ಅಂದು ಸಂಜು ಬ್ಯಾಟಿಂಗ್ಗೆ ಸೂರ್ಯ ವ್ಯಂಗ್ಯ – ಇಂದು ಸಂಜು ಸ್ಯಾಮ್ಸನ್ ಮುಂದೆ ತಲೆಬಾಗಿದ ಸೂರ್ಯ

ಟೀಮ್ ಇಂಡಿಯಾ ಪರ ಗೆಲುವಿನ ರೂವಾರಿಯಾದ ಸಂಜು ಸ್ಯಾಮ್ಸನ್ ಆಟಕ್ಕೆ ಭಾರತೀಯ ಕ್ರಿಕೆಟ್ ಲೋಕ ಬಹುಪರಾಕ್ ಹೇಳಿದೆ. ಸೆಮಿಫೈನಲ್ಗೆ ಎಂಟ್ರಿಯಾಗಲು ಸಂಜು ಸ್ಫೋಟಕ ಇನ್ನಿಂಗ್ಸ್ ಕಾರಣ. ಇವರ ಆಟಕ್ಕೆ ಕ್ಯಾಪ್ಟನ್ ಸೂರ್ಯ ಕೂಡಾ ತಲೆಬಾಗಿದ್ದಾರೆ. ಅಂದು ಇದೇ ಸೂರ್ಯಕುಮಾರ್ ಸಂಜು ಬ್ಯಾಟಿಂಗ್ ಬಗ್ಗೆ ಲೇವಡಿ ಮಾಡಿದ್ದರು. ಇದೀಗ ತಂಡವನ್ನು ಗೆಲ್ಲಿಸಿದ ಸಂಜುಗೆ ತಲೆಬಾಗಿ ಗೌರವ ಸೂಚಿಸಿದ್ದಾರೆ.
ಇದನ್ನೂ ಓದಿ:ಭಾರತದ ಪರ ಸಂಜು ಸ್ಯಾಮ್ಸನ್ ಹೊಸ ದಾಖಲೆ- ಈ ಸಾಧನೆ ಮಾಡಿದ ಟೀಮ್ ಇಂಡಿಯಾದ ಮೊದಲ ವಿಕೆಟ್ ಕೀಪರ್ ಇವರೇ
ಸಂಜು ಸ್ಯಾಮ್ಸನ್ ಶತಕ ವಂಚಿತರಾಗಿದ್ದು ಸತ್ಯ. ಆದರೆ, ಸಂಜು ಸಿಡಿಸಿದ ಅಮೋಘ 97 ರನ್ ಭಾರತದ ಪಾಲಿಗೆ ಮಹತ್ವದ ಇನ್ನಿಂಗ್ಸ್. ಪಂದ್ಯ ಗೆಲ್ಲಿಸಿದ ನಂತರ ಸಂಜು ಡ್ರೆಸ್ಸಿಂಗ್ ರೂಮ್ ಕಡೆ ಬರುವಾಗ ಕ್ಯಾಪ್ಟನ್ ಸೂರ್ಯಕುಮಾರ್ ಎದುರಾದರು. ಸಂಜು ಮುಂದೆ ನಿಂತ ಸೂರ್ಯಕುಮಾರ್, ಗೌರವಪೂರ್ವಕವಾಗಿ ವಿಶ್ ಮಾಡಿದ್ರು. ಸೂರ್ಯ ತಮ್ಮ ಕ್ಯಾಪ್ ತೆಗೆದು ಸಂಜು ಎದುರು ತಲೆಬಾಗಿದರು. ಈ ಒಂದು ಫೋಟೋ ಅದೆಷ್ಟೋ ವಿಚಾರಗಳಿಗೆ ಸಾಕ್ಷಿಯಾಯಿತು.
