ನಾಳೆ ಚಂದ್ರಗ್ರಹಣ – ರಾಜ್ಯದ ಈ ದೇವಾಲಯಗಳ ದರ್ಶನ ಸಮಯದಲ್ಲಿ ಬದಲಾವಣೆ

ವರ್ಷದ ಮೊದಲ ಚಂದ್ರಗ್ರಹಣ ಹೋಳಿ ಹುಣ್ಣಿಮೆಯ ದಿನದಂದು ಸಂಭವಿಸುತ್ತಿದೆ. ಇದನ್ನು ಬ್ಲಡ್ ಮೂನ್ ಎಂದೂ ಕರೆಯಲಾಗುತ್ತದೆ. ಚಂದ್ರಗ್ರಹಣದ ಹಿನ್ನೆಲೆ ರಾಜ್ಯದ ಪ್ರಮುಖ ಪುಣ್ಯಕ್ಷೇತ್ರಗಳ ಪೂಜೆ ಮತ್ತು ದರ್ಶನದ ಸಮಯದಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಲಾಗಿದೆ.
ಇದನ್ನೂ ಓದಿ: ಸಂಜು ಸೂಪರ್ ಡೂಪರ್ ಬ್ಯಾಟಿಂಗ್, ದಾಖಲೆಯ ಚೇಸಿಂಗ್ – ಟೀಮ್ ಇಂಡಿಯಾ ಸೆಮಿಫೈನಲ್ಗೆ ಎಂಟ್ರಿ
ನಾಳೆ ಕೇತುಗ್ರಸ್ತ ರಕ್ತ ಚಂದ್ರಗ್ರಹಣ ಸಂಭವಿಸಲಿದೆ. ಈ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಪುಣ್ಯಕ್ಷೇತ್ರಗಳ ಪೂಜೆ ಮತ್ತು ದರ್ಶನದ ಸಮಯದಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಲಾಗಿದೆ. ಬಹುತೇಕ ದೇವಾಲಯಗಳಲ್ಲಿ ಗ್ರಹಣ ಕಾಲದಲ್ಲಿ ದರ್ಶನ ಸ್ಥಗಿತಗೊಳಿಸಿ, ಶುದ್ಧೀಕರಣದ ನಂತರವಷ್ಟೇ ಭಕ್ತರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ.
ಯಾವ ಯಾವ ದೇಗುಲಗಳಲ್ಲಿ ದರ್ಶನದ ಸಮಯ ಬದಲು?
ದೊಡ್ಡ ಗಣಪತಿ ದೇವಾಲಯ
ಗ್ರಹಣ ಮೋಕ್ಷವಾದ ನಂತರ ಅಂದರೆ ರಾತ್ರಿ 7.45ಕ್ಕೆ ಭಕ್ತರಿಗಾಗಿ ಬಾಗಿಲು ತೆರೆಯಲಿದೆ.
ಬಂಡೆ ಮಹಾಕಾಳಿ ದೇವಾಲಯ
ಇಲ್ಲಿ ಗ್ರಹಣದ ಅವಧಿಯಲ್ಲೂ ದೇವಾಲಯ ತೆರೆದಿರುತ್ತದೆ. ಈ ಸಮಯದಲ್ಲಿ ದೇವಿಗೆ ತುಪ್ಪದ ಲೇಪನ ಮಾಡಿ ವಿಶೇಷ ಹೋಮ ನಡೆಸಲಾಗುವುದು. ಭಕ್ತರಿಗೆ ದರ್ಶನಕ್ಕೆ ಮುಕ್ತ ಅವಕಾಶವಿದೆ.
ಬನಶಂಕರಿ ದೇವಾಲಯ
ಗ್ರಹಣದ ಹಿನ್ನೆಲೆಯಲ್ಲಿ ಯಾವುದೇ ವಿಶೇಷ ಪೂಜೆಗಳಿರುವುದಿಲ್ಲ. ಸಂಜೆ 7 ಗಂಟೆಯ ನಂತರವಷ್ಟೇ ನಿತ್ಯ ಪೂಜೆಗಳು ಪುನಾರಂಭಗೊಳ್ಳಲಿವೆ.
ಗವಿ ಗಂಗಾಧರೇಶ್ವರ ದೇವಾಲಯ
ಬೆಳಿಗ್ಗೆ 9 ಗಂಟೆಗೆ ದೇಗುಲದ ಬಾಗಿಲು ಮುಚ್ಚಲಾಗುವುದು. ಸಂಜೆ 7.45ರ ನಂತರ ದರ್ಶನಕ್ಕೆ ಅವಕಾಶವಿದ್ದು, ಮಾರ್ಚ್ 4ರಂದು ‘ಗ್ರಹಣ ಶಾಂತಿ ಹೋಮ’ ನಡೆಯಲಿದೆ.
ಕಾಡುಮಲ್ಲೇಶ್ವರ ದೇವಾಲಯ
ಬೆಳಿಗ್ಗೆ 11 ಗಂಟೆಗೆ ಬಾಗಿಲು ಮುಚ್ಚಲಿದ್ದು, ರಾತ್ರಿ 7.30ಕ್ಕೆ ಪುನಃ ತೆರೆಯಲಾಗುವುದು. ಮರುದಿನ ನವಗ್ರಹ ಶಾಂತಿ ಹೋಮ ಆಯೋಜಿಸಲಾಗಿದೆ.
ರಾಜ್ಯದ ಇತರ ಪ್ರಮುಖ ಕ್ಷೇತ್ರಗಳ ಮಾಹಿತಿ:
ಶ್ರೀ ಕ್ಷೇತ್ರ ಧರ್ಮಸ್ಥಳ
ದಕ್ಷಿಣ ಕನ್ನಡದ ಪ್ರಸಿದ್ಧ ಕ್ಷೇತ್ರ ಧರ್ಮಸ್ಥಳದಲ್ಲಿ ಮಾರ್ಚ್ 3ರ ಮಂಗಳವಾರ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.
ಬೆಳಿಗ್ಗೆ: 6.30 ರಿಂದ ಮಧ್ಯಾಹ್ನ 1.30 ರವರೆಗೆ ಮಾತ್ರ ದರ್ಶನಕ್ಕೆ ಅವಕಾಶ. ಮಧ್ಯಾಹ್ನ: 1.30 ರಿಂದ ಸಂಜೆಯವರೆಗೆ ದರ್ಶನ ಸ್ಥಗಿತ. ರಾತ್ರಿ: 7.30 ಗಂಟೆಯ ನಂತರ ಎಂದಿನಂತೆ ದರ್ಶನ ಲಭ್ಯವಿರುತ್ತದೆ.
ಚಾಮುಂಡೇಶ್ವರಿ ದೇವಾಲಯ, ಮೈಸೂರು
ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8.30ರವರೆಗೆ ಭಕ್ತರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಗ್ರಹಣದ ನಂತರ ಗರ್ಭಗುಡಿ ಶುದ್ಧೀಕರಣ ಕಾರ್ಯಗಳು ನೆರವೇರಲಿವೆ.

ನೋಡಿರಿ

