ದೇಶದಲ್ಲಿ ಮತ್ತೆ ಲಾಕ್ಡೌನ್ ಆಗುತ್ತಾ? – ಕೇಂದ್ರ ಸರ್ಕಾರದಿಂದ ಬಿಗ್ ಅಪ್ಡೇಟ್!

ಇರಾನ್ – ಇಸ್ರೇಲ್, ಅಮೆರಿಕಾ ಯುದ್ಧದದ ಪರಿಣಾಮ ಹಲವು ದೇಶಗಳ ಮೇಲೆ ಬಿದ್ದಿದೆ. ಇದ್ರಿಂದಾಗಿ ತೈಲ ಬಿಕ್ಕಟ್ಟು ಆರಂಭವಾಗಿದೆ. ಈ ಬೆನ್ನಲ್ಲೇ ಭಾರತದಲ್ಲಿ ಸಾಕಷ್ಟು ಸುಳ್ಳು ಸುದ್ದಿ ಹರಿದಾಡುತ್ತಿವೆ. ಕೋವಿಡ್ 19 ನಂತೆ ದೇಶದಲ್ಲಿ ಮತ್ತೆ ಲಾಕ್ಡೌನ್ ಆಗಲಿದೆ ಎಂಬ ಸುದ್ದಿ ಹರಿದಾಡುತಿತ್ತು. ಇದೀಗ ಹರಿದಾಡುತ್ತಿರುವ ಗಾಳಿ ಸುದ್ದಿಗಳಿಗೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ.
ಇದನ್ನೂ ಓದಿ: LPG ಗ್ಯಾಸ್ ಸಿಲಿಂಡರ್ ಬಿಕ್ಕಟ್ಟು! – ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ 3,600ರೂ.!
ತೈಲ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ಲಾಕ್ಡೌನ್ ಜಾರಿ ಮಾಡಬಹುದು ಅನ್ನೋ ಬಿಟ್ಟಿ ಸುದ್ದಿಗಳನ್ನ ಹರಿಯಬಿಡಲಾಗಿತ್ತು. ಇದೀಗ ಈ ಬಗ್ಗೆ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. ಜಾಗತಿಕ ಪರಿಸ್ಥಿತಿ ಅಸ್ಥಿರವಾಗಿದ್ದು, ಇಂಧನ, ಪೂರೈಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಹೊಸ ಸವಾಲುಗಳನ್ನು ಎದುರಿಸಲು ಸಿದ್ಧರಿದ್ದೇವೆ. ಭಾರತದಲ್ಲಿ ಲಾಕ್ಡೌನ್ ಬಗ್ಗೆ ಇರುವ ವದಂತಿಗಳು ಶುದ್ಧ ಸುಳ್ಳು. ಸರ್ಕಾರದ ಮುಂದೆ ಅಂತಹ ಯಾವುದೇ ಪ್ರಸ್ತಾವನೆಗಳೂ ಇಲ್ಲ. ಇಂತಹ ಸಮಯದಲ್ಲಿ ನಾವೆಲ್ಲಾ ಒಗ್ಗಟ್ಟಾಗಿ ಇರೋದು ಸೂಕ್ತ. ಈ ರೀತಿಯ ವದಂತಿಗಳು ಸಮಾಜಕ್ಕೆ ಹಾನಿಕಾರಕ ವಾಗಲಿದೆ ಅಂತ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟನೆ ಕೊಟ್ಟಿದ್ದಾರೆ.
ಕಮರ್ಷಿಯಲ್ ಗ್ಯಾಸ್ ಪೂರೈಕೆಯಲ್ಲಿನ ಸಮಸ್ಯೆ ಬಗೆಹರಿಕೆಗೆ ಕೇಂದ್ರ ಮುಂದಾಗಿದೆ. ರಾಜ್ಯ ಸರ್ಕಾರಗಳ ಮನವಿ ಮೇರೆಗೆ ಶೇ.20ರಷ್ಟು ಗ್ಯಾಸ್ ಹೆಚ್ಚಳ ಮಾಡಿದೆ. ಈಗಿರುವ ಕಮರ್ಷಿಯಲ್ ಗ್ಯಾಸ್ ಮಿತಿ ಶೇ.50 ರಿಂದ 70ಕ್ಕೆ ಹೆಚ್ಚಳವಾಗಲಿದೆ. ಕೈಗಾರಿಕೆ, ಜವಳಿ ಸೇರಿದಂತೆ ಹಲವು ವಲಯಗಳಿಗೆ ಅನುಕೂಲವಾಗಲಿದೆ.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ 4ನೇ ವಾರಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ. ಸಂಜೆ 6.30 ಕ್ಕೆ ವಿಡಿಯೋ ಸಂವಾದ ನಡೆಸಲಿರುವ ಮೋದಿ ಕೊಲ್ಲಿ ಯುದ್ಧದ ಬಿಕ್ಕಟ್ಟು ಎದುರಿಸಲು ಸಲಹೆ ನೀಡುವ ಸಾಧ್ಯತೆ ಇದೆ.
ಸಿಎಂಗಳೊಂದಿಗೆ ಮೋದಿ ಸಭೆ.. ಏನೆಲ್ಲ ಚರ್ಚೆ..?
- ಎಲ್ಪಿಜಿ ಅಭಾವವನ್ನ ಎದುರಿಸಲು ಕೈಗೊಂಡ ಕ್ರಮಗಳು
- ಪೂರೈಕೆ ಸರಪಳಿ ವ್ಯವಸ್ಥೆ, ಇಂಧನ ಭದ್ರತೆ ಬಗ್ಗೆ ಚರ್ಚೆ
- ಯುದ್ಧ ಪೀಡಿತ ದೇಶಗಳಲ್ಲಿರುವ ಭಾರತೀಯರ ಸುರಕ್ಷತೆ
- ದೇಶದ ಆಂತರಿಕ ಸ್ಥಿರತೆ ಬಗ್ಗೆ ಚರ್ಚೆ
- ರಾಜ್ಯಗಳ ನಡುವಿನ ಸಮನ್ವಯತೆಯ ಖಚಿತತೆ
- ಬಿಕ್ಕಟ್ಟು ಎದುರಿಸಲು ಟೀಂ ಇಂಡಿಯಾ ರೀತಿ ಸಮನ್ವಯತೆ
- ಸಂಘರ್ಷಮಯ ಸ್ಥಿತಿಯಲ್ಲಿ ಒಗ್ಗಟ್ಟಿನ ಮಂತ್ರ ಪಠಣೆ

ನೋಡಿರಿ

