ಬಳ್ಳಾರಿ ಜೈಲಿನಲ್ಲಿ ಮರದಿಂದ ಬಿದ್ದು ಗಾಯಗೊಂಡಿದ್ದ ಕೈದಿ ಆಸ್ಪತ್ರೆಯಿಂದ ಎಸ್ಕೇಪ್

ಬಳ್ಳಾರಿ ಜೈಲಿನಲ್ಲಿ ಮರದಿಂದ ಬಿದ್ದು ಗಾಯಗೊಂಡಿದ್ದ ಕೈದಿ ಆಸ್ಪತ್ರೆಯಿಂದ ಎಸ್ಕೇಪ್

ಬಳ್ಳಾರಿ ಜೈಲಿನಲ್ಲಿದ್ದ ಆರೋಪಿ   ಎಸ್ಕೇಪ್ ಆಗಿದ್ದಾನೆ.  ಬಳ್ಳಾರಿ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್  ಆಗಿದ್ದಾನೆ. ಹರಪನಹಳ್ಳಿ ಮೂಲದ ಆರೋಪಿ ಅಣ್ಣಪ್ಪ ಎಂಬಾತ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಎಸ್ಕೇಪ್​ ಆಗಿರುವ ಆರೋಪಿಗಾಗಿ ಬಲೆ ಬೀಸಿದ್ದಾರೆ.

ವಿಜಯನಗರ ಜಿಲ್ಲೆಯ ಹರಪನಹಳ್ಳಿ ಮೂಲದ ಆರೋಪಿ ಅಣ್ಣಪ್ಪ ಎಂಬಾತ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ ಬಳ್ಳಾರಿ ಜೈಲು ಪಾಲಾಗಿದ್ದ. ನಿನ್ನೆ ಮಧ್ಯಾಹ್ನ ಜೈಲಿನೊಳಗಿದ್ದ ಮರದ ಮೇಲಿಂದ ಬಿದ್ದು ಗಾಯ ಮಾಡಿಕೊಂಡಿದ್ದ, ಈ ಹಿನ್ನೆಲೆ ಪೊಲೀಸರು ಗಾಯಗೊಂಡಿದ್ದ ಆರೋಪಿಯನ್ನು ಕೂಡಲೇ ಬಿಮ್ಸ್​ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದರು. ಆಗ ಅಣ್ಣಪ್ಪ ಆಸ್ಪತ್ರೆಯ ಬಾತ್​​ ರೂಂಗೆ ಹೋಗಿ ಬರುತ್ತೇನೆ ಎಂದು ಹೋದವನು ಬಾತ್​ ರೂಂ ಕಿಟಕಿ ಗ್ಲಾಸ್​​ ಒಡೆದು ಎಸ್ಕೇಪ್​ ಆಗಿದ್ದಾನೆ. ಆರೋಪಿ ಪರಾರಿಯಾದ ಬಗ್ಗೆ ಕೌಲಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಎಸ್ಕೇಪ್ ಆಗಿದ್ದಕೈದಿ ಅರೆಸ್ಟ್ 

ಬರೋಬ್ಬರಿ 15 ವರ್ಷಗಳ ಹಿಂದೆ ಜೈಲಿನಿಂದ ತಪ್ಪಿಸಿಕೊಂಡಿದ್ದ ಕೈದಿಯನ್ನು ಪೊಲೀಸರು ಮತ್ತೆ ಬಂಧಿಸಿರುವ ಘಟನೆ ಕಳೆದ ಶನಿವಾರ ನಡೆದಿತ್ತು. ಹಾಸನ ಜಿಲ್ಲೆಯ ಸಕಲೇಶಪುರ ಜೈಲಿನಿಂದ ತಪ್ಪಿಸಿಕೊಂಡು ಸುಮಾರು 15 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ವಿಚಾರಣಾಧೀನ ಕೈದಿಯನ್ನು ಹಾಸನ ಪೊಲೀಸರು ಮತ್ತೆ ಬಂಧಿಸಿದ್ದಾರೆ. ದೀರ್ಘಕಾಲದ ಶೋಧದ ಬಳಿಕ, ಖಚಿತ ಮಾಹಿತಿ ಮೇರೆಗೆ ಗೋವಾಕ್ಕೆ ತೆರಳಿದ್ದ ಪೊಲೀಸರ ತಂಡ ಆರೋಪಿ ಚನ್ನಕೇಶವ @ ಕೇಶವ @ ಸುರೇಶ ಬಿನ್ ಲೇಟ್ ಸಣ್ಣೇಗೌಡನನ್ನು ಬಂಧಿಸಿ ಮತ್ತೆ ಜೈಲಿಗೆ ಕಳುಹಿಸಿದ್ದಾರೆ.

ಸಕಲೇಶಪುರದ ನಲ್ಲುಲ್ಲಿ ಗ್ರಾಮದ ನಿವಾಸಿಯಾದ ಚನ್ನಕೇಶವ ವಿರುದ್ಧ 2011ರಲ್ಲಿ ಗಂಭೀರ ಆರೋಪಗಳು ದಾಖಲಾಗಿದ್ದವು. ಜೈಲಿನಿಂದ ತಪ್ಪಿಸಿಕೊಂಡ ನಂತರ ಆರೋಪಿ ತನ್ನ ಗುರುತು ಮರೆಮಾಚಿಕೊಂಡು ವಿವಿಧ ನಗರಗಳಲ್ಲಿ ಕೆಲಸ ಮಾಡುತ್ತಿದ್ದಾನೆಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಮುಂಬೈ ಸೇರಿದಂತೆ ಹಲವು ನಗರಗಳ ಹೋಟೆಲ್‌ಗಳಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾನೆಂದು ತಿಳಿದುಬಂದಿತ್ತು. ಇತ್ತೀಚಿನ ದಿನಗಳಲ್ಲಿ ಗೋವಾದ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದಾನೆಂಬ ಖಚಿತ ಮಾಹಿತಿಯನ್ನು ಬೆನ್ನು ಹತ್ತಿದ ಹಾಸನ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸಿ ಜೈಲಿಗೆ ಮರಳಿ ಕರೆತಂದಿದ್ದಾರೆ.

Kishor KV