ಟ್ರೆಕ್ಕಿಂಗ್‌ ಪ್ರಿಯರಿಗೆ ಮಹತ್ವದ ಸುದ್ದಿ! – ರಾಜ್ಯದಲ್ಲಿ ಚಾರಣಕ್ಕೆ ಹೋಗುವವರಿಗೆ ಹೊಸ ರೂಲ್ಸ್!

ಟ್ರೆಕ್ಕಿಂಗ್‌ ಪ್ರಿಯರಿಗೆ ಮಹತ್ವದ ಸುದ್ದಿ! – ರಾಜ್ಯದಲ್ಲಿ ಚಾರಣಕ್ಕೆ ಹೋಗುವವರಿಗೆ ಹೊಸ ರೂಲ್ಸ್!

ಕರ್ನಾಟಕದಲ್ಲಿ ಚಾರಣಕ್ಕೆ ತೆರಳಿದ್ದ ವೇಳೆ ಅಹಿತಕರ ಘಟನೆಗಳು ನಡೆಯುತ್ತಿರುವ ಸುದ್ದಿ ಪದೇ ಪದೇ ಕೇಳಿ ಬರುತ್ತಿವೆ. ಇತ್ತೀಚೆಗೆ ಕೇರಳದ ಯುವತಿ ಕೊಡಗಿನ ತಡಿಯಾಂಡಮೊಳ್ ಬೆಟ್ಟಕ್ಕೆ ತೆರಳಿ ನಾಪತ್ತೆಯಾಗಿದ್ದರು. ಅದಾದ ಬಳಿಕ ಚಿಕ್ಕಮಗಳೂರಿನಲ್ಲಿ ಕೇರಳದ ಬಾಲಕಿ ಮೃತಪಟ್ಟಿದ್ದಳು. ಈ ಘಟನೆ ಬಳಿಕ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಇದೀಗ ಟ್ರೆಕ್ಕಿಂಗ್‌ಗೆ ಹೋಗುವವರಿಗೆ ಹೊಸ ರೂಲ್ಸ್‌ ಜಾರಿಗೊಳಿಸಲಾಗಿದೆ.

ಇದನ್ನೂ ಓದಿ: ಯೋಗೇಶ್‌ ಗೌಡ ಹತ್ಯೆ ಕೇಸ್!‌ – ಶಾಸಕ ವಿನಯ್ ಕುಲಕರ್ಣಿ ಸೇರಿ 16 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ರಾಜ್ಯದಲ್ಲಿ ಚಾರಣಕ್ಕೆ  ತೆರಳಿ ಸಂಭವಿಸುತ್ತಿರುವ ಅಪಘಾತಗಳ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕಟ್ಟುನಿಟ್ಟಿನ ಪ್ರಮಾಣಿತ ಕಾರ್ಯಾಚರಣೆ ವಿಧಾನ ಜಾರಿಗೆ ತಂದಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಬೆಂಗಳೂರಿನ ಸೆವೆನ್ ಮಿನಿಸ್ಟರ್ ಕ್ವಾರ್ಟರ್ಸ್‌ನಲ್ಲಿ ಎಸ್‌ಒಪಿ ಬಿಡುಗಡೆ ಮಾಡಿ ಮಹತ್ವದ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 44 ಚಾರಣ ಪಾಯಿಂಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಕೊಡಗು ತಡಿಯಾಂಡಮೊಳ್ ಸೇರಿದಂತೆ ಹಲವು ಕಡೆಗಳಲ್ಲಿ ಚಾರಣಕ್ಕೆ ತೆರಳಿದವರು ನಾಪತ್ತೆಯಾಗಿರುವುದು ಹಾಗೂ ಚಿಕ್ಕಮಗಳೂರಿನಲ್ಲಿ ಬಾಲಕಿ ಸಾವನ್ನಪ್ಪಿದ ಘಟನೆಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಹೊಸ ನಿಯಮಗಳ ಪ್ರಕಾರ, ಚಾರಣಿಗರು ಆನ್‌ಲೈನ್ ಮೂಲಕಏ ಬುಕ್ಕಿಂಗ್ ಮಾಡಬೇಕು. 10 ಮಂದಿಗೆ ಒಬ್ಬ ಗೈಡ್ ಕಡ್ಡಾಯವಾಗಿದ್ದು, ಗೈಡ್ ಇಲ್ಲದೆ ಚಾರಣಕ್ಕೆ ಅವಕಾಶ ಇರುವುದಿಲ್ಲ. ಟ್ರೆಕಿಂಗ್ ಹೋಗುವವರ ಮೊಬೈಲ್‌ಗಳಲ್ಲಿ ಟ್ರ್ಯಾಕಿಂಗ್ ಆಪ್ ಅಳವಡಿಕೆ ಮಾಡಲಾಗುತ್ತದೆ. ಜೊತೆಗೆ ಗೈಡ್‌ಗಳಿಗೆ ಜಿಪಿಎಸ್ ಸೌಲಭ್ಯ ಇರುವ ವಾಕಿಟಾಕಿ ನೀಡಲಾಗುತ್ತದೆ ಎಂದಿದ್ದಾರೆ.

ಪ್ರತಿ ಸ್ಥಳದ ಕ್ಯಾರಿಂಗ್ ಕೆಪಾಸಿಟಿಯನ್ನು ನಿಯಂತ್ರಿಸಲಾಗಿದ್ದು, ಒಮ್ಮೆ 150 ಮಂದಿಗೆ ಮಾತ್ರ ಚಾರಣಕ್ಕೆ ಅವಕಾಶ ನೀಡಲಾಗುತ್ತದೆ. ಒಂದು ತಂಡ ಮರಳಿದ ಬಳಿಕವೇ ಮತ್ತೊಂದು ತಂಡವನ್ನು ಕಳುಹಿಸಲಾಗುತ್ತದೆ. ಟಾರ್ಚ್, ಹೆಡ್ ಲ್ಯಾಂಪ್ ಸೇರಿದಂತೆ ಅಗತ್ಯ ಸುರಕ್ಷತಾ ಉಪಕರಣಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಹೇಳಿರು ಖಂಡ್ರೆ, ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದಾಗಿ ತಿಳಿಸಿದ್ದಾರೆ.

Shwetha M