ಕರ್ನಾಟಕದಲ್ಲಿ ಧೂಳೆಬ್ಬಿಸಿದ ಧುರಂಧರ್ 2 – ಏಳೇ ದಿನಕ್ಕೆ 70+ ಕೋಟಿ ರೂ. ಕಲೆಕ್ಷನ್

ಕರ್ನಾಟಕದಲ್ಲಿ ಧೂಳೆಬ್ಬಿಸಿದ ಧುರಂಧರ್  2 – ಏಳೇ ದಿನಕ್ಕೆ 70+ ಕೋಟಿ ರೂ. ಕಲೆಕ್ಷನ್

ರಣವೀರ್‌ ಸಿಂಗ್‌ ನಟನೆಯ ʻಧುರಂಧರ್‌ 2ʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಚಿನ್ನದ ಮಳೆ ಸುರಿಸುತ್ತಿರುವುದು ಗೊತ್ತೇ ಇದೆ. ವಿಶ್ವಾದ್ಯಂತ ಈ ಚಿತ್ರವು ಆಗಲೇ 1000 ಕೋಟಿ ರೂ. ಗಡಿಗೆ ಬಂದು ನಿಂತಿದೆ. ಇನ್ನು, ದಕ್ಷಿಣ ಭಾರತದಲ್ಲಿ ಈ ಚಿತ್ರಕ್ಕೆ ಕರ್ನಾಟಕದಿಂದ ದೊಡ್ಡಮಟ್ಟದ ರೆಸ್ಪಾನ್ಸ್‌ ಸಿಕ್ಕಿದೆ. ಹಾಗಾಗಿ, ಕರ್ನಾಟಕದಲ್ಲಿ ದಾಖಲೆ ಪ್ರಮಾಣದ ಗಳಿಕೆ ಆಗಿದೆ. ಹೌದು, ʻಧುರಂಧರ್‌ 2ʼ ಸಿನಿಮಾವು ಕರುನಾಡಿನಲ್ಲಿ ಏಳೇ ದಿನಕ್ಕೆ 70+ ಕೋಟಿ ರೂ. ಗಳಿಕೆ ಮಾಡಿದೆ ಎಂಬ ಮಾಹಿತಿ ಸಿಕ್ಕಿದೆ.

ರಣವೀರ್‌ ಸಿಂಗ್‌, ಸಾರಾ ಅರ್ಜುನ್‌ ನಟನೆಯ ʻಧುರಂಧರ್‌ 2ʼ ಚಿತ್ರಕ್ಕೆ ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ದೊಡ್ಡಮಟ್ಟದ ರೆಸ್ಪಾನ್ಸ್‌ ಸಿಕ್ಕಿದ್ದು, ಸಿಕ್ಕಾಪಟ್ಟೆ ಗಳಿಕೆ ಆಗುತ್ತಿದೆ. ಬರೀ ಏಳೇ ದಿನಕ್ಕೆ ಕರ್ನಾಟಕದಲ್ಲಿ ಈ ಚಿತ್ರವು ಬರೋಬ್ಬರಿ 73 ಕೋಟಿ ರೂ.ಗಳನ್ನು ಬಾಚಿಕೊಂಡಿದೆ. ಕನ್ನಡೇತರ ಚಿತ್ರವೊಂದು ಕರ್ನಾಟಕದಲ್ಲಿ ಮೊದಲ ವಾರದಲ್ಲಿ ಮಾಡಿದ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಇದಾಗಿದೆ. ಈವರಗೂ ಪರಭಾಷೆಯ ಯಾವ ಸಿನಿಮಾವು ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟೊಂದು ದೊಡ್ಡಮಟ್ಟದ ಗಳಿಕೆ ಮಾಡಿರಲಿಲ್ಲ. ಅಂದಹಾಗೆ, ಏಳನೇ ದಿನ ಕರ್ನಾಟಕದಲ್ಲಿ ಈ ಚಿತ್ರವು 5.74 ಕೋಟಿ ರೂ. ಕಮಾಯಿ ಮಾಡಿದೆ.

ಇದನ್ನೂ ಓದಿ: ರೈತರಿಗೆ ಮತ್ತೆ ವರುಣ ಶಾಕ್!‌ –  ರಾಜ್ಯದಲ್ಲಿ ಏ.1ರವರೆಗೆ ಆಲಿಕಲ್ಲು ಮಳೆ!

ಇಷ್ಟೊಂದು ದೊಡ್ಡಮಟ್ಟದ ಗಳಿಕೆ ಆಗುವುದರ ಹಿಂದೆ ಹಲವು ತಂತ್ರಗಳಿವೆ. ಮೊದಲನೆಯದಾಗಿ, ಬೆಂಗಳೂರಿನಲ್ಲಿ ಸಿಕ್ಕಾಪಟ್ಟೆ ಶೋಗಳನ್ನು ಈ ಚಿತ್ರಕ್ಕಾಗಿ ನೀಡಲಾಗಿದೆ. ಆರಂಭದ ಕೆಲ ದಿನಗಳು ಟಿಕೆಟ್‌ ದರವಂತೂ ಸಿಕ್ಕಾಪಟ್ಟೆ ದುಬಾರಿ ಆಗಿತ್ತು. ಇದು ಗಳಿಕೆ ಹೆಚ್ಚಲು ಪ್ರಧಾನ ಕಾರಣವಾಗಿದೆ.

ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಅವರು ʻಧುರಂಧರ್‌ 2ʼ ಚಿತ್ರವನ್ನು ಕೊಂಡಾಡಿದ್ದಾರೆ. “ಧುರಂಧರ್: ದಿ ರಿವೆಂಜ್ ಸಿನಿಮಾ ಅದ್ಭುತವಾಗಿದೆ! ಚಿತ್ರದ ಪ್ರತಿಯೊಂದು ಕ್ಷಣವನ್ನೂ ಆನಂದಿಸಿದೆ. ರಣವೀರ್‌ ಸಿಂಗ್‌ ಅವರ ನಟನೆ ಅಮೋಘವಾಗಿದೆ, ಇನ್ನು ಶಾಶ್ವತ್ ಸಚ್​ದೇವ್ ಅವರ ಸಂಗೀತ ಅದ್ಭುತವಾಗಿದೆ, ವಿಶೇಷವಾಗಿ ಹಳೆಯ ಹಾಡುಗಳ ಬಳಕೆ ಸಿನಿಮಾದ ಮೇಲೆ ಬಲವಾದ ಪ್ರಭಾವ ಬೀರುತ್ತದೆ. ಆದಿತ್ಯ ಧರ್ ಅವರ ದೃಢ ವಿಶ್ವಾಸ ಮತ್ತು ಕಲೆಗಾರಿಕೆಗೆ ದೊಡ್ಡ ನಮಸ್ಕಾರಗಳು. ದೇಶಭಕ್ತಿಗಾಗಿ ಒಬ್ಬ ಸೈನಿಕ ಪಡುವ ಶ್ರಮವೇ ಈ ಸಿನಿಮಾದ ಆತ್ಮ.‌ ‘ಧುರಂಧರ್ 2: ದಿ ರಿವೆಂಜ್’ ಚಿತ್ರತಂಡದ ಪ್ರತಿಯೊಬ್ಬರಿಗೂ ಅಭಿನಂದನೆಗಳು” ಎಂದು ಶಿವಣ್ಣ ಟ್ವೀಟ್‌ ಮಾಡಿದ್ದಾರೆ.

Kishor KV