ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ಇಡೀ ದಿನ ರಸ್ತೆ ಮಧ್ಯೆ ಬೋರ್ಡ್ ಹಿಡಿದು ನಿಲ್ಲುವ ಶಿಕ್ಷೆ ನೀಡಿದ ಕೋರ್ಟ್!

ವಾಹನ ಸವಾರರ ಸುರಕ್ಷತೆಗೆ ಸರ್ಕಾರ ಸಾಕಷ್ಟು ನಿಯಮಗಳನ್ನು ಜಾರಿಗೊಳಿಸಿದೆ. ಆದ್ರೆ ಎಷ್ಟು ಕಠಿಣ ರೂಲ್ಸ್ ಜಾರಿಗೆ ತಂದ್ರೂ ವಾಹನ ಸವಾರರು ಮಾತ್ರ ಬದಲಾಗಲ್ಲ. ರೂಲ್ಸ್ ಬ್ರೇಕ್ ಮಾಡುವುದಲ್ಲದೇ, ತಮ್ಮ ಜೀವಕ್ಕೆ ಅಪಾಯ ತಂದುಕೊಳ್ಳುತ್ತಾರೆ. ಇದೀಗ ಇಲ್ಲೊಬ್ಬರು ಟ್ರಾಫಿಕ್ಸ್ ರೂಲ್ಸ್ ಬ್ರೇಕ್ ಮಾಡಿದ್ದು, ಕೋರ್ಟ್ ಸರಿಯಾದ ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ: ವಿವಾದಕ್ಕೆ ಗುರಿಯಾಯ್ತು ಕೆಡಿ ಸಿನಿಮಾದ ಸಾಂಗ್! – ಸರ್ಸೆ ನಿನ್ನ ಸೆರಗ ಹಾಡಿನ ಸಾಹಿತ್ಯಕ್ಕೆ ಫ್ಯಾನ್ಸ್ ಗರಂ!
ಹೆಲ್ಮೆಟ್ ಧರಿಸದೇ, ಒನ್ ವೇ ರೈಡಿಂಗ್ ಹಾಗೂ ಡ್ರಿಂಕ್ & ಡ್ರೈವ್ ಮಾಡಿದ ಆರೋಪಿಗೆ ಚಿಕ್ಕಮಗಳೂರು ನ್ಯಾಯಾಲಯ ಬೋರ್ಡ್ ಹಿಡಿದು ಇಡೀ ದಿನ ರಸ್ತೆ ಮಧ್ಯೆ ನಿಲ್ಲುವ ಕಮ್ಯೂನಿಟಿ ಶಿಕ್ಷೆ ನೀಡಿದೆ.
ಏನಿದು ಘಟನೆ?
ಕಡೂರು ಪಟ್ಟಣದ ಬಿಸಿಲೇಹಳ್ಳಿ ಗ್ರಾಮದ ರಂಜಿತ್ ಎಂಬವನು ಸಾಕಷ್ಟು ಸಲ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದ. ಪೊಲೀಸರು ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಕರೆದೊಯ್ದಿದ್ದರು. ಈ ವೇಳೆ ನ್ಯಾಯಾಲಯದಲ್ಲಿ ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಕ್ಕೆ ಕೋರ್ಟ್ ಈ ರೀತಿಯ ಕಮ್ಯುನಿಟಿ ಸೇವೆಯ ವಿಭಿನ್ನ ಶಿಕ್ಷೆ ನೀಡಿದೆ. ಇಂದು (ಮಾ.17) ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಕಡೂರು ಪಟ್ಣಣದ ಮಲ್ಲೇಶ್ವರ ಸರ್ಕಲ್ನಲ್ಲಿ ರಸ್ತೆ ಮಧ್ಯೆ ಬೋರ್ಡ್ ಹಿಡಿದು ನಿಲ್ಲುವಂತೆ ಆದೇಶಿಸಿದೆ. ಕೋರ್ಟ್ ಆದೇಶದಂತೆ ಕೈಯಲ್ಲಿ ಬೋರ್ಡ್ ಹಿಡಿದು ನಿಂತ ತಪ್ಪಿತಸ್ಥನನ್ನು ನಿಲ್ಲುತ್ತಾನೋ? ಇಲ್ವೋ? ಎಂದು ಗಮನಿಸಲು ಓರ್ವ ಪೊಲೀಸ್ ಸಿಬ್ಬಂದಿಯನ್ನು ನೇಮಿಸುವಂತೆ ನ್ಯಾಯಾಲಯ ಸೂಚಿಸಿತ್ತು. ಈ ದಿನದ ಶಿಕ್ಷೆ ಪೂರ್ಣಗೊಂಡ ನಂತರ ಪೊಲೀಸರು ಕೋರ್ಟ್ಗೆ ವರದಿ ಸಲ್ಲಿಸುವಂತೆ ಕೋರ್ಟ್ ಆದೇಶದಲ್ಲಿ ತಿಳಿಸಿದೆ. ಇದೀಗ ರಂಜಿತ್ ಇಡೀ ದಿನ ರಸ್ತೆ ಮಧ್ಯೆ ಬೋರ್ಡ್ ಹಿಡಿದು ನಿಂತಿದ್ದಾರೆ.
ಇನ್ನು ಈ ರೀತಿಯ ವಿಭಿನ್ನ ಶಿಕ್ಷೆಯ ಮೂಲಕ ನ್ಯಾಯಾಲಯ ಟ್ರಾಫಿಕ್ ನಿಯಮಗಳ ಪಾಲನೆ ಮಾಡುವಂತೆ ಎಚ್ಚರಿಕೆಯ ಸಂದೇಶ ನೀಡಿದೆ. ಸಾರ್ವಜನಿಕರು ಕೂಡ ಈ ಶಿಕ್ಷೆಯನ್ನು ಸ್ವಾಗತಿಸಿ ಮೆಚ್ಚಿದ್ದಾರೆ. 500 – 1000 ಸಾವಿರ ರೂ. ದಂಡ ಹಾಕುವ ಬದಲು ಇಡೀ ದಿನ ಈ ರೀತಿ ನಿಲ್ಲಿಸಿದರೆ, ಟ್ರಾಫಿಕ್ ರೂಲ್ಸ್ ಬಗ್ಗೆ ಭಯ ಬರುವುದರ ಜೊತೆ ತಪ್ಪು ಮಾಡದಂತೆ ಎಲ್ಲರೂ ಎಚ್ಚರಿಕೆ ವಹಿಸುತ್ತಾರೆ ಎಂಬುದು ಸಾರ್ವಜನಿಕ ವಲಯದ ಅಭಿಪ್ರಾಯವಾಗಿದೆ.

ನೋಡಿರಿ