ಟಿ20 ವಿಶ್ವಕಪ್ ಟೂರ್ನಿಯ ಮೊದಲ ಹಂತದ ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಇದೇ ಕ್ಯಾಪ್ಟನ್ ಸೂರ್ಯ ಲೇವಡಿ ಮಾಡಿದ್ದರು. ನಮೀಬಿಯ ವಿರುದ್ಧದ ಪಂದ್ಯದಿಂದ ಅಭಿಷೇಕ್ ಶರ್ಮಾ ಹೊರಗುಳಿದಿದ್ದ ಕಾರಣ ಸ್ಯಾಮ್ಸನ್ ಅವರನ್ನು ಕಣಕ್ಕಿಳಿಸಲಾಗಿತ್ತು. ಆದರೆ ಪಾಕಿಸ್ತಾನ್ ಮತ್ತು ನೆದರ್ಲೆಂಡ್ಸ್ ವಿರುದ್ಧದ ಪಂದ್ಯದ ವೇಳೆ ಅವರನ್ನು ಕೈ ಬಿಡಲಾಯಿತು. ಈ ಎರಡು ಪಂದ್ಯಗಳಲ್ಲಿ ಸೊನ್ನೆ ಸುತ್ತುವ ಮೂಲಕ ಅಭಿಷೇಕ್ ಶರ್ಮಾ ನಿರಾಸೆ ಮೂಡಿಸಿದ್ದರು. ಹೀಗಾಗಿಯೇ ಸೌತ್ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಸಂಜು ಸ್ಯಾಮ್ಸನ್ಗೆ ಈ ಬಾರಿಯಾದರೂ ಅವಕಾಶ ನೀಡುತ್ತೀರಾ ಎಂದು ಸೂರ್ಯಕುಮಾರ್ ಯಾದವ್ ಅವರನ್ನು ಪ್ರಶ್ನಿಸಲಾಗಿತ್ತು. ಈ ಪ್ರಶ್ನೆಯನ್ನು ಲೇವಡಿ ಮಾಡಿದಂತೆ ಅಂದು ಸೂರ್ಯಕುಮಾರ್ ಯಾದವ್ ಉತ್ತರ ನೀಡಿದ್ದರು. ವರದಿಗಾರರು ಸಂಜು ಸ್ಯಾಮ್ಸನ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ಬಗ್ಗೆ ಪ್ರಸ್ತಾಪಿಸಿದಾಗ, ಸೂರ್ಯಕುಮಾರ್ ತಮ್ಮದೇ ಶೈಲಿಯಲ್ಲಿ ನಗುತ್ತಾ ಮರುಪ್ರಶ್ನೆ ಹಾಕಿದ್ದರು. “ಹಾಗಾದರೆ ನಾನು ಸಂಜು ಅವರನ್ನು ಅಭಿಷೇಕ್ ಬದಲಿಗೆ ಆಡಿಸಬೇಕು ಎಂದು ನೀವು ಹೇಳುತ್ತಿದ್ದೀರಾ?” ಎಂದು ಕೇಳಿದರು. ವರದಿಗಾರರು ಹೌದು ಎಂದಾಗ, ಸೂರ್ಯ ನಗುತ್ತಾ, “ಅಂದರೆ 3ನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಅವರನ್ನು ತೆಗೆದು ಸಂಜು ಅವರನ್ನು ಆಡಿಸಬೇಕೇ?” ಎಂದು ಮರುಪ್ರಶ್ನಿಸಿ ಲೇವಡಿ ಮಾಡಿದ್ದರು. ಇದೀಗ ಅದೇ ಸೂರ್ಯಕುಮಾರ್ ಯಾದವ್ ಸಂಜು ಸ್ಯಾಮ್ಸನ್ ಮುಂದೆ ತಲೆಬಾಗಿದ್ದಾರೆ. ಟೀಮ್ ಇಂಡಿಯಾ ಗೆದ್ದ ಬೆನ್ನಲ್ಲೇ ಮೈದಾನಕ್ಕೆ ಆಗಮಿಸಿದ ಸೂರ್ಯಕುಮಾರ್ ಯಾದವ್, ಡ್ರೆಸ್ಸಿಂಗ್ ರೂಮ್ ಗೆ ತೆರಳುತ್ತಿದ್ದ ಸಂಜು ಸ್ಯಾಮ್ಸನ್ಗೆ ತಲೆಬಾಗುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ನೋಡಿರಿ

