೆಯನ್ನು ಹೇಗೆ ಮಾಡಬೇಕು – ಪರಶಿವನನ್ನ ಹೇಗೆ ಮೆಚ್ಚಿಸಬೇಕು ಗೊತ್ತಾ?

ಪ್ರತಿದಿನ ಬೆಳಿಗ್ಗೆ ಅಥವಾ ಸೂರ್ಯಾಸ್ತದ ಸಮಯದಲ್ಲಿ, ಚಪ್ಪಲಿ ಧರಿಸದೆ, ಭೂಮಿಯ ಮೇಲೆ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಸುಮಾರು ಅರ್ಧ ಘಂಟೆ ಕಾಲ ನಡೆಯುವುದು. ಈ ಸಮಯದಲ್ಲಿ ಯಾವುದೇ ಯೋಚನೆ ಮಾಡದೆ, ಸಾಧ್ಯವಾದರೆ ಓಂ ಶಂ ಶನೇಶ್ಚರಾಯ ನಮಃ ಎಂದು ಜಪಿಸುತ್ತಾ ನಡೆಯಬಹುದು. ಹೀಗೆ ಬರಿಗಾಲಿನಲ್ಲಿ ನಡೆಯುವುದರಿಂದ ಶನಿಯ ಕಾಟವು ಕ್ರಮೇಣ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.

ಇದೇ ಅಭ್ಯಾಸವನ್ನು ಆಧುನಿಕ ಮಹನೀಯರೂ ಅನುಸರಿಸಿದ್ದಾರೆ. ಉದಾಹರಣೆಗೆ, ಸರ್ ಎಂ. ವಿಶ್ವೇಶ್ವರಯ್ಯನವರು ಗಂಟೆಗಟ್ಟಲೆ ಮೈಲುಗಟ್ಟಲೆ ನಡೆಯುತ್ತಿದ್ದರು. ಇತ್ತೀಚಿನ ನಡೆದಾಡುವ ದೇವರು ಡಾ. ಶಿವಕುಮಾರ ಮಹಾಸ್ವಾಮಿಗಳು ಕೂಡ ತಮ್ಮ ಅಂತಿಮ ದಿನಗಳಲ್ಲಿಯೂ ಆಸರೆ ಇಲ್ಲದೆ ನಡೆದಾಡುತ್ತಿದ್ದರು. ವೈಜ್ಞಾನಿಕವಾಗಿ ನಡೆಯುವುದು ದೇಹಕ್ಕೆ ಉತ್ತಮವಾದರೆ, ಆಧ್ಯಾತ್ಮಿಕವಾಗಿ ಇದು ಶನಿಯ ಅಶುಭ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಹಾಗಾಗಿ, ಸ್ವಲ್ಪ ಸಮಯ ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ಬರಿಗಾಲಿನಲ್ಲಿ ನಡೆಯುವ ಅಭ್ಯಾಸ ಮಾಡಿಕೊಳ್ಳುವುದು ಶನಿಯ ಅವಕೃಪೆಯಿಂದ ದೂರವಿರಲು ಸಹಾಯಕವಾಗಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

Kishor KV