ಜಮೀನಿಗಾಗಿ ಅಣ್ಣನ ಕೊ*ಲೆ, ತಮ್ಮನಿಂದ ಮನೆಗೆ ಬೆಂಕಿ – ದ್ವೇಷಕ್ಕೆ ಬೀದಿಗೆ ಬಿದ್ದ 10ಕ್ಕೂ ಹೆಚ್ಚು ಕುಟುಂಬ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಾವಿನಮಟ್ಟಿ ಗ್ರಾಮದಲ್ಲಿ ಕೇವಲ ಎರಡು ಎಕರೆ ಜಮೀನು ವಿವಾದಕ್ಕೆ ಯುವಕನೊಬ್ಬನ ಭೀಕರ ಕೊಲೆಯಾಗಿದೆ. ಇದಕ್ಕೆ ಪ್ರತೀಕಾರವಾಗಿ ಕೊಲೆಯಾದವನ ಸಹೋದರ ಆರೋಪಿಗಳ ಮನೆಗೆ ಬೆಂಕಿ ಹಚ್ಚಿದ್ದಾನೆ. ಈ ಘಟನೆಗಳಿಂದ ಕುಟುಂಬಗಳು ಬೀದಿಪಾಲಾಗಿವೆ. ಪೊಲೀಸರು ಕೊಲೆ ಹಾಗೂ ಅಗ್ನಿಕಾಂಡದ ಆರೋಪಿಗಳನ್ನು ಬಂಧಿಸಿದ್ದು, ಕಾನೂನು ಕ್ರಮ ಜರುಗಿಸಿದ್ದಾರೆ.
ಇದನ್ನೂ ಓದಿ: ರಿಲೀಸ್ ಆಗುವುದಕ್ಕೂ ಮುನ್ನವೇ ದಳಪತಿ ಸಿನಿಮಾ ಟಿವಿಯಲ್ಲಿ ಪ್ರಸಾರ! – ವಿಜಯ್ ಚಿತ್ರ ಲೀಕ್ ಮಾಡಿದವರು ಅರೆಸ್ಟ್!
ಹಳೆ ದ್ವೇಷದ ಹಿನ್ನೆಲೆಯಲ್ಲಿ ಹನುಮಂತರಾಯನ ಕುಟುಂಬ ಮತ್ತು ಸಂಬಂಧಿಕರು ಸೇರಿ 27 ವರ್ಷದ ಪರಮೇಶ್ವರ ಎಂಬಾತನನ್ನು ತಲ್ವಾರ್ ಮತ್ತು ದೊಣ್ಣೆಗಳಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿದ್ದರು. ಈ ವೇಳೆ ಅಣ್ಣನನ್ನು ಕಾಪಾಡಲು ಹೋದ ರೇವಣಸಿದ್ದನಿಗೂ ಗಂಭೀರ ಗಾಯಗಳಾಗಿದ್ದವು. ಘಟನೆ ನಡೆದ ಒಂದೇ ದಿನದಲ್ಲಿ ಕೆಂಭಾವಿ ಪೊಲೀಸರು ಪ್ರಮುಖ ಆರೋಪಿಗಳಾದ ಪರಮಣ್ಣ, ದೇವಿಂದ್ರಪ್ಪ, ಚನ್ನಪ್ಪ ಮತ್ತು ಮಹಾದೇವಪ್ಪ ಸೇರಿ ನಾಲ್ವರನ್ನು ಬಂಧಿಸಿದ್ದರು.
ಅಣ್ಣನ ಸಾವಿನಿಂದ ಕೆರಳಿದ್ದ ಸಹೋದರ ರೇವಣಸಿದ್ದ, ಆರೋಪಿಗಳ ಕುಟುಂಬ ಊರು ಬಿಟ್ಟಿದ್ದ ಸಮಯ ಸಾಧಿಸಿ ಅವರ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ಅಗ್ನಿಕಾಂಡದಲ್ಲಿ ಮನೆಯಲ್ಲಿದ್ದ ಧಾನ್ಯಗಳು, ಬಟ್ಟೆ ಬರೆ ಸೇರಿ ಸುಮಾರು 10 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಭಸ್ಮವಾಗಿವೆ. ಮನೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ರೇವಣಸಿದ್ದನನ್ನು ಕೂಡ ಪೊಲೀಸರು ಬಂಧಿಸಿದ್ದು, ಅಣ್ಣನ ಕಳೆದುಕೊಂಡ ದುಃಖದಲ್ಲಿದ್ದ ಕುಟುಂಬದ ಮತ್ತೊಬ್ಬ ಸದಸ್ಯ ಈಗ ಕಂಬಿ ಎಣಿಸುವಂತಾಗಿದೆ.

ನೋಡಿರಿ

